Sunday, May 24, 2009

ಸುಲೋಕಸಭೆ

(‘ಕೆಂಡಸಂಪಿಗೆ’ ಯಲ್ಲಿ ಪ್ರಕಟವಾಗಿದ್ದು)
ಮಳೆ ನೆಗಸು ಜಡಿದು ನಿಂತಂತಿದೆ. ಎದುರುಗಡೆ ಏನಿದೆ ಎಂಬುದು ನಿಚ್ಚಳವಾಗಿ ಕಾಣತೊಡಗಿದೆ. ಯಾವುದೇ ಗೊಂದಲಗಳಿಲ್ಲ. ಕೊನೆಗೂ ಭಾರತೀಯ ಮತದಾರ ಎಚ್ಚೆತ್ತುಕೊಂಡಿದ್ದಾನೆ ಎಂಬುದೇ ಸಮಾಧಾನಕರ ಸಂಗತಿ. ಫಲಿತಾಂಶದ ನಂತರದ ರಾಜಕೀಯ ಹಾದರಗಳಿಗೆ ಈ ಸಲ ಅವಕಾಶ ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ಕಾಂಗ್ರೆಸ್ 200ಕ್ಕೂ ಹೆಚ್ಚು, ಮತ್ತು ಭಾಜಪ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿರುವುದನ್ನು ಗಮನಿಸಿದರೆ. ಕ್ರಮೇಣ ರಾಷ್ಟ್ರೀಯ ಪಕ್ಷಗಳ ವ್ಯವಸ್ಥೆಯೆಡೆಗೇ ಮತ್ತೆ ಮತದಾರ ಒಲವು ತೋರುತ್ತಿದ್ದಾನೆ ಅನ್ನಿಸುತ್ತಿದೆ. ಒಳ್ಳೆಯ ಬೆಳವಣಿಗೆಯೇ ಸರಿ. ಆಳುವವರಿಗೆ ಮದವೇರುವಷ್ಟು ಸಂಖ್ಯಾಬಲವೂ ಇಲ್ಲ. ವಿರೋಧಿಗಳದ್ದು ತೀರ ಕಡಿಮೆ ಎನ್ನುವ ಸಂಖ್ಯೆಯೂ ಅಲ್ಲ. ಯಾರು ಗೆದ್ದರು ಯಾರು ಸೋತರು ಎಂಬುದನ್ನುಒಮ್ಮೆ ಬದಿಗಿರಿಸಿ ನೋಡಿದರೆ ಒಂದರ್ಥದಲ್ಲಿ ಇದು ಸಮತೋಲಿತ ಸುಲೋಕಸಭೆ.
ತೃತೀಯರಂಗ, ಚತುರ್ಥರಂಗ ಎಂಬ ಅವಕಾಶವಾದಿಗಳಿಗೆ ಈ ಸಲ ಮರ್ಮಕ್ಕೇ ಏಟು ಬಿದ್ದಿದೆ. ಹೌದು ಇವರನ್ನು ಅವಕಾಶವಾದಿಗಳೆನ್ನದೇ ಬೇರೆ ಹಾದಿ ಇಲ್ಲ. ಅತಂತ್ರ ಲೋಕಸಭೆ ಎಂಬುದು ಇವರು ನಿರಂತರ ಬಯಸುವ ಭಾಗ್ಯ. ಸೆಕ್ಯುಲರ್ ಎಂಬುದು ಇವರಿಗೆ ಅಂಗಿ ಇದ್ದಂತೆ. ತೊಟ್ಟರೆ ಸಮನ್ವಯಿ, ಕಳಚಿದರೆ ಸನಾತನಿ. (ನಮ್ಮ)ರಾಜ್ಯದಲ್ಲಿ ಜಾತಿ ರಾಜಕಾರಣವನ್ನೇ ಮಾಡಿಕೊಂಡಿದ್ದ ಜಾತ್ಯತೀತರಿಗೆ ಇನ್ನೈದು ವರ್ಷ ಅಂತಹ ಕೆಲಸವಿಲ್ಲ. ದೆಹಲಿಯಲ್ಲಿ ಇವರನ್ನು ಕೇಳುವವರು ಯಾರೂ ಇಲ್ಲ. ಇಲ್ಲಿ ಮೊದಲೇ ಕೆಲಸ ಕಳೆದುಕೊಂಡಾಗಿದೆ. ಅದರೂ ಛಲದಂಕಮಲ್ಲ ಹಿರಿಗೌಡರು ಶಕ್ತಿಮೀರಿ ವಶೀಲಿಬಾಜಿ, ಚೌಕಾಶಿ ನೆಡೆಸುತ್ತಾರೆ. ರಜ್ಯದಲ್ಲಿ ಗೆದ್ದ ಕಾಂಗ್ರೆಸ್ಸಿಗರನ್ನೇ ಕಡೆಗಣಿಸಿ, ಕುಮಾರಸ್ವಾಮಿಗೆ ಕೇಂದ್ರ ಮಂತ್ರಿಗಿರಿ ಕೊಡಮಾಡಿದರೆ, ಮುಳುಗುವ ಹಡಗು ಪೂರ್ತಿ ಮುಳುಗಿದಂತೆ ಲೆಖ್ಖ. ಲಾಲೂ, ಪಾಸ್ವಾನ್ ಸ್ಥಿತಿ ಇನ್ನೂ ಶೋಚನೀಯ. ಸದ್ಯಕ್ಕೆ ಅವರಿಗೆ ಚೇತರಿಕೆ ಇಲ್ಲ. ಎಡಪಂಥೀಯರಂತೂ ಬಂಗಾಳ, ಕೇರಳಗಳಲ್ಲೇ ಅಸ್ತಿತ್ವ ಕಳೆದುಕೊಂಡು ನಿರುದ್ಯೋಗಿ ಕಾಮ್ರೇಡ್ ಗಳಾಗಿದ್ದಾರೆ. ಕೇಂದ್ರದಲ್ಲಿ ಯಾವ ಸರ್ಕಾರವಿದ್ದರೂ ನಿಂತಲ್ಲಿ ಕೂತಲ್ಲಿ ಕಾಡುತ್ತಿದ್ದ ಚಿಲ್ಲರೆ ಸಮಯಸಾಧಕರು ಈ ಬಾರಿ ಬೇಡಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ತೃತೀಯ, ಚತುರ್ಥರಿಗೆ ಇನ್ನು ಕೆಲವರ್ಷ ರಿಸೆಶನ್. ಅಷ್ಟರಮಟ್ಟಿಗೆ ಈ ದೇಶ ಬಚಾವಾಗಿದೆ.
ಬಹುಮತ ತಲುಪಲು ಕೇವಲ ಬೆರಳೆಣಿಕೆಯ ಸೀಟುಗಳ ಅಗತ್ಯವಿರುವ ಯುಪಿಎ ಅತ್ಯಂತ ಸುಲಭವಾಗಿ ಸರ್ಕಾರ ರಚಿಸುವುದು ಮತ್ತು ಮನಮೋಹನ ಸಿಂಗ್ ಪ್ರಧಾನಿಯಾಗುವುದು ಖಚಿತವಾಗಿದೆ. ಈ ಬಾರಿ ಯುಪಿಎ, ಬಿಹಾರದಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ನೀತೀಶ್ ರನ್ನು ತಮ್ಮ ಹೊಸ ಸಾಥಿಯನ್ನಾಗಿ ಮಾಡಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಮಮತಾ, ಜಯಾ, ಕರುಣಾನಿಧಿ, ಮುಲಾಯಂ ಇವರುಗಳ ಹಳೇ ಚಾಳಿಯನ್ನು ಬಲ್ಲ ಕಾಂಗ್ರೆಸ್ಸಿಗೆ ನಿತೀಶ್ ಮತ್ತು ಓರಿಸ್ಸಾದ ನವೀನ್ ಪಟ್ನಾಯಕ್ ಜಂಟಲ್ ಮನ್ ಗಳಂತೆ ಕಂಡರೆ ಆಶ್ಚರ್ಯವಿಲ್ಲ.
ಎನ್ ಡಿ ಎ ಕಳೆದುಕೊಂಡಿದ್ದೆಷ್ಟು? ಯುಪಿಎ ಗಳಿಸಿದ್ದೆಷ್ಟು? ಕಾರಣಗಳು ಮತ್ತು ಅಂಕಿ ಅಂಶಗಳು ಬಹಳ ಆಸಕ್ತಿದಾಯಕವಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಬಾರಿಗಿಂತ ಎನ್ ಡಿಎ ಸುಮಾರು 20 ಸೀಟು ಕಡಿಮೆ ಗಳಿಸಿದೆ. ಅಂದರೆ ತೀರ ಕಳಪೆ ಸಾಧನೆಯೇನಲ್ಲ. ಆದರೆ ಯುಪಿಎ ಅದರಲ್ಲೂ ಕಾಂಗ್ರೆಸ್, ತೃತೀಯ ಮತ್ತು ಚತುರ್ಥ ರಂಗಗಳಿಂದ ಮತ್ತು ಕೆಲರಾಜ್ಯಗಳಲ್ಲಿ ಮಾತ್ರ ಭಾಜಪದಿಂದ ಗಣನೀಯವಾಗಿ ಮತಗಳನ್ನು ಕಸಿದಿದೆ. (ಕಳೆದ ಬಾರಿ , ಯುಪಿಎ: 218, ಎನ್ ಡಿ ಎ: 181 ಈ ಬಾರಿ, ಯುಪಿಎ : 262, ಎನ್ ಡಿ ಎ:160 ) ಬಹಳ ಸದ್ದು ಮಾಡಿದ್ದ ಮಾಜಿ ಸೂಪರ್ ಸ್ಟಾರ್ ಚಿರಂಜೀವಿ ದೊಡ್ಡ ಯಶಸ್ಸುಗಳಿಸದಿರುವುದು ದಕ್ಷಿಣಭಾರತದಲ್ಲಿ ಸಿನಿಮಾ ಮಂದಿಯ ಕ್ರೇಜ್ ಕಡಿಮೆ ಆಗತೊಡಗಿದ್ದರ ಸಂಕೇತ. ಮತದಾರ ಚುನಾವಣೆಯಿಂದ ಚುನಾವಣೆಗೆ ಪ್ರಬುದ್ಧನಾಗುತ್ತಿರುವುದು ನಿಚ್ಚಳ.
ಸೋಲು ಗೆಲುವುಗಳ ಹಿನ್ನೆಲೆಯನ್ನು ಕೊಂಚ ಗಮನಿಸೋಣ. 90ರ ದಶಕದಲ್ಲಿ ದೇಶದಲ್ಲಿ ಭಾಜಪದ ಅಲೆಯೊಂದು ಎದ್ದಿದ್ದನ್ನು ನೆನಪು ಮಾಡಿಕೊಳ್ಳಿ, ಅಗಲೇ ವಾಜಪೇಯಿ, ಅಡ್ವಾಣಿ ಸಾಕಷ್ಟು ವೃದ್ಧರಾಗಿದ್ದರೂ ಅವರ ಸಮರ್ಥ ನಾಯಕತ್ವದ ಬಗ್ಗೆ ಜನತೆಗೆ ಸಂಶಯಗಳಿರಲಿಲ್ಲ. ಜೊತೆಗೆ ಪ್ರಮೋದ್ ಮಹಾಜನ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿಯಂತಹವರ ಯುವ ಪಡೆಯನ್ನು ಜನ ಭರವಸೆಯ ಕಣ್ಣುಗಳಿಂದ ನೋಡಿದ್ದರು. ಆಗ ಭಾಜಪ ಯುವನಾಯಕರ ಪಕ್ಷವಾಗಿತ್ತು. ಕಾಂಗ್ರೆಸ್ ಮುದುಕರ ಪಕ್ಷವೆಂದು ಟೀಕೆಗೊಳಗಾಗಲ್ಪಟ್ಟಿತ್ತು. ಈಗ ಈ ವಿಷಯ ಪ್ರಸ್ತಾಪಿಸುವುದು ಈಗ ಏಕೆ ಮುಖ್ಯವಾಗುತ್ತದೆ ಎಂದರೆ, ಮೇಲೆ ಹೇಳಿದ ಭಾಜಪದ ನಾಯಕರೆಲ್ಲ ಮುದುಕರಾಗುತ್ತಿದ್ದಾರೆ. ಭರವಸೆಯ ಮುಂದಿನ ಪೀಳಿಗೆಯ ನಾಯಕರುಗಳೇ ಕಾಣುತ್ತಿಲ್ಲ. ಅದೇ ಕಾಂಗ್ರೆಸ್ ನೆಡೆಗೆ ನೋಡಿ, ಒಂದು ಆಕರ್ಷಕ ಯುವ ಪಡೆಯನ್ನೇ ನಿರ್ಮಿಸಿಕೊಂಡಿದೆ. ರಾಹುಲ್ ಗಾಂಧಿ, ಸಚಿನ್ ಪೈಲಟ್, ಮಿಲಿಂದ್ , ಜ್ಯೋತಿರಾದಿತ್ಯ ಸಿಂಧ್ಯಾ, ಕೃಷ್ಣ ಭೈರೆ ಗೌಡ ರಂತಹ ಭರವಸೆಯ ಯುವಮುಖಗಳು ಕಾಂಗ್ರೆಸ್ ಗೆ ಹೊಸ ರೂಪವನ್ನು ಕೊಟ್ಟಿವೆ. ಕೃಷ್ಣ ಭೈರೆಗೌಡ ಸೋತಿದ್ದಾರೆ ನಿಜ ಆದರೆ ಅವರು ಬೆಳೆಯುತ್ತಿರುವ ವೇಗ ನೋಡಿದರೆ ಒಂದಿಲ್ಲೊಂದು ದಿನ ಈತ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನಿಸದೇ ಇರಲಾರದು.
ಭಾಜಪ ವ್ಯಾಪಾರಸ್ತರ, ನೌಕರಸ್ತರ, ನಗರಜೀವಿಗಳ, ಮೆಲ್ವರ್ಗದವರ ಪಕ್ಷ ಎಂಬ ಸಾರ್ವರ್ತ್ರಿಕ ಅಭಿಪ್ರಾಯದಲ್ಲಿ ಸತ್ಯಾಂಶವಿದ್ದರೆ ಈ ಬಾರಿ ಭಾಜಪದ ವೈಫಲ್ಯಕ್ಕೆ ಇದೂ ಒಂದು ಮುಖ್ಯ ಕಾರಣವಾಗಿರಬಹುದಾಗಿದೆ. ಈ ಬಾರಿ ಕೇವಲ ಶೇ. 53 ಮತದಾನವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಚುನಾವಣೆಯ ಮಾರನೇ ದಿನವೇ ಅಡ್ವಾಣಿ ನೀಡಿದ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ಅಡ್ವಾಣಿ ಆಗಲೇ ಪೇಲವ ವದನರಾಗಿದ್ದರು. ‘ಈ ದೇಶದಲ್ಲಿ ಮತದಾನವನ್ನು ಹೇಗಾದರೂ ಮಾಡಿ ಕಡ್ಡಾಯ ಮಾಡಬೇಕು’ ಎಂಬ ಅವರ ಹೇಳಿಕೆಯ ಹಿಂದೆ ಗಾಢ ಆತಂಕ ಅಡಗಿತ್ತು. ಮತದಾನ ಮಾಡದೇ ಹೊಟೇಲು, ಸಿನಿಮಾ, ಪಿಕ್ ನಿಕ್ ಗಳಲ್ಲಿ ಕಾಲಕಳೆದ ವರ್ಗ ಯಾವುದೆಂಬುದು ಅವರಿಗೆ ಅರ್ಥವಾಗಿಹೋಗಿತ್ತು.
ಭಾಜಪದ ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಅವರ ಬಳಿ ಹೊಸ ಅಸ್ತ್ರ ಇಲ್ಲದಿರುವುದು. ಹಿಂದುತ್ವ ಹಪ್ಪು ಹಳಸಲಾಗಿ ಇವರ ಬಾಯಿಗಳೆಲ್ಲ ವಾಸನೆ ಹೊಡೆಯಲಾರಂಭಿಸಿದ್ದವು. ವರುಣ್ ಗಾಂಧಿಯ ಎಡವಟ್ಟು ಹೇಳಿಕೆಯನ್ನು ಸಮರ್ಥಿಸಿದ್ದು ಭಾಜಪದ ಖಾಯಂ ಮತದಾರನನ್ನೂ ಮತ್ತೊಮ್ಮೆ ಯೋಚಿಸುವಂತೆ ಮಾಡಿದಂತೆ ಕಾಣುತ್ತದೆ. ’ಭಯೋತ್ಪಾದನೆ’ ಯ ಕುರಿತಾದ ಬೊಬ್ಬೆಯೂ ಓಟುಗಳಾಗಿ ಪರಿವರ್ತನೆಯಾಗಲಿಲ್ಲ. ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ರಂತಹ ಪ್ರಚಂಡ ಮೇಧಾವಿಗಳು ರಚಿಸಿದ ವ್ಯೂಹಗಳೂ ಪರಿಣಾಮಕಾರಿಯಾಗಲಿಲ್ಲ. ರಾಜಸ್ಥಾನ, ಮಧ್ಯಪ್ರದೇಶ, ಓರಿಸ್ಸಾಗಳಲ್ಲಿ ಭಾಜಪ ಅನಿರೀಕ್ಷಿತವಾದ ಮತ್ತು ಬಲವಾದ ಪೆಟ್ಟು ತಿಂದಿದೆ. ಸರಿಹೊತ್ತಿನಲ್ಲಿ ಜೇಟ್ಲಿ ಮತ್ತು ಪಕ್ಷಾಧ್ಯಕ್ಷ ರಾಜನಾಥರ ನಡುವಿನ ಕಲಹವೂ ಭಾಜಪದ ವಿರುದ್ಧ ಕೆಲಸಮಾಡಿದೆ. ಹಾಗಾಗಿ ಸದರಿ ಚುನಾವಣೆಯಿಂದ ಭಾಜಪ ಕಲಿಯುವುದು ಬಹಳಷ್ಟಿದೆ. ಒಂದು ಪಕ್ಷವಾಗಿ ಅದರ ಸಾಧನೆ ನಗಣ್ಯವಲ್ಲದಿದ್ದರೂ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭಾಜಪದ ಸ್ಥಿತಿ ಇನ್ನೂ ಸಂಕೀರ್ಣವಾಗುತ್ತಾ ಹೋಗುತ್ತದೆ. ಈ ಬಾರಿ ಕಾಲೆಳೆಯುವವರ ಕಾಟವಿಲ್ಲದ ಕಾರಣ ಯುಪಿಯೆ ಒಳ್ಳೆಯ ಆಡಳಿತ ಕೊಡುವ ಸಾಧ್ಯತೆಗಳಿವೆ. ದೇಶದ ಭದ್ರತೆಯ ವಿಷಯವನ್ನು ಎಂದಿನಂತೆ ಅಲಕ್ಷಿಸಲಾರರೆಂದು ಆಶಿಸೋಣ. ಈಗಾಗಲೇ ‘ಯೂತ್’ ಮಂತ್ರ ಪ್ರಾರಂಭಿಸಿರುವ ಕಾಂಗ್ರೆಸ್ ತನ್ನ ಯುವ ಪಡೆಯನ್ನು ಕ್ರಮೇಣ ಇನ್ನಷ್ಟು ಬಲಿಷ್ಟಗೊಳಿಸಲಿದೆ. ರಾಹುಲ್ ಗಾಂಧಿ ದಿನದಿಂದ ದಿನಕ್ಕೆ ಪ್ರಬುದ್ಧರಾಗುತ್ತಿದ್ದಾರೆ.ಅಥವಾ ಹಾಗೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.(ಕೆಲಸ ಮಾಡುತ್ತಾರೋ ಕಾದು ನೋಡಬೇಕು). ಸಂಪುಟದಲ್ಲಿ ಮಾಧ್ಯಮಗಳಿಗೆ ನಿರಂತರ ಸಂಪರ್ಕವಿರುವ ಸಚಿವ ಸ್ಥಾನವೊಂದನ್ನು ಅವರಿಗೆ ಕೊಡಮಾಡಲಾಗುತ್ತದೆ. ಒಂದೆರಡು ವರ್ಷಗಳಲ್ಲೇ ಅರೋಗ್ಯದ್ದೋ, ವಯಸ್ಸಿನದೋ ಕಾರಣ ಹೇಳಿ ಮನಮೋಹನ್ ಸಿಂಗ್ ನೇಪಥ್ಯಕ್ಕೆ ಸರಿದು ರಾಹುಲ್ ಗಾಂಧಿ ಪ್ರಧಾನಿಯಾದರೆ ಆಶ್ಚರ್ಯವೇನಿಲ್ಲ. ಮತ್ತೊಮ್ಮೆ ನೆಹರು ಕುಟುಂಬದ ನೇರ ಆಳ್ವಿಕೆಗೆ ನಾವು ಒಳಗಾಗಲಿದ್ದೇವೆ. 10, ಜನಪಥ ನಿವಾಸ ಮತ್ತೂ ಪ್ರಬಲವಾಗಲಿದೆ. ದೇಶವನ್ನು ಸಮರ್ಥವಾಗಿ ಮುನ್ನೆಡೆಸುವುದಾದರೆ ನಮಗೆ ಯಾರಾದರೇನು ಅಲ್ಲವೇ?
ಒಟ್ಟಿನಲ್ಲಿ, ಪುರಾತನ ಕಾಂಗ್ರಸ್ಸಿಗೆ ಪರ್ಯಾಯ ಪಕ್ಷವೊಂದನ್ನು ಗಟ್ಟಿಮಾಡುವ ಪ್ರಯತ್ನಕ್ಕೆ ಎಂದಿನಂತೆ ಹಿನ್ನಡೆಯಾಗಿದ್ದಂತೂ ನಿಜ. ಪರ್ಯಾಯವಾಗಬಹುದಾಗಿದ್ದ ಭಾಜಪ ತನ್ನದೇ ತಪ್ಪುಗಳಿಂದ ಪರ್ಯಾಯವಾಗಿ ಕಾಂಗ್ರೆಸ್ಸನ್ನು ಬೆಳೆಯಗೊಟ್ಟಿದ್ದು ವಿಪರ್ಯಾಸ. ಭಾಜಪದ ’ಥಿಂಕ್ ಟ್ಯಾಂಕ್” ನ ಮುಂದೆ ಅತ್ಯಂತ ಜಟಿಲವಾದ ಸವಾಲುಗಳಿವೆ.ಆಡ್ವಾಣಿ ನಂತರದ ಸಮರ್ಥ ನಾಯಕತ್ವದ ಪ್ರಶ್ನೆ ಬೃಹತ್ತಾಗಿದೆ. ಪಕ್ಷದಲ್ಲಿ ತರುಣರನ್ನು ಬೆಳೆಸಬೇಕಾಗಿದೆ, ತರಬೇತುಗೊಳಿಸಬೇಕಾಗಿದೆ. ಅದಕ್ಕೂ ಮುಖ್ಯವಾಗಿ, ಬ್ಲಾಗುಗಳಲ್ಲಿ, ಇಂಟರ್ ನೆಟ್ ಚರ್ಚೆಗಳಲ್ಲಿ, ಆಫೀಸುಗಳಲ್ಲಿ ಓತಪ್ರೋತವಾಗಿ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡಿ ದಣಿಯುವ ಮಾನಸಿಕ ಬಿಜೆಪಿಗಳನ್ನು ಹೇಗಾದರೂ ಮತಗಟ್ಟೆಗೆ ಕರೆತರಬೇಕಾಗಿದೆ. ಪಕ್ಷಕ್ಕೆ ಹೊಸರೂಪ ಕೊಟ್ಟು ಹೊಸ ಆದ್ಯತೆಗಳೊಂದಿಗೆ ಜನತೆಯ ಮುಂದೆ ಹೋಗಲು ಸಿದ್ಧಗೊಳಿಸುವುದಕ್ಕೆ ಅವರ ಬಳಿ ಇನ್ನು ಐದು ವರ್ಷಗಳ ದೀರ್ಘ ಅವಧಿಯಿದೆ. ಅಲ್ಲಿಯವರೆಗೆ (ಬಹುಶಃ) ಸಿಂಗ್ ಇಸ್ ಕಿಂಗ್ ಹೈ!
-ಚಿನ್ಮಯ ಭಟ್

Friday, May 15, 2009

ರಿಸೆಶನ್ ವಿಷಘಳಿಗೆಯೂ ಮತ್ತು ಟೆಕ್ಕಿಗಳ ಬವಣೆಯೂ....

(ಇತ್ತೀಚಿಗೆ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)
ಪ್ರತಿ ಆರೇಳು ವರ್ಷಗಳಿಗೊಮ್ಮೆ ರಿಸೆಶನ್ ಗುಮ್ಮ ಬರುವುದಂತೂ ಖಾತ್ರಿಯಾಯಿತು. ಖಾತ್ರಿ ಇಲ್ಲದ್ದು ನಮ್ಮ ಉದ್ಯೋಗಗಳಷ್ಟೆ. ಇದು ಎಲ್ಲಿಂದ ಬರುತ್ತದೆ ಮತ್ತೆ ಹೇಗೆ ಹೋಗುತ್ತದೆ ಎಂಬುದರ ಬಗ್ಗೆ ನಿಖರ ವಿವರಗಳಿಲ್ಲ. ಭಾನಗಡಿ ಆದಮೇಲೆ ಗಂಟೆಗಟ್ಟಲೇ ಕೊರೆಯುವ ಆರ್ಥಿಕ ವಿಶ್ಲೇಷಕರ ಮಾತುಗಳು ವಿಶ್ವಾಸ ಮೂಡಿಸುವುದಿಲ್ಲ. ಜ್ಯೋತಿಷಿಗಳ ಭಾನುವಾರದ ಭವಿಷ್ಯಕ್ಕೂ ಇವರ ಮಾತುಗಳಿಗೂ ಅಂತಹ ವ್ಯತ್ಯಾಸ ತೋರುವುದಿಲ್ಲ. ಕೆಲವರ ಪ್ರಕಾರ ನಾವು ಆಗಲೇ ತಳ ತಲುಪಿಯಾಗಿದೆ. ಇನ್ನೇನಿದ್ದರೂ ಮೇಲಕ್ಕೇರುವುದು ಮಾತ್ರ. ಇನ್ನು ಕೆಲವರ ಪ್ರಕಾರ ಇದಿನ್ನೂ ಪ್ರಾರಂಭ, ತಳ ಇನ್ನೂ ಬಾಕಿ ಇದೆ. ಅವರವರ ಭಾವಕ್ಕೆ ಅವರವರ ಬಾವಿ.
ಗಜ ಗಾತ್ರದ ಉದ್ಯೋಗಿಗಳ ಸೇನೆ ಹೊಂದಿದ್ದ ಕಂಪನಿಗಳ ‘ಡಯಟಿಂಗ್ ’ ಪ್ರಾರಂಭವಾಗಿದೆ. ಇವರೂ VLCC ಯಂತೆ before – after ಬೋರ್ಡ್ ಹಾಕಿಕೊಳ್ಳಬೇಕಾಗಬಹುದು. ದೊಡ್ಡ ಸಂಸ್ಥೆಗಳಲ್ಲಿ, ‘’people have to sacrifice’’ ಎಂಬಂತಹ ನುಣ್ಣನೆಯ, ಕುತ್ತಿಗೆ ಕೊಯ್ಯುವ ಸಂದೇಶಗಳು ಉದ್ಯೋಗಿಗಳಿಗೆ ತಲುಪಲಾರಂಭಿಸಿವೆ. ಉದ್ಯೋಗಿಗಳಲ್ಲಿ ಪರಸ್ಪರ ಅಪನಂಬಿಕೆ, ಅಸೂಯೆ ಏರ್ಪಡುವ ನಂಜಿನ ಕಾಲ ಈ ರಿಸೆಶನ್ ಅವಧಿ. ಹಿರಿಯಣ್ಣ – ಗಿರಿಯಣ್ಣ – ಕಿರಿಯಣ್ಣ ಎಂಬ ಭೇದ ವಿಲ್ಲದೇ ಎಲ್ಲರಿಗೂ ‘ಶಿಕಾರಿ’ ಯಾಗುವ ವಿಚಿತ್ರ ಭಯ. ಎಲ್ಲ ಕಂಪನಿಗಳಲ್ಲಿಯೂ low performers ಎಂಬ ಮಿಕಗಳನ್ನು ಬೀಳಿಸುವ ನಾಟಕ. ನಿಜಕ್ಕೂ ಈ ಸಂದರ್ಭದಲ್ಲಿ ಅಗತ್ಯವಿದ್ದ Team building ನಂತಹ ಚಟುವಟಿಕೆಗಳಿಗೆ ಕಂಪನಿಗಳಲ್ಲಿ ಈಗ ಬಜೆಟ್ ಇಲ್ಲ. ಜಗತ್ತಿನೆಲ್ಲೆಡೆ ಒಂದು ಬಗೆಯ ಖಿನ್ನತೆ ಆವರಿಸಿದೆ. ಬಹುಶಃ ಈಗ ಒಳ್ಳೆಯ ಆದಾಯವಿರುವುದು ಆಸ್ಪತ್ರೆಗಳಿಗೆ ಮಾತ್ರವೇನೊ. ಆಟೋಮೋಟಿವ್ ಕ್ಷೇತ್ರದಲ್ಲಿರುವ ನನಗೆ ದಿನ ಬೆಳಿಗ್ಗೆ ಎದ್ದು ಇವತ್ತು ಯಾವ ಕಾರು ಕಂಪನಿಯ ಯಾವ ಶಾಖೆ ಮುಳುಗಿತು ಎಂಬುದನ್ನು ನೋಡುವುದೇ ಕೆಲಸವಾಗಿದೆ. ಮೊನ್ನೆ ಕಂಪನಿಯ ರಿಸೆಪ್ಶನ್ ಹಾದು ಹೋಗುತ್ತಿದ್ದೆ. ಪರ್ಚೇಸ್ ಡಿಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವ ಯುವತಿಯೊಬ್ಬರು ಅಲ್ಲಿ ನಿಂತಿದ್ದರು. ನಾನು ಸಹಜವಾಗಿ ಆಕೆಯ ಬಳಿ ನೆಡೆದು ಮಾತನಾಡಿಸಿದೆ. ಅವಳು “ನಾನು ಕೆಲಸ ಕಳೆದುಕೊಂಡಿದ್ದೇನೆ, ಇಂದು ನನ್ನ ಕಡೆಯ ದಿನ” ಎಂದಳು. ಆ ಕ್ಷಣಕ್ಕೆ ನನ್ನಲ್ಲಿ ಹತ್ತಾರು ಭಾವನೆಗಳು ಮೂಡಿ ಮರೆಯಾದವು. ನಿಮ್ಮಂತವರು ನಮ್ಮ ದೇಶಕ್ಕೆ ಬಂದು ನಮ್ಮ ಕೆಲಸ ಕದಿಯುತ್ತಿದ್ದೀರಿ ಎಂದು ಆಕೆ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿರಬಹುದೆನ್ನಿಸಿತು. ಹೀಗೆ ಕೆಲಸ ಕಳೆದುಕೊಂಡವರ ಬಳಿ ಮಾತನಾಡುತ್ತಾ ನಿಲ್ಲುವುದು ಸುರಕ್ಷಿತ ಅಲ್ಲವೇನೊ ಎಂದು ಕೂಡ ಅನ್ನಿಸಿದ್ದನ್ನು ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಾಚಿಕೆಯೂ ಆಗುತ್ತದೆ. ಈ ಬಾರಿ ರಿಸೆಶನ್ ನಲ್ಲಿ ಕಾರು ತಯಾರಕರ ಸಂಸ್ಥೆಗಳು ಬಲವಾದ ಪೆಟ್ಟು ತಿಂದಿವೆ. ಸರಕಾರಗಳ ಕೊಡುತ್ತಿರುವ ಪಾರುಗಾಣಿಕೆಯ ಪ್ಯಾಕೇಜ್ ಗಳಿಂದ ಕೆಲ ತಿಂಗಳುಗಳ ಕಾಲ ಸಂಬಳ ಕೊಡಬಹುದಷ್ಟೆ. ಮುಂದೇನು? ಮಾಡಿಟ್ಟ ಕಾರುಗನ್ನೇ ಕೊಳ್ಳುವವರಿಲ್ಲದಿರುವಾಗ ಇವರು ಹೊಸ ಉತ್ಪಾದನೆ ಯಾಕಾಗಿ ಮಾಡಿಯಾರು? ಈ ಕೊಳ್ಳುವವನ ಕೈ ಬಲ ಪಡಿಸುವವರು ಯಾರು? ಸದ್ಯಕ್ಕೆ ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳು.
ಬರಾಕ್ ಒಬಾಮ, ಗಾರ್ಡನ್ ಬ್ರೌನ್ ಮುಂತಾದವರು ಸ್ವದೇಶಿ ಮಂತ್ರ ಆರಂಭಿಸಿದ್ದಾರೆ. ಅಮೆರಿಕಾದ ಹೆಚ್ ಒನ್ ಬಿ ವಿಸಾ, ಬ್ರಿಟನ್ ನ ಟೈರ್ ಒನ್ ವಿಸಾಗಳಲ್ಲಿ ಇತ್ತೀಚೆಗೆ ಅಳವಡಿಸಲಾಗುತ್ತಿರುವ ಕಠಿಣ ಷರತ್ತುಗಳು ಹೊರಗಿನವರು ಅದರಲ್ಲೂ ಭಾರತೀಯ ತಂತ್ರಜ್ಞರು ವಲಸೆ ಬರುವುದನ್ನು ತಡೆಯಲೆಂದೇ ರೂಪುಗೊಂಡಂತಿವೆ. ನಮ್ಮ ನೆಲದ ಉದ್ಯೋಗಗಳಲ್ಲಿ ಪಕ್ಕದ ತಮಿಳರನ್ನು ಸಹಿಸಲಾಗದ ನಮಗೆ ಇವರ ಕ್ರಮವನ್ನು ವಿಮರ್ಶಿಸಲು ನೈತಿಕತೆ ಸಾಲುವುದಿಲ್ಲ. ಬ್ರಿಟನ್, ಅಮೇರಿಕಾಗಳಲ್ಲಿ, ಕೆಲಸ ಕಳೆದುಕೊಂಡ ಸಂತ್ರಸ್ತರನ್ನು ಬೀದಿಗೆ ಬೀಳದಂತೆ ತಡೆಯಲು ಸರಕಾರದಿಂದ ತಕ್ಕ ಮಟ್ಟಿನ ಹಣಕಾಸಾದರೂ ಸಿಗುತ್ತದೆ. ಅವೆಲ್ಲಕ್ಕಿಂತ ಮುಖ್ಯ ಈ ದೇಶಗಳಲ್ಲಿ dignity of labour ಇಲ್ಲದಿರುವುದು. ಬಹುಶಃ ಇದು ಚಾರ್ವಾಕ ಸಂಸ್ಕೃತಿಯ ಒಳ್ಳೆಯ ಅಂಶಗಳಲ್ಲಿ ಪ್ರಮುಖವಾದದ್ದು ಅನ್ನಿಸುತ್ತದೆ. ನಮ್ಮಲ್ಲಿ ಕೆಲಸ ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್ ದಿನಸಿ ಅಂಗಡಿ ನೆಡೆಸುವ ವಾತಾವರಣ ಉಂಟೇ?

ಸಾಫ್ಟ್ ವೇರ್ ವಿಚಾರ ಏಕೆ ಪ್ರಸ್ತಾಪ ಮಾಡಿದೆನೆಂದರೆ, ತಂತ್ರಾಂಶ ಪರಿಣಿತರು ಜಾಗತಿಕ ಆರ್ಥಿಕ ಸಂಕಟಗಳಿಗೆ ಮೊದಲು ಬಲಿಯಾಗಲ್ಪಡುವ ಅತ್ಯಂತ ಸೂಕ್ಷ್ಮ ವರ್ಗ ಎಂಬುದು ಕಳೆದ ರಿಸೆಶನ್ ಗಳಿಂದ ವೇದ್ಯವಾಗಿದೆ. ಅದರಲ್ಲೂ ಭಾರತಕ್ಕೆ ಸಂಬಂಧಪಟ್ಟಂತೆ ಇದು ಇನ್ನೂ ಸೂಕ್ತವಾಗಿ ಅನ್ವಯಿಸುತ್ತದೆ. ಭಾರಿ ವೇತನಕ್ಕೆ ಅಷ್ಟೇ ಗಾತ್ರದ ರಿಸ್ಕ್ ಎಂಬ ಜ್ವಾಲಮುಖಿ ಸಮಾನಾಂತರವಾಗಿ ಆದರೆ ಸುಪ್ತವಾಗಿ ಹರಿಯುತ್ತಿರುತ್ತದೆ. ಅದು ಯಾವಾಗಲೂ ಸ್ಫೋಟಿಸಬಹುದು. ಯಾರಿಗೂ ಅದರ ಮೇಲೆ ನಿಯಂತ್ರಣವಿಲ್ಲ. ಲೇಮನ್ ಬ್ರದರ್ಸ್ ನಂತಹ, ಬ್ಯಾಂಕುಗಳಿಗೇ ಸಾಲ ಕೊಡುವ ಅಪ್ಪ ಬ್ಯಾಂಕುಗಳು ಮುಳುಗುವ ಚಿಕ್ಕದೊಂದು ಸೂಚನೆಯೂ ಇರಲಿಲ್ಲ. ಬ್ಯಾಂಕಿಂಗ್ ಕ್ಷೇತ್ರವನ್ನು ಅವಲಂಬಿಸಿದ ಹಲವು ಐಟಿ ಕಂಪನಿಗಳಿಗೆ ಒಂದಾದ ಮೇಲೊಂದು ವಿದೇಶಿ ಬ್ಯಾಂಕ್ ಗಳು ಪತನವಾಗುತ್ತಿರುವುದು ಅತೀವ ಕಳವಳದ ವಿಷಯವಾಗಿದೆ. ಒಂದು ಕಾಲದಲ್ಲಿ ಸಾಮಾನ್ಯನಲ್ಲಿ ಬೆರಗು ಮೂಡಿಸಿದ್ದ ಸಾಫ್ಟ್ ವೇರ್ ಈಗೀಗ ಬೆವರು ಹುಟ್ಟಿಸತೊಡಗಿದೆ. ನಾನು ಹೀಗೀಗೆ, ಇಂತಿಪ್ಪ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದರೆ “ಹೇಗೆ? ನಿಮ್ದು ಪರ್ವಾಗಿಲ್ವಾ?” ಎಂದು ಕಣ್ಣು ಕಿರಿದುಗೊಳಿಸಿ ಉಚಿತ ಅನುಕಂಪ ವ್ಯಕ್ತಪಡಿಸಲಾರಂಭಿಸಿಬಿಡುತ್ತಾರೆ. ಇವರ ಹಾರಾಟ ನೋಡಿ ಬೇಸತ್ತ ಇತರ ಕ್ಷೇತ್ರಗಳ ಹೆಚ್ಚಿನ ಅನುಭವವುಳ್ಳ ಕಡಿಮೆ ಪಗಾರಿನ ಜನಕ್ಕೆ ಒಳಗೊಳಗೇ ಖುಶಿಯಾಗುತ್ತಿದ್ದರೂ, ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಮಗ ಇಂಜಿನಿಯರಿಂಗ್ ಓದಿ ಮುಗಿಸುವ ಹೊತ್ತಿಗೂ ಪರಿಸ್ಥಿತಿ ಸರಿಯಾಗದಿದ್ದರೆ ಏನು ಗತಿ ಎಂಬ ಆತಂಕ ಮಾತಾಡಗೊಡುವುದಿಲ್ಲ. ಇಂಜಿನಿಯರಿಂಗ್ ಎಂದರೆ ಸಾಫ್ಟ್ ವೇರ್ ಎಂದು ಮತ್ತೆ ಹೇಳಬೇಕಾಗಿಲ್ಲವಲ್ಲ.
ಇಲ್ಲೊಂದು ಸಂಗತಿ ಗಮನಿಸಬೇಕಾದದ್ದಿದೆ. ನೌಕರಿ ಮಾಡಿಯೂ, ಲಂಚ ತಗೆದುಕೊಳ್ಳದೆಯೂ ಶ್ರೀಮಂತನಾಗಬಹುದೆಂದು ತೋರಿಸಿಕೊಟ್ಟ ಐಟಿ ಎಂಬುದು ಈ ಎರಡು ದಶಕಗಳಲ್ಲಿ ಭಾರತೀಯ ಸಮಾಜದಲ್ಲಿ ಸಮೃದ್ಧಿ, ಪ್ರತಿಷ್ಠೆ, ವಿಲಾಸ, ಅಸೂಯೆ, ದರ್ಪ ಇವೆಲ್ಲದರ ಸಂಕೇತವಾಗಿ ಬೆಳೆದು ನಿಂತಿದೆ. ಯುವಕ /ಯುವತಿಯರಲ್ಲಿ ಹಣ ಓಡಾಡತೊಡಗಿದಾಗ ಸಹಜವಾಗಿಯೇ ಕೊಳ್ಳುಬಾಕರಾದರು. ಪಾಶ್ಚಾತ್ಯರ ಗಾಳಿ ಸೋಂಕಿದ್ದರಿಂದ ಕೊಂಚ ಪ್ರಮಾಣದ ಚಾರ್ವಾಕತನವೂ ಬಂತು. ಅದರಿಂದಾಗಿ ಸಾಮಾನ್ಯನ ಬದುಕು ದುಸ್ತರವಾಯಿತು. ಒಳ್ಳೆತನ, ಸಂಸ್ಕೃತಿ, ನ್ಯಾಯವಂತಿಕೆ ಇವುಗಳನ್ನೆಲ್ಲ ಬಡತನಕ್ಕಷ್ಟೇ ಬೆಸೆಯುವ ಟಿಪಿಕಲ್ ಭಾರತೀಯ ಮನಸ್ಸು ಟೆಕ್ಕಿಗಳನ್ನು ಏಕಕಾಲಕ್ಕೆ ಬೆರಗು, ಅಸಹನೆ ಮತ್ತು ಅಸಮಾಧಾನದೊಂದಿಗೆ ನೋಡಲಾರಂಭಿಸಿದ್ದು ಅನಿರೀಕ್ಷಿತವಲ್ಲ. ಈ ಧಾಟಿಯ ಯೋಚನಾ ಕ್ರಮ ಭಾರತೀಯರಿಗೆ ತಲಾಂತರದಿಂದ ಬಂದ ಬಳುವಳಿ. ಶತಮಾನಗಳಿಂದ ಬಡತನವನ್ನೇ ಉಸಿರಾಡುತ್ತಾ ಬಂದ ನಮಗೆ ಶ್ರೀಮಂತಿಕೆಯ ಬಗ್ಗೆ ಅದಮ್ಯ ಆಸೆಯಿದೆ ಆದರೆ ಶ್ರೀಮಂತರ ಬಗ್ಗೆ ಅಪಾರ ಅಸಹನೆ ಇದೆ. ಬಡವರ ಬಗೆಗಿನ ಅನುಕಂಪವೇ ನಮ್ಮ ಒಳ್ಳೆತನಕ್ಕೆ ಪುರಾವೆ. ಅನುಕಂಪದ ಆಚೆ ನೆಡೆದು ಬಡವರಿಗೆ ಸಹಾಯಹಸ್ತ ಚಾಚುವ ಶಕ್ತಿ ಇಲ್ಲದ್ದು ನಮ್ಮ ಮಿತಿ ಮತ್ತು ಆಸಕ್ತಿ ಇಲ್ಲದ್ದು ಆಡಳಿತ ಯಂತ್ರದ ಬೇಜವಬ್ದಾರಿತನ.
ಆದರೆ ಉದಾರಿಕರಣದಿಂದೀಚೆಗೆ ಭಾರತದಲ್ಲಿ ನ್ಯಾಯಯುತವಾಗಿ ಹಣಗಳಿಸಬಹುದಾದಂತಹ ಮಾರ್ಗಗಳು ಹೇರಳವಾಗಿ ತೆರೆದುಕೊಂಡಿದ್ದನ್ನು ನಾವು ಉಪೇಕ್ಷಿಸುವಂತಿಲ್ಲ. ಹವಾನಿಯಂತ್ರಿತ ಕಟ್ಟಡಗಳಲ್ಲಿ ಕುಳಿತು ಸಾವಿರಾರು ಜನಕ್ಕೆ ಉದ್ಯೋಗ ನೀಡುವಂತ ಯೋಜನೆ ರೂಪಿಸಬಲ್ಲ ಶ್ರೀಮಂತ ಉದ್ಯಮಿ ಯನ್ನು ಕೊಂಚವೂ ಸಾಮಾಜಿಕ ಜವಾಬ್ದಾರಿಗಳಿಲ್ಲದ, ಕಾರ್ಮಿಕರ ರಕ್ತ ಹೀರುವ ಕ್ರೂರ ಬಂಡವಾಳಶಾಹಿಯನ್ನಾಗಿಯೇ ಭಾವಿಸಬೇಕಿಲ್ಲ.
ಹೀಗೆ ಗಳಿಸಿದ ದೊಡ್ಡ ವೇತನ, ಆ ಮೂಲಕ ಸೃಷ್ಟಿಸಿಕೊಂಡ ಸಂಪತ್ತು ಐಟಿ ಉದ್ಯೋಗಿಗಳಲ್ಲಿ ಸ್ವಾಭಿಮಾನದ ಸಂಕೇತವಾಗಿ, ಕೆಲವೆಡೆ ದರ್ಪವಾಗಿಯೂ ಪ್ರಕಟಗೊಂಡಿದ್ದರೆ ಆಶ್ಚರ್ಯಪಡಬೇಕಿಲ್ಲ. ಕಂಪನಿಯ ಬ್ಯಾಡ್ಜ್ ಕುತ್ತಿಗೆಗೆ ನೇತಾಕಿಕೊಂಡು ಕಂಪನಿ ಬಸ್ಸಿನಿಂದ ಇಳಿಯುವವರ ಬಿಗುಮಾನ ನೋಡಿ ‘ಇವರು ಮನುಷ್ಯರಿಗಿಂತ ತುಸು ಮೇಲೆ’ ಎಂದು ಭಾವಿಸಿದ್ದ ಜನಕ್ಕೆ ಕ್ರಮೇಣ ಇವ್ರು ಮಾಡುವ ಕೆಲಸಕ್ಕೆ ರ್ಯಾಂಕು – ಗೀಂಕು ಬೇಡವಂತೆ, ಅದು ಕಳಪೆ ಕೆಲಸವಂತೆ ಎಂದೆಲ್ಲ ಅರೆಬರೆ ಮಾಹಿತಿ ತಿಳಿದ ಮೇಲೆ ಒಹೋ ಇಷ್ಟೇನಾ? ಎಂಬಂತಾಗಿದ್ದು ಸುಳ್ಳಲ್ಲ. ಪಶ್ಚಿಮದವರ ಸುಖಕ್ಕಾಗಿ ಹಗಲು ರಾತ್ರಿಯೆನ್ನದೇ ಸಮಯದ ಹಂಗು ತೊರೆದು ಪಶ್ಚಿಮದವರ ಸಮಯದ ಗೊಂಬೆಯಂತೆ ದುಡಿಯುವ ಐಟಿಗ ಇವತ್ತು ಕೆಲಸ ಕಳೆದುಕೊಂಡರೂ ಸಮಾಜದ ಅನುಕಂಪ ಗಿಟ್ಟಿಸುವ ಸ್ಥಿತಿಯಲ್ಲಿಲ್ಲ. ದಾರಿಯಲ್ಲಿ ಎದುರು ಸಿಗುವ ಟೆಕ್ಕಿಯನ್ನು ಕೇಳಿ ನೋಡಿ, ಇವತ್ತಿನ ಪರಿಸ್ಥಿತಿಯಲ್ಲಿ ತನ್ನ ಉದ್ಯೋಗದ ಮುಂದಿನ ಎರಡು ತಿಂಗಳಿನ ಭವಿಷ್ಯ ಆತನಿಗೆ ತಿಳಿದಿಲ್ಲ. ಆದರೆ ಬಹುತೇಕರು ಹದಿನೈದು - ಇಪ್ಪತ್ತು ವರ್ಷಗಳ ಹೌಸಿಂಗ್ ಲೋನ್ ಹೊಂದಿದ್ದಾರೆ.
ಮರೆಯಬಾರದ ಸಂಗತಿಯೆಂದರೆ, ಆರ್ಥಿಕವಾಗಿ ದಿವಾಳಿಯಂಚಿನಲ್ಲಿದ್ದ ಭಾರತವನ್ನು ಐಟಿ ಮೇಲಕ್ಕೆತ್ತಿದ್ದಲ್ಲದೇ ಜಾಗತಿಕವಾಗಿ ಭಾರತಕ್ಕೊಂದು ಪ್ರಮುಖ ಸ್ಥಾನ ಒದಗಿಸಿಕೊಟ್ಟಿದೆ. ಐಟಿ ಉದ್ಯೋಗಿಗಳು ಕಟ್ಟುವ ಕಂದಾಯದ ಮೊತ್ತ ಇವತ್ತಿನ ಸರಕಾರಕ್ಕೆ ಬಹಳ ದೊಡ್ಡ ಆದಾಯ. ಮುಂಬರುವ ದಶಕಗಳಲ್ಲಿ ರಿಸೆಶನ್ ಎಂಬ ಅತಿಥಿ ಅಗಾಗ ಬರುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆಯಾದ್ದರಿಂದ ಟೆಕ್ಕಿಗಳು ತಮ್ಮ ದೊಡ್ಡ ಸಂಬಳದ ಸಣ್ಣಭಾಗವೊಂದನ್ನು ‘ರಿಸೆಶನ್ ತುರ್ತು ನಿಧಿ‘ ಯಾಗಿ ಕೂಡಿಡುತ್ತಾ ಹೋಗುವುದು ಅನಿವಾರ್ಯವೇನೊ. ಸರಕಾರದ ಕಣ್ಣಲ್ಲಿ ಶಾಶ್ವತ ಬಡವರಾಗಿ ಆದಾಯ ತೆರಿಗೆ ತಪ್ಪಿಸಿಕೊಳ್ಳುತ್ತಾ ಐಟಿಯವರನ್ನು ಬೈಯ್ಯುವ ಜನಕ್ಕೆ ಮನೆ ಮುಂದಿನ ರೋಡಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಅರಿವಿದ್ದರೆ ಸಾಕು.
-ಚಿನ್ಮಯ ಭಟ್

Friday, January 16, 2009

ಇತ್ತೀಚೆಗೆ ಭೀಮಸೇನ್ ಜೋಶಿಯವರಿಗೆ ಭಾರತರತ್ನ ಘೋಷಣೆಯಾದ ಸಂದರ್ಭದಲ್ಲಿ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ.

ಸಂಗೀತ ಲೋಕದ ಭೀಮಸೇನರೀಗ ಭಾರತ ರತ್ನ


ಬಹಳ ತಡವಾಯಿತು. ಭಾರತೀಯರಿಗೆ ಸಂಗೀತಲೋಕದ ಈ ‘ಭೀಮಸೇನ’ ಭಾರತದ ರತ್ನವೆಂದು ಮನದಟ್ಟಾಗಿ ಬಹುಕಾಲವಾಗಿತ್ತು. ದೆಹಲಿ ದೊರೆಗಳು ಇನ್ನೂ ವಯಸ್ಸಾಗಿಲ್ಲ ಎಂದು ಕಾದಿದ್ದರೆಂದು ಕಾಣುತ್ತದೆ. ಭೀಮಸೇನ್ ಜೋಶಿಯವರಿಗೆ ಭಾರತರತ್ನ ಕೊಡದಿದ್ದರೆ ಏನಾಗುತ್ತಿತ್ತು? ಏನೂ ಆಗುತ್ತಿರಲಿಲ್ಲ. ನೊಬೆಲ್ ಕೊಡಮಾಡದೇ ಗಾಂಧೀಜಿ ವಿಶ್ವಶ್ರೇಷ್ಠರಾಗಿ ಉಳಿದಿಲ್ಲವೇ? ಅಂತೆಯೇ ಭೀಮಸೇನರು. ಆಂತೂ ಭಾರತರತ್ನ ಪ್ರಶಸ್ತಿಯ ಮೌಲ್ಯ ಜಾಸ್ತಿಯಾಯಿತು. ಕನ್ನಡಿಗರು ಹೆಮ್ಮೆಪಡುವಂತಾಯಿತು.
ಜೋಶಿಯವರ ಸಂಗೀತ ಆಸ್ವಾದಿಸಲು ನೀವು ಸಂಗೀತ ಅಭ್ಯಾಸ ಮಾಡಿರಬೇಕಿಲ್ಲ. ಅವರ ಆಪ್ತದನಿಯಲ್ಲಿ ಕೇಳಿಬರುವ ದಾಸವಾಣಿಗೆ ಇಡೀ ಕನ್ನಡ ಜನತೆಯೇ ಮರುಳಾಯಿತು. ಕ್ಯಾಸೆಟ್ಟು ತಿರಿಸಿ ಮುರಿಸಿ ಹಾಕಿ ಸವೆಸಿದರು ಜನ. ಭಜನೆ, ಅಭಂಗ್, ಠುಮ್ರಿ, ಖ್ಯಾಲ್ ಹೀಗೆ ಹಲವು ಪ್ರಾಕಾರಗಳಲ್ಲಿ ಏಕ ರೀತಿಯ ಪ್ರಭುತ್ವ ಸಾಧಿಸಿದ ಅಪರೂಪದ ಸಾಧಕರವರು.
ಬೆಲ್ಲದ ಸಿಹಿ ಹೇಗಿರುತ್ತದೆ ಎಂಬುದನ್ನು ನಿವೆಷ್ಟೇ ಪದಪುಂಜಗಳಿಂದ ವಿವರಿಸಿದರೂ ಪ್ರಯೋಜನವಿಲ್ಲ. ಬೆಲ್ಲ ತಿಂದಾಗಲೇ ಅದರ ಅನುಭೂತಿ ನಮಗೆ ದಕ್ಕುವುದು. ಭೀಮಸೇನರ ಸಂಗೀತವನ್ನು ಪದಗಳಲ್ಲಿ ಹಿಡಿಯುವುದು ಕಷ್ಟ. ಹಿಂದುಸ್ತಾನಿ ಸಂಗೀತಕ್ಕೆ ಒಂದು ಮಸ್ಕ್ಯೂಲರ್ ರೂಪ ಕೊಟ್ಟವರು ಭೀಮಸೇನರು. ನನಗೆ ಅವರ ಲಲಿತ್ ಭಟಿಯಾರ್ ನ “ಓ ಕರತಾರ್” ನಂತಹ ಬಂದಿಷ್ ಗಳನ್ನು ಕೇಳಿದಾಗಲೆಲ್ಲ ಜರ್ಮನ್ ನಿರ್ಮಿತ ಸುಂದರ ಆದರೆ ಸದೃಢಕಾಯದ ಕಾರುಗಳು ನೆನಪಾಗುತ್ತವೆ. ಹೆಣ್ಣಿನ ಸೌಂದರ್ಯ ಮತ್ತು ಪುರುಷನ ಬಲದ ಬಹು ನಾಜೂಕಿನ ಮಿಶ್ರಣದಂತೆ ಭಾಸವಾಗುತ್ತದೆ ಜೋಶಿಯವರ ಗಾಯನ. ವಿಲಂಬತಗಳಲ್ಲಿ ರಾಗದ ವಾತಾವರಣವನ್ನು ನಿರ್ಮಿಸುವಾಗ ಶಾಂತವಾಗಿ ಹರಿಯುವ ಬಯಲುಸೀಮೆಯ ನದಿಗಳಂತೆ ಭಾಸವಾಗುವ ಅವರ ಗಾಯನವು ಮಧ್ಯ ಲಯದ ತಾನುಗಳ ಇಕ್ಕಟ್ಟಿನ ಹಾದಿಯಲ್ಲಿ ಚಲಿಸುವಾಗ ರಮಣೀಯವಾಗುತ್ತಾ, ಧೃತ್ ನಲ್ಲಿ ಧುಮ್ಮಿಕ್ಕುವ ಜಲಪಾತವಾಗಿ ರುದ್ರರಮಣೀಯ ಅನುಭವವನ್ನು ಕೊಡುತ್ತದೆ. ಭೀಮಸೇನರ ದನಿಗೆ ಕೇಳುವವರನ್ನು ಸಮ್ಮೋಹನಗೊಳಿಸುವ ಶಕ್ತಿ ಎಲ್ಲಿಂದ ಬರುತ್ತದೆ ಎಂದರೆ ಅವರ ಪರಿಪೂರ್ಣವಾದ ‘ಸುರೇಲಿ’ (ಶೃತಿಬದ್ಧವಾಗಿ) ಹಾಡುವ ಸಾಧನೆಯಿಂದ. ಈ ಸುರೇಲಿಯೆಂಬುದು ಅವರ ಅತಿವೇಗದ ತಾನುಗಳಿಂದ ಹಿಡಿದು ಗಾಯನದ ಯಾವುದೇ ಸ್ತರಗಳಲ್ಲಿ ಸ್ಥಾಯಿಯಾಗಿಯೇ ಇರುತ್ತದೆ ಎಂಬುದೇ ಅವರ ಗಾಯನದ ಮುಖ್ಯವಾದ ಹಿರಿಮೆ. ಈ ಕಾರಣಕ್ಕಾಗಿಯೇ ಅವರು ರಾಗ ಕಾಫಿಯಲ್ಲಿ ಹಾಡಿದ ‘ಪಿಯಾ ತೊ ಮಾನತ ನಾಹಿ’ ಯಂತಹ ಪ್ರೇಮಿಯೊಬ್ಬಳ ವಿರಹ ಸಂವೇದನೆಯ ಠುಮ್ರಿ ನಮ್ಮನ್ನು ಭಾವ ಪರವಶಗೊಳಿಸುತ್ತದೆ. ಈ ಭಾವವನ್ನು ಚಿತ್ರಿಸುತ್ತಿರುವುದು ಗಡಸುದನಿಯ ಪುರುಷ ಗಾಯಕ ಎಂಬ ಅರಿವೇ ನಮಗೆ ಮೂಡುವುದಿಲ್ಲ.
ಖ್ಯಾತ ಹಾರ್ಮೋನಿಯಮ್ ವಾದಕರಾದ ವಸಂತ್ ಕನಕಾಪುರ ಅವರು ಎಸ್ ಪಿ ಬಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ನನಗೆ ಜೋಶಿಯವರಿಗೆ ಸಾಥ್ ಮಾಡುವದು ಯಾವಾಗಲೂ ಒಂದು ಸವಾಲು” ಎಂದಿದ್ದರು. ಅದು ಅವರ ವಾದನದಲ್ಲಿಯ ಕೊರತೆ ಎಂದಲ್ಲ. ಅವರೇ ಹೇಳುವಂತೆ “ಭೀಮಸೇನರು ಹಾಡುವಾಗ ಎಷ್ಟು ತಲ್ಲೀನನಾಗಿಬಿಡುತ್ತೇನೆ ಎಂದರೆ ನಾನು ನನ್ನ ಕೆಲಸವನ್ನೇ ಮರೆತುಬಿಡುತ್ತೇನೆ”.
ನಾವು ಜೋಶಿಯವರನ್ನು ಕೇಳಲು ಆರಂಭಿಸುವ ಹೊತ್ತಿಗಾಗಲೇ ಅವರ ಪರಾಕಾಷ್ಠತೆಯ ಕಾಲ ಕಳೆದು ಹೋಗಿತ್ತು. ಅಂದರೆ ಅವರ ಸಂಗೀತ ಕಳೆಗುಂದಿತ್ತು ಎಂದಲ್ಲ. ಅಲ್ಲಿ ಆರ್ಭಟದ ತಾನುಗಳ ಜಲಪಾತ ಕೊಂಚ ಕಡಿಮೆಯಾಗಿತ್ತು. ಮುಂಬಯಿ, ಪುಣೆಗಳಂತಹ ಷಹರಗಳಲ್ಲಿ ಒಂದೇ ದಿನದಲ್ಲಿ ಎರಡು ಮೂರು ಕಡೆ ಅವರ ಕಛೇರಿಗಳಿರುತ್ತಿದ್ದವು ಎಂದು ಹಿರಿಯೊಬ್ಬರು ನೆನೆಸಿಕೊಂಡಾಗ ನನ್ನಂತಹವರಿಗೆ ಇಂತಹ ಸುವರ್ಣಕಾಲದಲ್ಲಿ ನಾನು ಹುಟ್ಟಿರಲಿಲ್ಲ ಎಂದು ಖೇದವಾಗುತ್ತದೆ. ಹೆಚ್ ಎಂ ವಿ ಎಂಬ ಸಂಸ್ಥೆ ಈ ಮಹಾನ್ ಕಲಾವಿದನನ್ನು ಹೋದಲ್ಲಿ ಬಂದಲ್ಲಿ ಕಾಡಿ ದುಡಿಸಿಕೊಳ್ಳದೇ ಹೋಗಿದ್ದರೆ ಜೋಶಿಯವರ ಆಳ ಅಗಲಗಳು ಈ ತಲೆಮಾರಿಗೆ ತಿಳಿಯುತ್ತಲೇ ಇರಲಿಲ್ಲ. ಕೋಮಲ್ ವೃಷಭ್ ಅಸಾವರಿ ನಮಗೆ ಸಿಕ್ಕುತ್ತಿರಲಿಲ್ಲ. ಅತಿ ಸುಂದರವಾಗಿ ಕಡೆದಿಟ್ಟ ಭೈರವಿ ಠುಮ್ರಿ ’ಬಾಬುಲ್ ಮೊರಾ’ ದಿಂದ ನಾವು ವಂಚಿತರಾಗಿಬಿಡುತ್ತಿದ್ದೆವು. ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಸಂಗೀತೋತ್ಸವವೊಂದರಲ್ಲಿ ರಾಗ ಮುಲ್ತಾನಿಯಲ್ಲಿ ಹಾಡಿದ ‘ನೈನನ ಮೆ ಆನ ಬಾನ’ ಧ್ವನಿ ಸುರುಳಿ ಮೈ ನವಿರೇಳಿಸುವಂತಿದೆ. ಅಲ್ಲಿ ಹಾಜರಿದ್ದ ಆ ಕಾಲಘಟ್ಟದ ಪ್ರಮುಖ ಕಲಾವಿದೆ ರೋಷನಾರಾ ಬೇಗಮ್ ಜೋಶಿಯವರು ಈ ರಾಗ ಮುಗಿಸಿದ ಬಳಿಕ ಆನಂದ ಭಾಷ್ಪ ಸುರಿಸುತ್ತಾ ಬಂದು ಭೀಮಸೇನರನ್ನು ಆಲಂಗಿಸಿದ್ದರ ಉಲ್ಲೇಖವಿದೆ.
ಭೀಮಸೇನರ ಇತಿಹಾಸ ಗಮನಿಸಿದರೆ ಅವರು ಸಂಗೀತಕ್ಕಾಗಿಯೇ ಹುಟ್ಟಿದವರು ಎನ್ನಲು ಯಾವ ಅಡ್ಡಿಯೂ ಇಲ್ಲ. ಸಂಗೀತದ ಕಲಿಕೆಗಾಗಿ ಬಾಲ್ಯದಲ್ಲಿಯೇ ಮನೆಬಿಟ್ಟು ಹೋದ ಅವರು ಆ ಉದ್ದೇಶಕ್ಕಾಗಿ ಭಾರತದ ಉದ್ದಗಲ ಅಲೆದಿದ್ದಾರೆ. ಅವರ ಪರಿಣಾಮಕಾರಿ ಆಲಾಪ್ ಗಳ ಹಿಂದೆ, ಬಲಶಾಲಿ ತಾನ್ ಗಳ ಹಿಂದೆ ಒಬ್ಬ ತೀವ್ರ ಹಠವಾದಿ ಸಾಧಕನಿದ್ದಾನೆ. ಒಂದೆರಡು ರಾಗ ಕಲಿತು ದಿಢೀರ್ ಜನಪ್ರಿಯತೆಗಳಿಸುವ ಉದ್ದೇಶವೇ ಅವರಿಗಿರಲಿಲ್ಲ. ಆದರೆ ರಂಗಕ್ಕೆ ಇಳಿದ ಮೇಲೆ ಅವರು ಮೆಟ್ಟಿಲು ಹತ್ತಿದರೇ ಹೊರತು ಇಳಿಯಲಿಲ್ಲ.
ಕಿರಾನಾ ಘರಾಣೆಯ ಸ್ಥಾಪಕರಾದ ಉಸ್ತಾದ್ ಕರೀಂ ಖಾನ್ ರನ್ನು ಕೇಳಿದರೆ ನಮಗೆ ಭೀಮಸೇನರ ಗಾಯಕಿಯ ಮೇಲೆ ಅಪಾರ ಪ್ರಭಾವ ಬೀರಿದ್ದನ್ನು ಗಮನಿಸಬಹುದು. ಕರೀಂ ಖಾನ್ ರದ್ದು ಬಲು ಕೋಮಲವಾದ ಮಧುರವಾದ ಧ್ವನಿ. ಜೋಶಿಯವರು ಅವರ ಒಳ್ಳೆಯ ಅಂಶಗಳನ್ನೆಲ್ಲ ತಮ್ಮ ಗಾಯಕಿಯಲ್ಲಿ ಅಳವಡಿಸಿಕೊಂಡರು. ಇನ್ನು ಕರಿಂ ಖಾನ್ ರ ಶಿಷ್ಯರೇ ಆಗಿದ್ದ ಸವಾಯಿ ಗಂಧರ್ವರ (ಭೀಮ ಸೇನರ ಗುರುಗಳು) ಪ್ರಭಾವ ಜೋಶಿಯವರ ಮೇಲೆ ಆಗಿರಲೇಬೇಕು.ಜೋಶಿಯವರ ಪ್ರಕಾರ “ಎಲ್ಲಾ ಕಲಾವಿದನಲ್ಲೂ ಒಬ್ಬ ಚೋರನಿರುತ್ತಾನೆ. ಯಾರನ್ನಾದರೂ ನಕಲು ಮಾಡುವುದು ಸುಲಭ ಆದರೆ ಅದನ್ನು ಅಸಲು ಮಾಡಿಕೊಂಡು ಪ್ರಸ್ತುತಪಡಿಸುವುದರಲ್ಲಿ ಕಲಾವಿದನ ಸೃಜನಶೀಲತೆಯಿದೆ”.
ಜೋಶಿಯವರ ವೈಶಿಷ್ಟ್ಯವೇನೆಂದರೆ ಅವರ ಮಟ್ಟದ ಕಲಾವಿದರಾಗುವುದು ಹಾಗಿರಲಿ, ಜೋಶಿಯವರನ್ನು ಸಮರ್ಥವಾಗಿ ಅನುಕರಿಸುವುದೂ ನಮ್ಮ ಹಲವು ಕಲಾವಿದರಿಂದ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಭೀಮಸೇನರನ್ನು ಅನುಕರಿಸಿ ಹಾಡುವವರ ದಂಡೇ ಬೆಳೆದಿತ್ತು, ಅದರಲ್ಲೂ ಕರ್ನಾಟಕದಲ್ಲಿ. ಬಹುಪಾಲು ಗಾಯಕರು ತಮ್ಮ ಅಸಲಿ ಮಧುರ ಧ್ವನಿಯನ್ನು ಬಿಟ್ಟು ಜೋಶಿಯವರ ಗಡಸು ಧ್ವನಿಯನ್ನು ಅನುಕರಿಸಲು ಸಮಯ ವ್ಯರ್ಥ ಮಾಡಿದರು. ಕೆಲವರು ಜೋಶಿಯವರಂತೆ ನೆಟ್ಟಗೆ ಕುಳಿತುಕೊಳ್ಳುವದನ್ನು ಅನುಕರಿಸಿದರು. ಇನ್ನೂ ಕೆಲವರು ಜೋಶಿಯವರ ಹಿಂದೆ ಎಷ್ಟು ಜನ ತಂಬೂರ ಸಾಥಿಯವರನ್ನು ಕೂರಿಸಿಕೊಳ್ಳುತ್ತಾರೋ ಅಷ್ಟೇ ಜನರನ್ನು ತಾವೂ ಹಿಂದುಗಡೆ ಬಿಟ್ಟುಕೊಂಡು ಹಾಡಿ ನೋಡಿದರು. ಅವರ ಗಾಯಕಿ ಮಾತ್ರ ಯಾರಿಗೂ ಹತ್ತಲಿಲ್ಲ. ಆಲದ ಮರದ ಬುಡದಲ್ಲಿ ಬೆಳೆಯುವ ವ್ಯರ್ಥ ಪ್ರಯತ್ನವೇ ಆಯಿತು.
ಜೋಶಿಯವರು ಮುಂದಿನ ಸಾಲಿನ ವಿದ್ವಾಂಸರನ್ನು ಮೆಚ್ಚಿಸುವದಕ್ಕೆ ಆತುರ ತೋರಿದ್ದು ಕಡಿಮೆಯೇ ಎನ್ನಬಹುದು. “ಗಾಯಕನಾಗಿರದಿದ್ದರೆ ಕಾರ್ ಮೆಕ್ಯಾನಿಕ್ ಆಗಿರುತ್ತಿದ್ದೆ’‘ ಎನ್ನುವ ಜೋಶಿಯವರು ಗಾಯನದ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದವರಲ್ಲ. ಅವರ ಹಾಗೆ ಮೈಕ್ ಗಳನ್ನು ಪರಿಣಾಮಕಾರಿಯಾಗಿ ಬಳಸುವ ಕಲಾವಿದರು ವಿರಳ. ಹಾಡುವಾಗ ಮುಖವನ್ನು ಮೈಕಿನ ದೂರಕ್ಕೂ, ಹತ್ತಿರಕ್ಕೂ ತರುತ್ತಾ ಆ ಮೂಲಕ ಉಂಟುಮಾಡುವ ಶಬ್ದ ವ್ಯತ್ಯಾಸಗಳು ಕೇಳುಗನಿಗೆ ವಿಭಿನ್ನ ಅನುಭವವನ್ನು ನೀಡುತ್ತವೆ. ಲಯಕ್ಕೆ ಬಹಳ ಮಹತ್ವ ಕೊಡುತ್ತಿದ್ದರಾದರೂ ಲೆಕ್ಕಾಚಾರಗಳಲ್ಲಿ ಮುಳುಗಿ ಗಾಯನ ಹದಗೆಡೆಸಿಕೊಂಡವರಲ್ಲ. ಅವರ ಪ್ರಕಾರ “ಗಾಯನದಲ್ಲಿ ತಿ ಹೈ ಗಳು ಗಣಿತ ಲೆಕ್ಕಾಚಾರದ ಫಲಗಳಾಗಿ ಹೊರಹೊಮ್ಮದೇ ಅವೇ ಅವಾಗಿ ಪ್ರಕಟಗೊಂಡರೆ ಚೆಂದ”.
ಇವೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ಭಾವಪೂರ್ಣ ಭಜನೆಗಳಿಂದ ಅವರು ನಮ್ಮೆಲ್ಲರ ಮನದಲ್ಲಿ ನಿಂತಿದ್ದಾರೆ. ಜನಪ್ರಿಯನಾದವನು ಶ್ರೇಷ್ಠನೂ ಆಗಬಹುದೆಂಬುದಕ್ಕೆ ಅವರು ಒಳ್ಳೆಯ ಉದಾಹರಣೆ.ಭೀಮಸೇನರನ್ನು ನಾವು ಕನ್ನಡಿಗರು ಎಷ್ಟು ಪ್ರೀತಿಸುತ್ತೇವೆಯೋ ಅದರ ಇಮ್ಮಡಿಯಾದ ಪ್ರೀತಿ ಅವರ ಮೇಲೆ ಮರಾಠಿಗರಿಗಿದೆ. ಎಷ್ಟೋ ಮರಾಠಿಗರಿಗೆ ಜೋಶಿಯವರ ಕನ್ನಡದ ಮೂಲದ ಬಗ್ಗೆ ತಿಳಿದೇ ಇಲ್ಲ. ಹಲವು ದಶಕಗಳ ಕಾಲ ತಮ್ಮ ಅತ್ಯುತ್ತಮ ದರ್ಜೆಯ ಸಂಗೀತ ಉಣಬಡಿಸಿದ ಇಂತಹ ಅಪ್ರತಿಮ ಗಾರುಡಿಗನಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಂದಿದ್ದು ಬಹಳದ ಸಂಗತಿ. ಇಂತಹ ದೈತ್ಯಪ್ರತಿಭೆ “ಸಂಗೀತ ಕ್ಷೇತ್ರದ ಎಲ್ಲಾ ಸಾಧಕರ ಪರವಾಗಿ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ” ಎಂದಿದ್ದು ಬಹು ದೊಡ್ಡ ಮಾತು. ಸಮಸ್ತ ಕನ್ನಡಿಗರ ಪರವಾಗಿ ನಾಡಿನ ಎರಡನೇ ಭಾರತರತ್ನಕ್ಕೆ ಅಭಿನಂದನೆಗಳು.
-ಚಿನ್ಮಯ.
ಪ್ರಕಟಿಸಿದ ವಿಜಯ ಕರ್ನಾಟಕಕ್ಕೆ ವಂದನೆಗಳು.

ಫೋಟೊ ಇಂಟರ್ ನೆಟ್ ನಿಂದ ಡೌನ್ ಲೋಡ್ ಮಾಡಿದ್ದು.

Friday, November 14, 2008

ಹೀಗೊಂದು ಪ್ರತಿಕ್ರಿಯೆ

ಇತ್ತೀಚೆಗೆ ರುಜುವಾತು ಸಂಪದ. ನೆಟ್ ನಲ್ಲಿ ಪ್ರಕಟವಾದ ಡಾ. ಆನಂತಮೂರ್ತಿಗಳ ‘ಇವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು’ ಬರಹಕ್ಕೆ ನಾನು ಬರೆದ ಪ್ರತಿಕ್ರಿಯೆ. ಪ್ರಕಟಿಸಿದ ರುಜುವಾತು ಸಂಪದ ತಂಡಕ್ಕೆ ವಂದನೆಗಳು.

ನಮಸ್ಕಾರ ಸರ್,
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಪಕ್ಷವೊಂದನ್ನು ಕಟ್ಟುವ ಪ್ರಯತ್ನಗಳು ನಿರಂತರ ಜಾರಿಯಲ್ಲಿರುವುದನ್ನು ಸಾದ್ಯಂತವಾಗಿ ವಿವರಿಸಿದ್ದೀರಿ. ಈ ಪ್ರಯತ್ನದಲ್ಲಿ ಅಲ್ಲಲ್ಲಿ ತಾತ್ಕಾಲಿಕ ಯಶಸ್ಸು ಕಂಡುಬಂದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯೇ ಕಾಂಗ್ರೆಸ್ಸಿನ ಪರ್ಯಾಯವಾಗಿದ್ದು ನಮ್ಮ ಕಣ್ಣ ಮುಂದಿದೆ.
ನನ್ನ ದೃಷ್ಟಿಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ದ್ವಿಜಶಾಹಿ ಪಕ್ಷಗಳೇ. ಬಿಜೆಪಿ ಅಂಗಿ ಬಿಚ್ಚಿ ನಿಂತಿದ್ದರಿಂದ ಜನಿವಾರ ಕಾಣುತ್ತಿದೆ ಅಷ್ಟೆ. ನಾಳೆ ಮುಸಲರಿಗೆ ಮತ್ತು ಕ್ರೈಸ್ತರಿಗೆ ಓಟು ಹಾಕುವ ಹಕ್ಕಿಲ್ಲವೆಂದಾಗಿಬಿಟ್ಟರೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ಚುನಾವಣೆಗೆ ಬಹು ಮುಖ್ಯ ವಿಷಯವೇ ಕಳೆದು ಹೋಗುತ್ತದೆ. ಬಿಜೆಪಿಯ ಹಿಂದುತ್ವ ಹಿಂದೆ ಸರಿಯಬೇಕಾಗುತ್ತದೆ. ಆಗ ಕೋಮುವಾದ ಎಂಬ ಶಬ್ದಕ್ಕೆ ರಾಜಕೀಯ ಅರ್ಥವಿರುವುದಿಲ್ಲ. ಆಗ ಮುಂಚೂಣಿಗೆ ಬರುವುದು ಜಾತಿವಾದ ಮಾತ್ರ. (ಈ ಕಾಲ್ಪನಿಕ ಸನ್ನಿವೇಶದಲ್ಲಿ ಬ್ರಾಹ್ಮಣರು ಅಲ್ಪ ಸಂಖ್ಯಾತರಾಗುವುದರಿಂದ ಅವರ ಓಟುಗಳೇ ನಿರ್ಣಾಯಕವಾಗಿಬಿಡಬಹುದು. ಪುನಃ ಅದು ಪುರೋಹಿತಶಾಹಿ ವ್ಯವಸ್ಥೆಯೇ ಆಗಿಬಿಡುವ ಅಪಾಯವಿದೆ)
ಕಾಂಗ್ರೆಸ್ ತನ್ನ ಸುದೀರ್ಘ ಆಳ್ವಿಕೆಯಲ್ಲಿ ಅಷ್ಟಾಗಿ ಗಮನ ಹರಿಸದ ಸಂಗತಿಗಳನ್ನು ಬಿಜೆಪಿ ಬಲವಾಗಿ ಅಪ್ಪಿಕೊಂಡಿತು. ಕಾಂಗ್ರೆಸ್ಸಿನ ತಪ್ಪುಗಳು ಅವೇ ಅವಾಗಿ ಬಿಜೆಪಿಗೆ ಒಂದು ಬಲವಾದ ಪಕ್ಷವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟವು. ಸುಮಾರು ಐವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿಗೆ ಮುಸ್ಲಿಮರ ಓಟಷ್ಟೇ ಬೇಕಾಯಿತು. ಅವರ ಉದ್ಧಾರ ಬೇಕಿರಲಿಲ್ಲ. ಇಷ್ಟು ಸುದೀರ್ಘ ಅವಧಿಯಲ್ಲಿ ಒಂದು ಜನಾಂಗವನ್ನು (ದಲಿತರನ್ನೊಳಗೊಂಡು) ಮುಖ್ಯವಾಹಿನಿಗೆ ತರುವುದು ಖಂಡಿತ ಸಾಧ್ಯವಿತ್ತು – ಇಚ್ಛಾ ಶಕ್ತಿ ಇದ್ದಿದ್ದರೆ. ಮುಸ್ಲಿಮರು ಈಗಾಗಲೇ ಮುಖ್ಯವಾಹಿನಿಯೊಳಗಿದ್ದಿದ್ದರೆ ದೇಶದೊಳಗಿನ ಮುಸ್ಲಿಮರಿಂದಲೇ ಬಾಂಬ್ ಸ್ಫೋಟಗಳು ಆಗುವುದು ಸಾಧ್ಯವಿರಲಿಲ್ಲ. ಇದು ಕಾಂಗ್ರೆಸ್ಸಿನ ಅತಿ ದೊಡ್ಡ ವೈಫಲ್ಯ. ಈಗ ನೆಡೆಯುತ್ತಿರುವ ಸರಣಿ ಸ್ಫೋಟಗಳು ಮುಂದಿನ ಚುನಾವಣೆಗೆ ಬಿಜೆಪಿಯನ್ನು ಬಲಗೊಳಿಸುತ್ತಲೇ ಹೋಗುತ್ತವೆ ಎಂಬುದು ವಿಪರ್ಯಾಸವಾದರೂ ಕಠೋರ ಸತ್ಯ.
ಇನ್ನು ಕಾಂಗ್ರೆಸ್ ಅವಧಿಯಲ್ಲೇ ರಚಿತವಾದ ಭಾಷಾವಾರು ಪ್ರಾಂತ್ಯ ವಿಂಗಡಣೆಯೆಂಬ ಸೂತ್ರವೇ ರಾಷ್ಟ್ರೀಯ ಕಲ್ಪನೆಗೆ ವಿರುದ್ಧವಾಗಿದೆಯೇನೋ ಎಂಬ ಅನಿಸಿಕೆ ನನ್ನಲ್ಲಿ ವ್ಯಕ್ತವಾಗಲಾರಂಭಿಸಿದೆ. ಇದು ಒಳ್ಳೆಯ ನಿರ್ಣಯವಾಗಿತ್ತೋ ಅಥವಾ ಕೆಟ್ಟದಾಗಿತ್ತೋ ಎಂಬ ಆಳ ವಿಮರ್ಶೆಗೆ ನನ್ನ ತಿಳುವಳಿಕೆ ಕಡಿಮೆ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಇದು ಹೊಡೆತ ಕೊಡುತ್ತಲೇ ಇದೆ. ಇವತ್ತು ರಾಜ್ ಠಾಕ್ರೆಯ ಭಾಷಾಧಾರಿತ ಹಿಂಸಾಚಾರಗಳು ಆತನಿಗೆ ವೈಯಕ್ತಿಕ ರಾಜಕೀಯ ಅಭಿವೃದ್ಧಿಗೂ ಕೊನೆಯಲ್ಲಿ ಒಂದು ದಿನ ಬಿಜೆಪಿಗೇ ಅನುಕೂಲವಾಗಬಹುದು. ( ಆತನಿಗೆ ಬಿಜೆಪಿ ಕಾಂಗ್ರೆಸ್ಸಿಗಿಂತ ಹತ್ತಿರವಾದ ಪಕ್ಷ.) ಕರವೇ ದಂತಹ ನೆಲ ಜಲದ ಕುರಿತು ಹೋರಾಡುತ್ತಿರುವ ಸಂಘಟನೆಗಳಿಗೆ ಬಿಜೆಪಿಯೊಂದೇ ಆಶಾಕಿರಣವಾಗಿ ಉಳಿದಿದೆಯೆಂಬ ಸಂಶಯ ನನ್ನಲ್ಲಿದೆ. ಪ್ರಸ್ತುತ ರಾಜಕೀಯದಲ್ಲಿ ಭಾಷೆ ಎಂಬುದು ಧರ್ಮಕ್ಕಿಂತ ಜಟಿಲವಾದ ಮತ್ತು ಬಹಳ ಸಂಕೀರ್ಣವಾಗುತ್ತಿರುವ ಸಂಗತಿ. ಹಿಂದೂ ಮುಸ್ಲಿಂ ಎಂಬ ಸರಳ ಲೆಕ್ಕಾಚಾರಗಳು ಭಾಷೆಯ ವಿಚಾರದಲ್ಲಿ ಕೆಲಸ ಮಾಡಲಾರವು. ಲಾಲೂರನ್ನು ಖುಷಿಪಡಿಸಲು ರಾಜ್ ರನ್ನು ಹಣಿಯಲು ಹೋದರೆ ಒಂದಿಷ್ಟು ಮರಾಠಿ ಓಟುಗಳನ್ನು ಕಳೆದುಕೊಳ್ಳಲು ಕಾಂಗ್ರೆಸ್ ತಯಾರಾಗಿರಲೇಬೇಕು. ಕನ್ನಡ,ಮರಾಠಿ, ಬಂಗಾಳಿ ಇತ್ಯಾದಿ ಪ್ರತ್ಯೇಕ ಪ್ರಾಂತ್ಯವಾಗಿದ್ದುಕೊಂಡು ರಾಷ್ಟ್ರೀಯತೆಯ ಮನೋಭಾವ ಬೆಳೆಸಿಕೊಳ್ಳುವುದು ತಾರ್ಕಿಕವಾಗಿ ಸಾಧ್ಯವಾಗಬಹುದು ಆದರೆ ಜನಸಾಮನ್ಯನಲ್ಲಿ ಅದು ಕಷ್ಟ ಎಂದೇ ನನ್ನ ಅನಿಸಿಕೆ.
ಇದು ಕಾಂಗ್ರೆಸ್ಸಿನ ಕಥೆಯಾಯಿತು. ಸಮಾಜವಾದದ ಹಿನ್ನೆಲೆಯಿಂದ ಹುಟ್ಟಿಕೊಂಡ ಜನತಾ ಪರಿವಾರಕ್ಕೆ ಬಂದ ಯಶಸ್ಸನ್ನು ಕಾಯ್ದುಕೊಳ್ಳುವ ಸಾಮರ್ಥ್ಯವೇ ಇಲ್ಲದಾಯಿತು. ಕಾಂಗ್ರೆಸ್ಸು ಇವತ್ತು ಒಂದು ಕುಟುಂಬದ ಸ್ವತ್ತು. ಜನತಾ ಪರಿವಾರ ಹರಿಹರಿದು ಕೆಲವು ಕುಟುಂಬಗಳ ಸ್ವತ್ತು. ಹಾಗೆ ನೀಡಿದರೆ ಬಿಜೆಪಿಯಲ್ಲಿಯೇ ಕುಟುಂಬಕಾರಣ ಇಲ್ಲವೆನ್ನಬಹುದು.
ತಮ್ಮ ಲೇಖನದ ಕೊನೆಯಲ್ಲಿ ಬಿಜೆಪಿಯೇತರ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಸೋಲಿಸಬೇಕು ಎಂದಿದ್ದೀರಿ. ಆದರೆ ಅದರಿಂದ ಒಳಿತೇನು ಎಂಬುದು ಸ್ಪಷ್ಟಗೊಳ್ಳುವುದಿಲ್ಲ. ಸರಿಯಾದ ನಾಯಕರಿಲ್ಲದೇ ಎಲ್ಲವೂ’ಹತ್ತನೇ ಮನೆ’ ಯಿಂದಲೇ ನಿರ್ಧಾರಿತಗೊಳ್ಳುವ ಮುಖವಿಲ್ಲದ ಕಾಂಗ್ರೆಸ್ ಅನ್ನು ಹೇಗೆ ಆರಿಸೋಣ? ಕಾಂಗ್ರೆಸ್ಸೇತರರೆಡೆಗೊಮ್ಮೆ ನೋಡಿ. ದೇವೆಗೌಡ ಅಂಡ್ ಸನ್ಸ್, ಲಾಲೂ ಯಾದವ್, ಪಾಸ್ವಾನ್ ಇವರ್ಯಾರಾದರೂ ನಂಬಿಕೆಗೆ ಅರ್ಹರೇ? ನೀವು ಹೇಳುವ ಸಮಾಜವಾದದ ಸಿದ್ಧಾಂತಗಳೆಲ್ಲ ಇವರೆಲ್ಲ ಮರೆತು ಯಾವ ಕಾಲವಾಯಿತು. ಶಿಸ್ತಿನ ಪಕ್ಷವೆಂದುಕೊಂಡಿದ್ದ ಬಿಜೆಪಿಗೇ ಈಗ ಸಿದ್ಧಾಂತಗಳಿಲ್ಲ. ಯಡ್ಯೂರಪ್ಪನವರದು ಈಗ ಬರೀ ‘ಲೋಹವಾದ’.
ಹಟತೊಟ್ಟು ಬಿಜೆಪಿಯನ್ನು ಸೋಲಿಸಬೇಕೆಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ. ಏಕೆಂದರೆ ಹಾಗೆ ಸೋಲಿಸುವುದರಿಂದ ಅಂತಹ ಪ್ರಯೋಜನವಿಲ್ಲ. ಬದಲಿಗೆ ವಯಸ್ಸು ಕಳೆದಂತೆ ಕೊಂಚ ಮಂದಗಾಮಿಯಾಗಿ ತೋರುತ್ತಿರುವ ಅಡ್ವಾಣಿಯವರಲ್ಲಿಯೇ ದೇಶವನ್ನು ಮುನ್ನೆಡೆಸುವ ಸತ್ವ ಕಾಣಿಸುತ್ತದೆ ನನಗೆ. ಧರ್ಮವೆಂಬ ಆಫೀಮು ಮೆಲ್ಲುವ ಅಂಗ ಸಂಸ್ಥೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡರೆ ಅವರು ಖಂಡಿತವಾಗಿ ಯಶಸ್ಸುಗಳಿಸಬಲ್ಲರು ಅನ್ನಿಸುತ್ತದೆ.
ವಂದನೆಗಳು.
-ಚಿನ್ಮಯ.

Wednesday, October 15, 2008

ನಿಂತು ನಗಿಸುವ ಗಾರುಡಿ

ಇತ್ತೀಚೆಗೆ ಹಾಸ್ಯೋತ್ಸವಗಳನ್ನು ನಾನು ನೋಡಿಲ್ಲ. ಕನ್ನಡದಲ್ಲಿ ಇವುಗಳು ದೊಡ್ಡ ಪ್ರಮಾಣದಲ್ಲಿ ಪ್ರಚಲಿತಕ್ಕೆ ಬಂದೇ ಆರೆಂಟು ವರ್ಷಗಳಾದವೇನೋ. ಬಹುಬೇಗ ಜನಪ್ರಿಯತೆಯ ಪರಾಕಾಷ್ಟತೆ ತಲುಪಿ ಮೆರೆದ ಇದರ ಈಗಿನ ಸ್ಥಿತಿ ನಮ್ಮ ಈಗಿನ ಷೇರು ಸೂಚ್ಯಂಕದಷ್ಟೇ ಕೆಳಕ್ಕೆ. ಹೆಚ್ ಎನ್ ಕಲಾಕ್ಷೇತ್ರದಲ್ಲಿ ಪ್ರತಿ ಕ್ರಿಸ್ಮಸ್ ದಿನದಂದು ನಡೆಯುತ್ತಿದ್ದ ಹಾಸ್ಯೋತ್ಸವಕ್ಕೆ ಹೆಂಗಸರು ಮಕ್ಕಳಾದಿಯಾಗಿ ಬೆಳಿಗ್ಗೆ ಆರಕ್ಕೇ ಬಂದು ಕೂರುತ್ತಿದ್ದುದು ನೆನಪಾಗುತ್ತದೆ. ಪ್ರೊ. ಅ. ರಾ ಮಿತ್ರ ತುಂಬ ಸೊಗಸಾಗಿ ನೆಡೆಸಿಕೊಡುತ್ತಿದ್ದರು. ಈಗಲೂ ಅದೇ ಆಕರ್ಷಣೆ ಅಲ್ಲಿ ಉಳಿದಿದೆಯೋ ಇಲ್ಲವೋ ತಿಳಿದಿಲ್ಲ.
ಆಮೇಲೆ ಶುರುವಾಯಿತು ನೋಡಿ, ಗಲ್ಲಿ ಗಲ್ಲಿಗಳಲ್ಲಿ ದಿನ ಬೆಳಗಾದರೆ ಹಾಸ್ಯೋತ್ಸವ. ಜೋಕುಗಳು ಹಪ್ಪು ಹಳಸಲಾದರೂ ಬಿಡದೇ ಅಗಿದರು ನಗೆಗಾರರು. ಸರ್ದಾರ್ ಜಿ ಜೋಕುಗಳು, ಇಂಟರ್ ನೆಟ್ ಜೋಕುಗಳು, ಬೀಚಿ ಜೋಕುಗಳು ಎಲ್ಲ ಮುಗಿದ ಮೇಲೆ ಅವರಾದರೂ ಏನು ಮಾಡಿಯಾರು? ತಮ್ಮ ಸೃಜನಶೀಲತೆಯಿಂದ ಸೃಷ್ಟಿಸಿದ ಅದ್ಭುತ ಉತ್ಪತ್ತಿಗಳಿಂದ ಸ್ವತಃ ಬೀಚಿಯವರಿಗೆ ಎಷ್ಟು ಉತ್ಪನ್ನ ಹುಟ್ಟಿತ್ತೋ ಗೊತ್ತಿಲ್ಲ ಆದರೆ ಅವರು ಸಂದು ಹಲವು ವರ್ಷಗಳ ನಂತರ ಕೆಲವು ಜನರ ಹೊಟ್ಟೆ ತುಂಬಿಸಿದ್ದಂತೂ ನಿಜ. ಗಮನಿಸಬೇಕಾದ್ದೆಂದರೆ ಬೀಚಿ ಎಂದರೆ ಏನೆಂದು ಗೊತ್ತಿಲ್ಲದ ಮತ್ತು ಹೆಸರಷ್ಟೇ ಕೇಳಿದ್ದ ಜನಕ್ಕೂ ರಾಯಸಂ ಭೀಮಸೇನ್ ರಾವ್ ರ ತಾಕತ್ತೇನೆಂದು ತಿಳಿಯಿತು. ಪ್ರಾಣೇಶರಂತವರಿಗೆ ಅದರ ಪಾಲು ಸಲ್ಲಬೇಕಾದ್ದೇ.
ಪಾಶ್ಚಾತ್ಯರಲ್ಲಿ ಸ್ಟಾಂಡ್ ಅಪ್ ಕಾಮಿಡಿ ಎಂಬುದು ಬಹಳ ಹಳೆಯ ಮತ್ತು ಜನಪ್ರಿಯ ಅಭಿವ್ಯಕ್ತಿ. ೧೯ನೇ ಶತಮಾನದಲ್ಲಿಯೇ ಹುಟ್ಟು ಪಡೆದ ಈ ಪ್ರಾಕಾರ ಎಪ್ಪತ್ತರ ದಶಕದಲ್ಲಿ ಉತ್ತುಂಗಕ್ಕೆ ಏರಿದ್ದೊಂದೇ ಅಲ್ಲ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರುವಷ್ಟರ ಮಟ್ಟಕ್ಕೆ ಬೆಳೆದಿತ್ತು ಎಂಬ ಉಲ್ಲೇಖಗಳಿವೆ. ಈಗಲೂ ಇದು ಸಾಕಷ್ಟು ಸತ್ವವನ್ನು ಉಳಿಸಿಕೊಂಡಿದೆ ಅಲ್ಲಿ.
ನಗೆಗಾರರಿಗೂ ಸುದ್ದಿಗಾರರಿಗೂ ಒಂದು ಸಾಮ್ಯವಿದೆ. ನಿತ್ಯವೂ ನೂತನವಾದ್ದನ್ನು ಹುಡುಕಬೇಕು. ಸುದ್ದಿ ಓದಿದ ಮರುಕ್ಷಣದಲ್ಲಿ ಹಳತಾಗಿಬಿಡುತ್ತದೆ. ಜೋಕು ಕೇಳಿದ ತಕ್ಷಣಕ್ಕೆ ಹಳಸಲಾಗಿಬಿಡುತ್ತದೆ. ಕೇಳಿದ ಅಥವಾ ಓದಿದ ಹಾಸ್ಯಗಳೇ ಆದರೂ ಕೆಲವು ಆಗಾಗ ನೆನಪಾಗಿ ಸಟಕ್ಕನೆ ನಗೆ ತರಿಸಿವುದುಂಟು. ತಂತ್ರದ (concept) ಹಿನ್ನೆಲೆಯಿರುವ ಜೋಕುಗಳು ಹೀಗೆ ಮಾಡಬಲ್ಲವು. ಅದ್ಭುತ ಆಂಗಿಕ ಅಭಿನಯವುಳ್ಳ ಹಾಸ್ಯಗಳಿಗೂ ನಿರಂತರ ಗಟ್ಟಿತನವಿರುತ್ತದೆ. ಮಿ.ಬೀನ್ ಇದಕ್ಕೆ ಒಳ್ಳೆಯ ಉದಾಹರಣೆ. ಬೀಚಿ ಸೋಮಾರಿ ರಾಜ್ಯವೊಂದರ ವರ್ಣನೆ ಮಾಡುತ್ತಾ, ''ಆ ರಾಜ್ಯದಲ್ಲಿ ಗಿಡದಲ್ಲಿ ಸುಲಿದ ಬಾಳೆ ಹಣ್ಣೇ ಬೆಳೆಯುತ್ತಿತ್ತು.” ಎಂದು ಬರೆದರು. ಇಂತಹ ಹಾಸ್ಯಕ್ಕೆ ಭಾಷೆಯ ಹಂಗಿಲ್ಲ ನೋಡಿ. ಸಸ್ಯ ವಿಜ್ಞಾನಿಗಳು ಇದನ್ನು (ಸುಲಿದ ಬಾಳೆಹಣ್ಣಿನ ಗಿಡ) ನಿಜವಾಗಿಸುವವರೆಗೂ ಈ ಹಾಸ್ಯ ಹಸಿರಾಗಿಯೇ ಇರುತ್ತದೆ. ಭಾಷೆಯ ಚಳಕದಿಂದ, ಪ್ರಾಸಗಳಿಂದ ಜನಿತವಾಗುವ ಹಾಸ್ಯಗಳ ವ್ಯಾಪ್ತಿ ಚಿಕ್ಕದು. ಹಾಗೆ ನೋಡಿದರೆ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯವಾದ ಯಕ್ಷಗಾನದಲ್ಲಿ ಉತ್ತಮ ದರ್ಜೆಯ ಹಾಸ್ಯಗಳು ಸೃಷ್ಟಿಯಾಗುತ್ತವೆ. ಮತ್ತು ಅವು ಆಶುಹಾಸ್ಯಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಇವರ ಮಿತಿಗಳೇನೆಂದರೆ ಅವರು ಹೇಳುವ ಹಾಸ್ಯದ ಮಾತುಗಳು (ಬಹುಪಾಲು) ಅತಿ ಪ್ರಾದೇಶಿಕವಾದವುಗಳು. ಕಲಾವಿದರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಸಂಗತಿಗಳನ್ನು ಪ್ರಸಂಗಕ್ಕೆ ಧಕ್ಕೆಯಾಗದಂತೆ ಜಾಣ್ಮೆಯಿಂದ ಹಾಸ್ಯಕ್ಕೆ ಇಳಿಸುವ ವಿದೂಷಕರು ಕರತಾಡನ ಗಿಟ್ಟಿಸುತ್ತಾರಾದರೂ ಸಮಸ್ತ ಜನತೆಗೆ ತಲುಪಲಾರದ ಕೊರತೆ ಎದ್ದು ಕಾಣುತ್ತದೆ.
ನಗೆಗಾರನೇ (ಸ್ಟಾಂಡ್ ಅಪ್ ಕಾಮಿಡಿಯನ್) ಹಾಸ್ಯಗಳನ್ನು ಸೃಷ್ಟಿಸುವ ಸೃಜನಶೀಲನಾಗಿದ್ದರೆ ಆತನ ಭವಿಷ್ಯ ದೀರ್ಘವಾಗಿರುತ್ತದೆ. ಬೇರೆಯವರು ಬರೆದಿದ್ದನ್ನು ಹೇಳುವ ಹಾಸ್ಯ ಹಾಸ್ಯವೇ ಆಗಿದ್ದರೂ ಅದರ ಖಜಾನೆಗೆ ಮಿತಿಗಳಿವೆ. ಮತ್ತು ಮೊದಲೇ ಓದಿದ, ಕೇಳಿದ ಪ್ರೇಕ್ಷಕನಿಗೆ ಅದು ಅತೀವ ಕಿರಿಕಿರಿಯನ್ನುಂಟುಮಾಡುತ್ತದೆ. ಹೀಗಾದಾಗಲೇ ನಗೆಗಾರರು ನಗೆಪಾಟಲಿಗೆ ಒಳಗಾಗತೊಡಗುತ್ತಾರೆ. ಜನಾಕರ್ಷಣೆ ಕಡಿಮೆ ಆಗತೊಡಗುತ್ತದೆ. ಹಾಸ್ಯೋತ್ಸವಗಳು, ‘ಇಲ್ಲಿ ಕುಳಿತಿರುವುದೇ ಅಲ್ಲಿ ಕುಳಿತರಾಯಿತೆಂಬ’(ಬೀಚಿ ಉವಾಚ) ಧೋರಣೆಯ ಜನಕ್ಕೆ ಸೀಮಿತವಾಗುತ್ತವೆ. ಪಾಶ್ಚಾತ್ಯ ನಗೆಗಾರರು ಸರಕು ಮುಗಿದಾಗ ಕ್ಲಬ್ಬುಗಳಲ್ಲಿ ಅಶ್ಲೀಲ ಜೋಕುಗಳನ್ನು ಹೇಳಿಕೊಂಡಾದರೂ ಬದುಕುವ ಅವಕಾಶಗಳಿವೆ. ಹಾಸ್ಯದ ಸೃಷ್ಟಿಗೆ ಅತಿ ಅಗ್ಗದ ಸಾಧನವೇ ಅಶ್ಲೀಲತೆ. ನಮ್ಮಲ್ಲಿ ಅದರ ಸಾಧ್ಯತೆಗಳು ಕಡಿಮೆಯಾದ್ದರಿಂದ ನಮ್ಮ ನಗೆಗಾರರು ಒಂದು ಹಂತಕ್ಕೆ ತಲುಪಿ ದಿಕ್ಕುಗಾಣದೇ ನಿಂತುಬಿಡುತ್ತಾರೆ. ಪ್ರಾಣೇಶರು ಮತ್ತು ಕೃಷ್ಣೇ ಗೌಡರು ಈ ಪ್ರಾಕಾರಕ್ಕೆ ತಕ್ಕಮಟ್ಟಿಗಿನ ನ್ಯಾಯ ಒದಗಿಸುತ್ತಾರಾದರೂ ಏಕತಾನದಿಂದ ಹೊರಬರುವುದಕ್ಕೆ ಸಾಧ್ಯವಾಗಿಲ್ಲ. ದಯಾನಂದರು ಮಿಮಿಕ್ರಿಗೆ ಸೀಮಿತವಾಗುತ್ತಾರೆ. ಇದು ಇವರುಗಳ ಬಗೆಗಿನ ಪುಕಾರಲ್ಲ. ದಿನ ನಿತ್ಯ ಹೊಸದನ್ನು ತರುವುದು ಸುಲಭವಲ್ಲ ಎಂಬುದನ್ನು ಯಾರೂ ಒಪ್ಪಿಕೊಳ್ಳಬೇಕಾದದ್ದೇ.
ಭಾರತೀಯ ಸ್ಟಾಂಡ್ ಅಪ್ ಕಾಮಿಡಿಯ ಬಗ್ಗೆ ಹೇಳುವಾಗ ರಾಜು ಶ್ರೀವಾಸ್ತವ್ ರನ್ನು ಪ್ರಸ್ತಾಪಿಸಲೇಬೇಕಾಗುತ್ತದೆ. ಬಾಲಿವುಡ್ ಸಿನಿಮಾಗಳಲ್ಲಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈತನ ಅಗಾಧ ಹಾಸ್ಯಪ್ರಜ್ಞೆ ಮತ್ತು ಪ್ರತಿಭೆ ಬೆಳಕಿಗೆ ಬಂದಿದ್ದು ‘ಲಾಫ್ಟರ್ ಚಾಲೆಂಜ್’ ಎಂಬ ಎಪಿಸೋಡುಗಳ ಮೂಲಕ. ಇವರ ಬಗ್ಗೆ ನಾನು ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ. ಹಿಂದಿ ಬಲ್ಲ ಎಲ್ಲ ಭಾಷೆಯ ಟೀವಿ ವೀಕ್ಷಕರು ಇವರ ಹಾಸ್ಯವನ್ನು ನೋಡಿರುತ್ತಾರೆ. ಆತ ಬದುಕನ್ನು ಅರ್ಥ ಮಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಆತನ ಪ್ರೆಸೆಂಟೇಶನ್ ಸ್ಕಿಲ್ ಸಾಟಿ ಇಲ್ಲದ್ದು. ಅವರ ಹಾಸ್ಯಗಳನ್ನು ನೋಡುತ್ತಿದ್ದರೆ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ದಂಧೆಯ ಜನ ತಮ್ಮ ಸುತ್ತಲಿನ ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳನ್ನು ನಿರಂತರ ಗಮನಿಸುತ್ತಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇಂತಹ ಮಾಹಿತಿಗಳನ್ನು ತುರ್ತಾಗಿ ತಮ್ಮ ಸರಕಾಗಿ ಮಾರ್ಪಡಿಸಿಕೊಳ್ಳುವ ಕಲೆಗಾರಿಕೆ, ಬೇಕಾಗುತ್ತದೆ. ಮುಂಬೈ ಲೋಕಲ್ ರೈಲುಗಳ ಬಗ್ಗೆ ತುಂಬ ಪರಿಣಾಮಕಾರಿಯಾಗಿ ಮಾತನಾಡುವ ರಾಜು ಖಾಲಿ ಬೋಗಿಗಳಲ್ಲಿ ಮೇಲಿನ ಹಿಡಿಕೆಗಳ ತೊನೆದಾಟದಿಂದ ಹಿಡಿದು ಸಣ್ಣ ಸಣ್ಣ ವಿವರಗಳನ್ನು ತೋರಿಸುವದನ್ನು ನೋಡಿಯೇ ಅನುಭವಿಸಬೇಕು. ನೇತಾಗಳನ್ನು ಹಂಗಿಸುವುದರಲ್ಲಿ ನಿಸ್ಸೀಮರು ರಾಜು. ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ತಂದೆಯೊಬ್ಬನ ತಳಮಳಗಳನ್ನು ತುಂಬಾ ನವಿರಾಗಿ ಚಿತ್ರಿಸುತ್ತಾ ಒಂದು ಹಂತದಲ್ಲಿ ನಮ್ಮ ಕಣ್ಣುಗಳನ್ನೂ ತೇವಗೊಳಿಸಿಬಿಡುತ್ತಾರೆ. ಘಟನೆಯ ಪಾತ್ರಗಳ ಭಾವದ ಜೊತೆ ನಿರ್ಜೀವ ವಸ್ತುಗಳಿಗೂ ಸಂವೇದನೆಗಳಿವೆಯೇನೋ ಎಂಬಂತೆ ಅಭಿವ್ಯಕ್ತಿಸುವ ರಾಜು ನಮ್ಮ ಜಯಂತ ಕಾಯ್ಕಿಣಿಯವರ ಬರಹಗಳನ್ನು ನೆನಪಿಗೆ ತರುತ್ತಾರೆ. ಒಂದುಸಲ ನೋಡಿಬಿಡುವ ಆಸೆಯಾದರೆ, ನಿಮಗೆ ಹಿಂದಿ ಅರ್ಥವಾಗುತ್ತಿದ್ದರೆ, ಯೂ ಟ್ಯೂಬ್ ನಲ್ಲಿ ‘ರಾಜು ಶ್ರೀವಾಸ್ತವ್’ ಎಂದೊಮ್ಮೆ ಹೊಡೆದು ನೋಡಿ. ನಮ್ಮ ನಗೆಗಾರರು ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ ಅನ್ನಿಸೀತು. ಸ್ಯಾಂಪಲ್ಲಿಗೆ ಕೆಳಗಡೆ ಲಿಂಕ್ ಕ್ಲಿಕ್ ಮಾಡಿ ನೋಡಿ.
http://uk.youtube.com/watch?v=5e6-PRoOhV8
ಕೊನೆಯ ಮಾತು. ನಮ್ಮಲ್ಲಿ ಹಾಸ್ಯಪ್ರಜ್ಞೆ ಎಂಬುದು ಮೊದಲಿಗಿಂತ ಬೆಳೆದಿದೆಯೋ, ಅಳಿದಿದೆಯೋ ಎನ್ನುವುದು ಪ್ರತ್ಯೇಕ ಚರ್ಚೆಯಾಗಬಲ್ಲ ವಸ್ತು. ಆದರೆ ಹಾಸ್ಯವನ್ನು ಸ್ವೀಕರಿಸುವ ಪ್ರೇಕ್ಷಕನಲ್ಲಂತೂ ಗಣನೀಯ ಬದಲಾವಣೆಗಳಾಗಿವೆ. ಹಳೇ ರಾಜ್ ಕುಮಾರ್ ಚಿತ್ರಗಳಲ್ಲಿನ ನರಸಿಂಹರಾಜು ಹಾಸ್ಯ ವರ್ತಮಾನದ ಪ್ರೇಕ್ಷಕನಿಗೆ ಅಷ್ಟಾಗಿ ಒಗ್ಗದಿರುವುದು ಪ್ರೇಕ್ಷಕನ ನಿರೀಕ್ಷೆಗಳಲ್ಲಾದ ಬದಲಾವಣೆಗಳನ್ನು ತೋರಿಸುತ್ತದೆ.
ಕನ್ನಡದಲ್ಲಿ ಇವತ್ತು ನಿಂತು ನಗಿಸುವುದರಲ್ಲಿ ಶ್ರೇಷ್ಠರು ಇದ್ದಾರಾದರೆ ಅದು ಮಾಸ್ಟರ್ ಹಿರಣ್ಣಯ್ಯನವರೇ. ಆದರೆ ಅವರನ್ನು ಈ ಪ್ರಾಕಾರಕ್ಕೆ ಪೂರ್ತಿ ಸೇರಿಸಲಾಗುವುದಿಲ್ಲ. ಅವರ ವ್ಯಾಪ್ತಿ ಅದಕ್ಕಿಂತಲೂ ದೊಡ್ಡದು.
-ಚಿನ್ಮಯ.

Saturday, October 11, 2008

ಗೊಂದಲವೆಂಬ ಗೊಂಡಾರಣ್ಯದಲ್ಲಿ...

ಯಾವ ಪಕ್ಷ, ಸಂಘಟನೆಗಳಿಗೂ ಸೇರಿರದ, ಸೆಕ್ಯುಲರ್, ಪೆಕ್ಯುಲಿಯರ್ ಇದ್ಯಾವುದೂ ಅಲ್ಲದ ಪ್ರಜೆ ಎಂಬುವನಿದ್ದಾನಲ್ಲ. ನನ್ನಂತವನು, ನಿಮ್ಮಂತವನು..ಇವನ ನಿಲುವೇನು ಇವತ್ತಿನ ದಿನಗಳಲ್ಲಿ? ಹೋದ ತಿಂಗಳು ಟೀವಿ ಧಾರವಾಹಿಗಳಿಗಿಂತ ಕರಾರುವಾಕ್ಕಾಗಿ ಬಾಂಬ್ ಸ್ಫೋಟಗಳಾದವು, ನೂರಾರು ಜನರು ಜೀವ ಕಳೆದುಕೊಂಡರು. ಚರ್ಚ್ ಗಳ ಮೇಲೆ ಧಾಳಿ ನಡೆದವು. ಓರಿಸ್ಸಾದಲ್ಲಿ ನನ್ ಒಬ್ಬರ ಮೇಲೆ ಅತ್ಯಾಚಾರದಂತಹ ಅಮಾನುಷ ಕೃತ್ಯಗಳಾದವು. ಇಂತ ಘಟನೆಗಳು ನೆಡೆದಾಗ ಟಿವಿ ಚಾನೆಲ್ಲುಗಳಿಗೆ, ಪತ್ರಿಕೆಗಳಿಗೆ, ರಾಜಕಾರಣಿಗಳಿಗೆ, ಧರ್ಮಕಾರಣಿಗಳಿಗೆ ಪೂರ್ಣಾವಧಿ ಕೆಲಸವಿರುತ್ತದೆ. ಬುದ್ಧಿಕಾರಣಿಗಳು ಇತ್ತೀಚಿನ ಸೇರ್ಪಡೆ. ನಮ್ಮದೇನಿದ್ದರೂ ಗೊಣಗಾಟ.
ರಕ್ತಸಿಕ್ತರನ್ನೂ ಬಿಡದೇ ಮೈಕಿನ ಕೋಲನ್ನು ಮೂತಿಗೆ ಹಿಡಿದುಬಿಡುವ ಸುದ್ಧಿ ಮಾಧ್ಯಮಗಳು ಘಟನೆಗಳನ್ನು ಇನ್ನೂಬೀಭತ್ಸವನ್ನಾಗಿ ಮಾಡಿಬಿಡುತ್ತವೆ. ಬುದ್ಧಿ ಜೀವಿಗಳು ಯಥಾಪ್ರಕಾರ ಶಾಂತಿಯ ಮಂತ್ರವನ್ನು ಪಠಿಸಿ ಸುಮ್ಮನಾಗುತ್ತಾರೆ. ಹೀಗಿರುವಾಗ ಶ್ರೀಸಾಮಾನ್ಯನ ನಿಲುವು ಏನೆಂಬುದು ಗೊತ್ತಾಗುವದೇ ಇಲ್ಲ. ಏಕೆಂದರೆ ಯಾರೂ ಅವನನ್ನು ಸಂದರ್ಶಿಸುವುದಿಲ್ಲ.
ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ಹಲವರಿಗೆ ತಮ್ಮ ನಿಲುವನ್ನು ಹೇಳಿಕೊಳ್ಳಲು ಅಡ್ಡಿ ಏನೆಂದರೆ ಬ್ರಾಂಡ್ ಆಗಿಬಿಡುವ ಭಯ. ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸಿದಿರೋ ನಿಮ್ಮನ್ನು ನೀವು ’ಬುದ್ಧಿಜೀವಿಗಳು’ ಎಂದು ಕರೆಸಿಕೊಳ್ಳುವ ಅಪಾಯವಿದೆ. ಹಿಂದುತ್ವದ ಹಿಂದೆ ಬಿದ್ದಿರೋ ನಿಮ್ಮನ್ನು ‘ಚೆಡ್ಡಿ ಜೀವಿಗಳು’ ಎಂದುಬಿಡುತ್ತಾರೆ. ಈಗಿನ ಹೊಸ ವ್ಯಾಖ್ಯಾನವೇನೆಂದರೆ. ಕೇವಲ ಹಿಂದೂಗಳ ಹಿತ ಕಾಯುವ ಸಮೂಹವನ್ನು ಕೋಮುವಾದಿಗಳೆಂದೂ, ಗಲಭೆಯಾದ ತಕ್ಷಣ ಗಡಬಡಿಸಿ ಎದ್ದು ಬುದ್ಧಿ ಹೇಳಲು ಬರುವವರನ್ನು ಬುದ್ಧಿವಾದಿಗಳೆಂದೂ, ಗಲಭೆಯಾಗಲಿ, ಬೇಕಾದ್ದಿರಲಿ ತಮಗೇನಾದರೂ ಸಿಗುತ್ತದೆಯೋ ಎಂದು ಸದಾ ಹೊಂಚು ಹಾಕಿ ಕುಳಿತಿರುವ ರಾಜಕಾರಣಿಗಳ ಸಮೂಹವನ್ನು ಅವಕಾಶವಾದಿಗಳೆಂದೂ ಕರೆಯಬಹುದಾಗಿದೆ
ಮೇಲೆ ಹೇಳಿದ ವಾದಿಗಳೆಲ್ಲ ಸೇರಿ ಸಾಮಾನ್ಯನಿಗೆ ಒಂದು ನಿಲುವನ್ನು ಸ್ಥಾಪಿಸಿಕೊಳ್ಳಲು ಸಾಧ್ಯವೇ ಆಗದ ಒಂದು ನಿರಂತರ ಗೊಂದಲದ ಸ್ಥಿತಿಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿವೆ. ಮಾಧ್ಯಮಗಳ ಪಾತ್ರವೂ ಬಹಳ ದೊಡ್ಡದು ಇದರಲ್ಲಿ. ನೋಡಿ, ನಮ್ಮಲ್ಲಿ ಎಲ್ಲವಕ್ಕೂ ಒಂದು ನಿರಾಕರಣವಿದೆ. ಮೊನ್ನೆ ದೆಹಲಿಯಲ್ಲಿ ಭಯೋತ್ಪಾದಕರು ಎನಿಸಿಕೊಂಡವರ ಪೊಲೀಸ್ ಎನ್ ಕೌಂಟರ್ ನೆಡೆಯಿತಲ್ಲ. ಒಬ್ಬ ಅತ್ಯಂತ ದಕ್ಷ ಅಧಿಕಾರಿಯೂ ಗುಂಡೇಟಿನಿಂದ ಸತ್ತರು. ಬದುಕುಳಿದ ಒಬ್ಬಿಬ್ಬರನ್ನು ಹಿಡಿದು ತಂದಿದ್ದು ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ಮರುದಿನವೇ ಇನ್ನೊಂದು ವರದಿ ಪ್ರಕಟವಾಗಿಬಿಡುತ್ತದೆ. ಪೊಲೀಸರು ಒತ್ತಡ ಹೆಚ್ಚಾದಾಗ ಕೆಲವು ಪಾಪದ ಸಾಬರ ಹುಡುಗರನ್ನು ಹಿಡಿದು ಮುಖಕ್ಕೆ ಕರಿಮುಸುಕು ತೊಡಿಸಿದ್ದಾರೆಂಬ ಆರೋಪವಿರುತ್ತದೆ. ಮಾನವ ಹಕ್ಕುಗಳ ಸದಸ್ಯರು ತಗಾದೆ ತೆಗೆಯುತ್ತಾರೆ. ನಮಗೂ ಇದ್ದಿರಬಹುದೇ ಎಂಬ ಆತಂಕ ಹುಟ್ಟಿಬಿಡುತ್ತದೆ. ದೂರದ ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾಲಬುಡದ ಕರಾವಳಿಯಲ್ಲಿಯೇ ಬಂಧನಗಳು ನಡೆದಾಗ, ಕಣ್ಣಿಗೆ ಕಾಣುವ ಮೀಸೆ ಇಲ್ಲದ ಗಡ್ಡಧಾರಿಗಳೆಲ್ಲ ಭಯೋತ್ಪಾದಕರಂತೆ ಕಂಡುಬಿಡುತ್ತಾರೆ. ಊರಿನ ತುದಿಗೆ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವ, ಸೈಕಲ್ ರಿಪೇರಿಯ ನಿರುಪದ್ರವಿ ಬಡ ಸಾಯ್ಬ ಭಟ್ಕಳಕ್ಕೆ ಹೋಗುವುದು ಹಾಗಿರಲಿ,ಭಟ್ಕಳ ಬೋರ್ಡ್ ಇರುವ ಬಸ್ಸಿನಿಂದ ಇಳಿದರೂ ಎಂಥೆಂತದೋ ಅನುಮಾನ ಹುಟ್ಟಿಬಿಟ್ಟಾಗ ನಮ್ಮ ಯೋಚನಾ ಕ್ರಮದ ಬಗ್ಗೆ ನಾಚಿಕೆಯಾಗಿಬಿಡುತ್ತದೆ. ಆದರೆ ಇವೆಲ್ಲ ನಮ್ಮ ಗೊಂದಲಗಳ ಫಲಗಳೆಂದೇ ನನ್ನ ಅನಿಸಿಕೆ.
ನಾನಾವತಿ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿದಾಗ ಪಾಪ, ಮೋದಿ ಮುಗ್ಧ ಇದೆಲ್ಲ ಕಾಂಗ್ರೆಸ್ಸಿಗರ ಪಿತೂರಿ ಎಂದು ಮರುಗಿದೆವು ನಾವು – ನನ್ನಂತವರು. ಬೆನ್ನಲ್ಲೇ ಬಂತಲ್ಲ ಮತ್ತೊಂದು ವರದಿ. ಮೋದಿ ನಾನವತಿಯನ್ನು ಹೊಂದಿಸಿಕೊಡಿದ್ದಾರೆಂದು ತೆಹಲ್ಕಾ ಹೇಳಿಕೊಂಡಿತು. ”ನಾನಾವತಿ ಹಮಾರಾ ಆದ್ಮಿ ಹೈ, ಹಮ್ ಉನ್ ಕೊ ಫಿಟ್ ಕರ್ಲೇಂಗೆ” ಎಂದು ಬಿಜೆಪಿಯ ಎಮ್ಮೆಲ್ಲೆಯೊಬ್ಬ ಹೇಳಿದ್ದು ನಮ್ಮ ಕ್ಯಾಮರಾದಲ್ಲಿದೆ ಎಂದಳು ತೆಹಲ್ಕಾ ಪತ್ರಕರ್ತೆ. ಹೇಳಿ ಯಾವುದು ಸತ್ಯ ಯಾವುದು ಸುಳ್ಳು.
ಇಂತಹ ನಿರಾಕರಣಗಳು ಹಿಂದೆ ಇರಲಿಲ್ಲವೆಂದಲ್ಲ. ಜಗತ್ತಿನ ಎಲ್ಲೆಡೆಯಲ್ಲೂ ಇವೆ. ಆದರೆ ಬಹು ಪ್ರಮುಖ ಘಟನೆಗಳಿಗೆ, ವ್ಯಕ್ತಿತ್ವಗಳಿಗೆ ಸಂಬಂಧಪಟ್ಟಂತೆ ನಿರಾಕರಣಗಳಿವೆ. ಹಿಟ್ಲರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದ ಇವುಗಳಲ್ಲಿ ಪ್ರಮುಖವಾದದ್ದು. ತಾಜ್ ಮಹಲ್ ಕಟ್ಟಿಸಿದ್ದು ಷಹಜಹಾನ್ ಅಲ್ಲವೇ ಅಲ್ಲ ಎಂಬ ವಾದವೂ ಈ ಗುಂಪಿಗೆ ಸೇರುತ್ತದೆ. ಈಗ ಹಾಗಿಲ್ಲ. ನಮ್ಮ ಸುತ್ತಲಿನ ಯಾವುದೇ ಕ್ಷುಲ್ಲಕ ಘಟನೆಗೂ ಒಂದು ನಿರಾಕರಣವುಂಟು. ಮತ್ತು ಇವೇ ನಮ್ಮನ್ನು ಸದಾ ಗೊಂದಲದಲ್ಲಿರುವಂತೆ ಮಾಡುತ್ತವೆ. ನಮಗೆ ತಿಳಿದಿರುವುದು ಸತ್ಯವೆಂದು ಭಾವಿಸಿ ಕುಳಿತುಕೊಳ್ಳುವ ಹಾಗಿಲ್ಲ.
ಮೊನ್ನೆ ಎನ್ ಡಿ ಟಿವಿಯಲ್ಲಿ, ಓರಿಸ್ಸಾದಲ್ಲಿ ನೆಡೆದ ಕ್ರೈಸ್ತರ ಮೇಲಿನ ದೌರ್ಜನ್ಯದ ಕುರಿತಾದ ಚರ್ಚೆಯೊಂದನ್ನು ವೀಕ್ಷಿಸುತ್ತಿದ್ದೆ. ಹಿಂದೂ ಜಾಗರಣ ವೇದಿಕೆಯ ಪ್ರತಿನಿಧಿಯೊಬ್ಬರು ಇಂತಹ ಘಟನೆಗಳ ಹಿಂದೆ ಮತಾಂತರದ ಪಾತ್ರ ಬಹಳ ದೊಡ್ಡದಿದೆ ಎಂಬುದನ್ನು ಮಂಡಿಸಿದರು. ಮಂಗಳೂರಿನ ಸುತ್ತಮುತ್ತ ಕ್ರೈಸ್ತ ಮತಾಂತರ ಹೇಗೆ ವ್ಯವಸ್ಥಿತವಾಗಿ ನೆಡೆಯುತ್ತಿದೆಯೆಂದು ವಿಶದವಾಗಿ ವಿವರಿಸಿದರು. ಕ್ರೈಸ್ತ ಪ್ರತಿನಿಧಿ ಅದಕ್ಕೆ ಉತ್ತರವಾಗಿ ಹೇಳಿದರು. “ನಾವು ಯಾರನ್ನು ಮತಾಂತರ ಮಾಡುತ್ತಿದ್ದೇವೆಂದು ಗಮನಿಸಿ, ನಿಮ್ಮ ಧರ್ಮ ಅವರನ್ನು ಸೂಕ್ತವಾಗಿ ನೆಡೆಸಿಕೊಂಡಿಲ್ಲ. ಅವರಿಗೆ ನಾವು ಬದುಕು ಕೊಡುತ್ತಿದ್ದೇವೆ.” ಎಂದರು. ಹಾಗೆಯೇ ಮುಂದುವರಿದು, “ಅದಿರಲಿ, ನಮ್ಮಲ್ಲಿ ಅದಕ್ಕೆ ಅವಕಾಶವಾದರೂ ಇದೆ, ನನ್ನನ್ನು ನೀವು ಹಿಂದೂ ಧರ್ಮಕ್ಕೆ ಮತಾಂತರಿಸಿಕೊಳ್ಳುತ್ತೀರೋ?“ ಎಂದು ಪ್ರಶ್ನಿಸಿದರು.
“ಅವಶ್ಯ ಬನ್ನಿ, ನಿಮಗೆ ಸ್ವಾಗತ” ಎಂದರು ಇವರು.
ಅವರ ತತ್ತಕ್ಷಣದ ಪ್ರಶ್ನೆಯೇನು ಗೊತ್ತೇ? “ನನ್ನನ್ನು ನೇರವಾಗಿ ಬ್ರಾಹ್ಮಣನನ್ನಾಗಿ ಮಾಡಿಕೊಳ್ಳುತ್ತೀರೋ?”
“ನೀವು ನಿಮಗೆ ಬೇಕಾದ ಜಾತಿಯನ್ನು ಆಯ್ದುಕೊಳ್ಳಬಹುದು” ಎಂದರು ಜಾಗರಣ ವೇದಿಕೆಯವರು.
ನನಗೆ ಇಲ್ಲಿ ಎರಡು ಸಂಗತಿಗಳು ಕಾಣುತ್ತವೆ. ಪ್ರಶ್ನಿಸುವ ಅವರಿಗೂ, ಉತ್ತರಿಸುವ ಇವರಿಗೂ ಮತ್ತು ನಮಗೂ ಗೊತ್ತು. ಮೇಲಿನ ಹೇಳಿಕೆಗಳು ಎಂದಿಗೂ ಕಾರ್ಯ ರೂಪಕ್ಕೆ ಬರಲಾರವು. ಈ ಪ್ರಶ್ನೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಬುಡಕ್ಕೆ ನಮ್ಮನ್ನು ಕೊಂಡೊಯ್ದು ನಿಲ್ಲಿಸುತ್ತದೆ. ಮತ್ತು ಮುಂದದು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಜಾತಿ ಬೇರುಗಳು ಎಷ್ಟು ಆಳಕ್ಕೆ ಇಳಿದುಬಿಟ್ಟಿವೆಯೆಂದರೆ, ಕ್ರೈಸ್ತರ ಆಮಿಷಗಳಿಗೆ ಒಲಿದು ಹಿಂದೂ ಸಮೂಹದ ಎಲ್ಲ ಜಾತಿಗಳಿಂದ ಒಂದಿಷ್ಟು ಮತಾಂತರವಾಗಿಬಿಟ್ಟಿದ್ದರೆ ಕಾಲಕ್ರಮೇಣ ಬ್ರಾಹ್ಮಣ ಕ್ರೈಸ್ತರು, ವಕ್ಕಲಿಗ ಕ್ರೈಸ್ತರು, ಕುರುಬ ಕ್ರೈಸ್ತರು ಇತ್ಯಾದಿಗಳೆಲ್ಲ ಹುಟ್ಟಿಕೊಂಡಿರುತ್ತಿದ್ದವು.

ಎರಡನೆಯದು, ಹಿಂದೂಗಳಲ್ಲಿ ಕೆಳ ಜಾತಿಯವರ ಬದುಕು ದುಸ್ತರವೆಂಬುದು ಎಷ್ಟು ನಿಜವೋ, ಕ್ರೈಸ್ತ ಧರ್ಮ ಮತಾಂತರಗೊಂಡವರ ಬದುಕನ್ನು ಹಸನಾಗಿಸುತ್ತದೆ ಎಂಬುದು ಒಂದು ಭ್ರಮೆಯೇ. ಕ್ರೈಸ್ತ ಧರ್ಮ ಮತಾಂತರಗೊಂಡವರಿಗೆ ಒಂದು ಅನನ್ಯತೆಯ ಗೌರವವನ್ನು ತಂದು ಕೊಡುತ್ತದೆ ಎಂದು ಅನಂತ ಮೂರ್ತಿಗಳು ಯಾವ ಅರ್ಥದಲ್ಲಿ ಹೇಳಿದರೋ ತಿಳಿಯೆ.

ನಿರಾಕರಣದ ಬಗ್ಗೆ ಹೇಳುವಾಗ ಸಮರ್ಥನೆಯ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ.
ಮುಸ್ಲಿಂ ಜಗತ್ತಿಗೆ ಅದರದ್ದೇ ಆದ ಸಮರ್ಥನೆ ಇರುತ್ತದೆ. ನಮ್ಮನ್ನು ಮುಖ್ಯವಾಹಿನಿಯಲ್ಲಿ ಯಾವತ್ತೂ ಪರಿಗಣಿಸಲಿಲ್ಲ. ನಿಮ್ಮ ಕಾಲನಿಗಳಲ್ಲಿ ನಮಗೆ ಮನೆ ಕೊಡಲಾರಿರಿ, ನಿಮ್ಮ ಕಂಪನಿಗಳಲ್ಲಿ ಕೆಲಸ ಕೊಡಲಾರಿರಿ. ಗುಜರಾತಿನಲ್ಲಾದ ಮುಸ್ಲಿಮರ ಕಗ್ಗೊಲೆಯಿಂದ ನೊಂದ ಕೆಲವರು ಭಯೋತ್ಪಾದಕರಾಗಿರಬಹುದು. ಇತ್ಯಾದಿ..ಇತ್ಯಾದಿ.
ನೀವು ದಿನ ಬೆಳಗಾದರೆ ಸಿಕ್ಕ ಸಿಕ್ಕಲ್ಲಿ ಬಾಂಬ್ ಸ್ಫೋಟಿಸುತ್ತಿದ್ದರೆ ನಿಮ್ಮನ್ನು ಹತ್ತಿರ ಸೇರಿಸುವುದಾದರೂ ಹೇಗೆ? ಎಂಬುದು ಇನ್ನೊಂದು ಸಮೂಹದ ವಾದ. ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪ್ರಶ್ನೆಯಷ್ಟೇ ಗೊಂದಲಕಾರಿಯಾದದ್ದು ಇದು.
ಎತ್ತ ಸಾಗುತ್ತಿದ್ದೇವೆ ನಾವು?
-ಚಿನ್ಮಯ.

Sunday, October 5, 2008

ಟಾಟಾ ನ್ಯಾನೊ ಮತ್ತು ನಮ್ಮ ವಿಜ್ಞಾನ, ತಂತ್ರಜ್ಞಾನ

“ಶಾಂತಿಯ ಬಗ್ಗೆ ಚರ್ಚಿಸುವಾಗ ಗಾಂಧಿ ಎಂಬ ಹೆಸರನ್ನು ಉಪೇಕ್ಷಿಸಿದಿರಾದರೆ ಅದು ನಿಮ್ಮ ಸ್ವಂತ ರಿಸ್ಕು” ಹೀಗೆ ಹೇಳಿದವರು ಖ್ಯಾತ ಸಮಾಜ ಸುಧಾರಕ ಮಾರ್ಟಿನ್ ಲೂಥರ್ ಕಿಂಗ್.
ಟಾಟಾ ಕುರಿತು ಇಂತಹುದೇ ಒಂದು ಪ್ರಮೇಯ ಈಗ ಜಾಗತಿಕ ಮಟ್ಟದ ಕಾರು ತಯಾರಿಕರಿಗೆ ಮತ್ತು ಪೂರೈಕೆದಾರ ಸಂಸ್ಥೆಗಳಿಗೆ ಒದಗಿಬಂದಿದೆ. ಈಗ ಇವರ್ಯಾರೂ ಟಾಟಾ ಸಂಸ್ಥೆಯನ್ನು ಉಪೇಕ್ಷಿಸುವಂತಿಲ್ಲ. ಉಪೇಕ್ಷಿಸಿದರೆ ಅವರಿಗೇ ಹಾನಿ. ಕಾರು ತಯಾರಿಕರಿಗೆ ಟಾಟಾ ಒಂದು ಸವಾಲಾದರೆ, ಪೂರೈಕೆದಾರರಿಗೆ (ಸಪ್ಲಾಯರ್ಸ್) ಟಾಟಾ ಹೊಸ ಆಶಾಕಿರಣ. ತಮ್ಮದೇ ಪ್ರತಿಷ್ಟಿತ ಕಂಪನಿಗಳನ್ನು ಕಬಳಿಸುತ್ತಿರುವ ಟಾಟಾ ಬ್ರಿಟಿಷರಿಗೆ ಈಸ್ಟ್ ಇಂಡಿಯಾ ಕಂಪನಿಯೇ ಹೊಸ ಅಂಗಿ ತೊಟ್ಟು ಬಂದಂತೆ ಗೋಚರಿಸುತ್ತಿದೆ.
ರತನ್ ರ ಕನಸು ನ್ಯಾನೋ ದತ್ತ ಇಡೀ ಜಗತ್ತೇ ಭರವಸೆಯ ಕಣ್ಣುಗಳಿಂದ ನೋಡುತ್ತಿರುವಾಗ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದ ಕಣ್ಣುಗಳಲ್ಲಿ ಆಸೆಯನ್ನೂ ಹೊರಹೊಮ್ಮಿಸಿದೆ. ಸ್ವಯಂವರದಲ್ಲಿ ರತನ್ ಟಾಟಾ ಎಂಬ ಬ್ರಹ್ಮಚಾರಿಯ ಕುವರಿ ನ್ಯಾನೋ ಯಾರನ್ನು ವರಿಸುತ್ತಾಳೆಂಬುದನ್ನು ಕಾದು ನೋಡಬೇಕಾಗಿದೆ. ಕರ್ನಾಟಕ ಮತ್ತು ಆಂಧ್ರ ನಾನೋ ನೀನೋ ಎಂದು ಪೈಪೋಟಿಗೆ ಬಿದ್ದಿವೆ.
ಸುದ್ಧಿವಾಹಿನಿಗಳಲ್ಲಿ ಸದರಿ ಮಾಹಿತಿ ಪ್ರಸಾರವಾದಾಗ ಎಲ್ಲ ಕನ್ನಡಿಗರಂತೆ ನನಗೂ ಸಂತಸವಾಯಿತು. ಅದರಲ್ಲೂ ಧಾರವಾಡದಲ್ಲಿ ಇಂತಹ ಕೈಗಾರಿಕೆಯೊಂದು ಸ್ಥಾಪನೆಯಾಗುತ್ತದೆಯೆಂದರೆ ಬಹಳ ಖುಶಿಯ ಸಂಗತಿ. ಬಹುಕಾಲದಿಂದ ಅಲಕ್ಷಕ್ಕೊಳಗಾಗಿದ್ದ ಉತ್ತರ ಕರ್ನಾಟಕಕ್ಕೆ ಇದೊಂದು ಬಂಪರ್ ಅವಕಾಶವಾಗುವುದರಲ್ಲಿ ಸಂಶಯವಿಲ್ಲ. ಕರ್ನಾಟಕದಲ್ಲಿ ಬೃಹತ್ ಕೈಗಾರಿಕಾ ವಿಕೇಂದ್ರಿಕರಣದ ಮೊದಲ ಹೆಜ್ಜೆಯಾಗಲಿದೆ ಇದು.
ನ್ಯಾನೋಕರ್ನಾಟಕಕ್ಕೆ ಬಂತೆಂದು ಭಾವಿಸೋಣ. (ಇನ್ನೂ ದೇವೆಗೌಡರ ಅಸ್ತ್ರ ಹೊರಬಿದ್ದಿಲ್ಲ. ಅದನ್ನು ದೇವರು ಮಾತ್ರ ಬಲ್ಲ.) ಇದರ ಮೊಟ್ಟ ಮೊದಲ ಫಲಾನುಭವಿಗಳು ರಿಯಲ್ ಎಸ್ಟೇಟ್ ಮಂದಿ. ಇವರಿಗೆ ಮಾಹಿತಿಗಳು ಖಚಿತವಾಗಿರಬೇಕೆಂಬುದೇನಿಲ್ಲ. ವದಂತಿಗಳಿದ್ದರೂ ಸಾಕು. ಇವರು ಆಜನ್ಮ ಪರಾವಲಂಬಿ ಜೀವಿಗಳು. ಅಭಿವ್ರದ್ಧಿ ಸರಕಾರದಿಂದಾಗಲಿ, ಸಂಘ ಸಂಸ್ಥೆಗಳಿಂದಾಗಲಿ, ಅವುಗಳನ್ನೆಲ್ಲ ಜನಕ್ಕೆ ತೋರಿಸಿ ತಮ್ಮ ಅಭಿವೃದ್ಧಿ ಮಾಡಿಕೊಂಬವರು ಇವರು. ಈಗಾಗಲೇ ಧಾರವಾಡದ ಸುತ್ತಮುತ್ತ ಬೆಟ್ಟ ಬಯಲುಗಳೆಲ್ಲ ಭಯಂಕರ ಬೆಲೆ ಪಡೆದುಕೊಂಡಿರಬಹುದು. ಸರಕಾರ ಪ್ರಾರಂಭದಲ್ಲಿಯೇ ಇಂತಹ ಬೆಳವಣಿಗೆಗಳನ್ನು ನಿಯಂತ್ರಿಸಬೇಕಾಗಿದೆ. ನಿವೇಶನಗಳನ್ನು ಮಾರಾಟಕ್ಕೆಂದೇ ಖರೀದಿಸುವವರನ್ನು ಹೇಗಾದರೂ ತಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಧಾರವಾಡದಲ್ಲಿ ಮಿನಿ ಬೆಂಗಳೂರು ಉದಯಿಸಲಿದೆ. ಸಾಮನ್ಯ ಅಂಗಡಿಕಾರರಿಗೆ, ಶಾಲಾ ಮಾಸ್ತರರಿಗೆ, ಮತ್ತು ಇನ್ನಿತರ ಸಣ್ಣ ಪಗಾರದ ಜನರಿಗೆ ಧಾರವಾಡ ತುಟ್ಟಿಯಾಗುವ ಕಾಲ ದೂರವಿಲ್ಲ.
ಮತ್ತೊಂದು ಪ್ರಮುಖ ವಿಷಯವೆಂದರೆ ಉದ್ಯೋಗಾವಕಾಶಗಳು. ಸರಕಾರ ನ್ಯಾನೊದಂತಹ ದೊಡ್ಡ ಉದ್ದಿಮೆಗಳನ್ನು ರಾಜ್ಯಕ್ಕೆ ತರುವಾಗ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆಯ ಕರಾರನ್ನು ಅಳವಡಿಸುವದಕ್ಕೆ ಪ್ರಯತ್ನಿಸಬೇಕು. ಕಸಗುಡಿಸುವವರು ಮತ್ತು ಇತರೇ ಕೆಳಮಟ್ಟದ ಕೆಲಸಗಳಿಗೆ ನಮ್ಮವರು ಮತ್ತು ಅಧಿಕಾರಿ ವರ್ಗ ಮಹಾರಾಷ್ಟದವರು, ಬಂಗಾಳದವರಾದರೆ ಹೆಚ್ಚಿನ ಪ್ರಯೋಜನವಿಲ್ಲ. ಇದು ಭಾಷಾಭಿಮಾನದ ಪರಿಧಿಯನ್ನು ಮೀರಿದ್ದು. ಆದರೆ ಒಂದು ಭೂಭಾಗದ ಜನರ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ. ಧಾರವಾಡದಲ್ಲಿನ ಉದ್ದಿಮೆಯೊಂದರಲ್ಲಿ ದೂರದ ಮಹಾರಾಷ್ಟ್ರದ ಜನತೆ ಬಹು ಸಂಖ್ಯೆಯಲ್ಲಿ ಉದ್ಯೋಗ ಪಡೆದರೆ ಅದು ಸಹಜವಾಗಿ ಸ್ಥಳೀಕರ ಅಸಹನೆಗೆ ಕಾರಣವಾಗುತ್ತದೆ. ಹಾಗೆ ಕೆಲಸ ಮಾಡುವ ಮರಾಠಿಗರು ನಮಗೂ ಮಹಾರಾಷ್ಟ್ರಕ್ಕೂ ಎಂದಿಗೂ ಸೇತುವೆಯಾಗಲಾರರು.
ಹೀಗೆ ಹೇಳುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸ್ಥಳೀಯತೆಯೆಂಬುದೇ ನಮ್ಮ ಪ್ರತಿಭೆ ಮತ್ತು ಅರ್ಹತೆಯಾಗಬಾರದು. ಉದ್ದಿಮೆಗಳು ನಿರ್ದಿಷ್ಟ ಪರಿಣಿತರನ್ನು ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಹೋಗದಂತೆ ಮಾಡಬೇಕಾಗಿದೆ. ಆದರೆ ಅದು ಸಾಕಾರವಾಗುವುದು ಹೇಗೆ? ಇಲ್ಲಿ ಸರಕಾರ, ಕೈಗಾರಿಕೋದ್ಯಮಿಗಳು, ಮತ್ತು ಜನರು ಸಮಾನ ಜವಾಬ್ದಾರರಾಗುತ್ತಾರೆ. ಉದಾಹರಣೆಗೆ, ಧಾರವಾಡದಲ್ಲಿ ನ್ಯಾನೊ ಸ್ಥಾಪನೆಯ ಜೊತೆಯಲ್ಲೇ ಟಾಟಾ ಸ್ಥಳೀಯ ವಿಶ್ವವಿದ್ಯಾಲಯಗಳಲ್ಲಿ ಸರಕಾರದ ಸಹಕಾರದೊಂದಿಗೆ ಸಂಶೋಧನಾ ಘಟಕಗಳನ್ನು ಪ್ರಾರಂಭಿಸಬೇಕು. Automotive manufacturing, Automotive design, Lean manufacturing ಇತ್ಯಾದಿ ಕೋರ್ಸುಗಳನ್ನು ಪ್ರಾರಂಭಿಸಬೇಕು. ಮತ್ತು ಈ ಕೋರ್ಸುಗಳ ಸಿಂಹಪಾಲು ರಾಜ್ಯದ ಜನತೆಗೇ ದಕ್ಕುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ, ವಿದ್ಯಾರ್ಥಿಗಳು ನಿರಂತರ ಮ್ಯಾನುಫಾಕ್ಚರಿಂಗ್ ಪರಿಸರದಲ್ಲಿ ಬೆಳೆಯುವುದರಿಂದ ಹೆಚ್ಚಿನ ಆವಿಷ್ಕಾರಗಳನ್ನು ನಿರೀಕ್ಷಿಸಬಹುದು. ಮೂಲತ: ನಮ್ಮಲ್ಲಿ ಅಪ್ಲೈಡ್ ಸೈನ್ಸ್ ನ ಕೊರತೆ ಇದೆ. “ಭಾರತೀಯರಲ್ಲಿ ತಂತ್ರಜ್ಞಾನವೆಂಬುದು ಇನ್ನೂ ಕೈ ಬೆರಳುಗಳಿಗೆ ರವಾನೆಯಾಗಿಲ್ಲ” ಎಂಬ ಹಿರಿಯ ಕೈಗಾರಿಕಾ ಬರಹಗಾರರೊಬ್ಬರ (ಅವರ ಹೆಸರು ಗುರುಚರಣ್ ದಾಸ್ ಇರಬೇಕು) ಮಾತು ಬಹಳ ಸತ್ಯವೆನ್ನಿಸುತ್ತದೆ.
ನಾನು ಬ್ರಿಟಿಷರ ನಾಡಿನಲ್ಲಿ ಕಾರು ತಯಾರಿಕೆಗೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಡಿಸೈನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪರ್ಚೇಸ್ ವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ನನಗಿಂತ ಉತ್ತಮವಾಗಿ, ಸಮರ್ಥವಾಗಿ ಕಾರಿನ ವಿನ್ಯಾಸದ ಬಗ್ಗೆ, ಇತರೇ ಟೆಕ್ನಿಕ್ ಗಳ ಬಗ್ಗೆ ಮಾತನಾಡಬಲ್ಲ. ಇವರು ಕಳೆದ ಶತಮಾನದ ಆದಿಯಿಂದ ಕಾರು ಬಳಸುತ್ತಿರುವವರು ಎಂಬುದು ನಿಜವಿದ್ದರೂ ನನ್ನ(ಮ್ಮ) ಅಜ್ಞಾನಕ್ಕೆ ಅದು ಸಮರ್ಥೆನೆಯಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಇವರುಗಳ ಬದುಕಿನಲ್ಲಿ ಹೇಗೆ ಹಾಸು ಹೊಕ್ಕಾಗಿದೆ ಎಂಬುದಷ್ಟೇ ನನಗೆ ಮುಖ್ಯವಾಗಿ ಕಾಣುತ್ತಿರುವುದು. ಇಲ್ಲಿ ನನ್ನ ಮಿತ್ರನೊಬ್ಬನ ಅನುಭವವನ್ನು ದಾಖಲಿಸುವುದು ಉಚಿತವೆನಿಸುತ್ತದೆ. ಆತ ಬೆಂಗಳೂರಿನಲ್ಲಿ ಅಮೇರಿಕನ್ ಮೂಲದ ಕಾರು ತಯಾರಿಕಾ ಸಂಸ್ಥೆಯ ಡಿಸೈನ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾನೆ. ಒಮ್ಮೆ ಆತನನ್ನು ಅಮೆರಿಕಾದ ಕೇಂದ್ರ ಸಂಸ್ಥೆಗೆ ಚರ್ಚೆಯೊಂದಕ್ಕೆ ಆಹ್ವಾನಿಸಲಾಯಿತು. “ಕಳೆದ ವರ್ಷದಿಂದ ಈ ವರ್ಷಕ್ಕೆ ನಿಮ್ಮ ಕೆಲಸದಲ್ಲಿ ಏನು ಪ್ರಗತಿ ಸಾಧಿಸಿದ್ದೀರೆಂದು ಹೇಳಬಲ್ಲಿರಿ?” ಎಂದು ಹಿರಿಯ ಉದ್ಯೋಗಿಯೊಬ್ಬರು ಅನೌಪಚಾರಿಕವಾಗಿ ಈತನನ್ನು ಕೇಳಿದರು.
“ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅರ್ಥಪೂರ್ಣವಾದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ” ಎಂದ ಮಿತ್ರ.
ಸ್ವಲ್ಪ ವಿವರಿಸಿ ನಿಮ್ಮ ಮಾತನ್ನು ಎಂದರು ಅವರು.
“ನಮ್ಮ ಬೆಂಗಳೂರಿನ ವಿಭಾಗದಲ್ಲಿ ಕೆಲಸ ಮಾಡುವ ಒಟ್ಟೂ ಆರು ಸಾವಿರ ಉದ್ಯೋಗಿಗಳಲ್ಲಿ ಶೇಕಡಾ ಹತ್ತು ಜನರ ಬಳಿಯೂ ಕಾರು ಎಂಬ ಪದಾರ್ಥವಿಲ್ಲ. ಆದರೆ ದಿನ ನಿತ್ಯ ನಾವುಗಳು ಕಾರಿನ ವಿವಿಧ ಭಾಗಗಳ ಡಿಸೈನ್ ಮತ್ತು ಡೆವೆಲಪ್ ಮೆಂಟ್ ಕಾರ್ಯದಲ್ಲಿ ಮುಳುಗಿದ್ದೇವೆ. ಕಾರಿನ HVAC ಭಾಗದ ಡಿಸೈನ್ ಮಾಡುತ್ತಿರುವ ಉದ್ಯೋಗಿಯು ಜನ್ಮದಲ್ಲಿ ಆ ವಸ್ತುವನ್ನು ನೋಡಿರುವುದಿಲ್ಲ. ಕೇವಲ ಪುಸ್ತಕ ಜ್ಞಾನ ಮತ್ತು ಡಿಜಿಟಲ್ ಮಾಡೆಲ್ ಗಳಷ್ಟೇ ಆತನ ಆಧಾರ. ಕನಿಷ್ಟ ಪಕ್ಷ ಕಾರೊಂದನ್ನು ಅರ್ಧ ಸೀಳೊಂದನ್ನು (ಡಿಸೆಕ್ಷನ್) ನಮ್ಮಲ್ಲಿ ತಂದಿಟ್ಟರೆ ಅನುಕೂಲವಾಗುತ್ತದೆ. ಅದಿಲ್ಲದಿದ್ದರೆ ನಮ್ಮ ಕೆಲಸ ಕೇವಲ ಡಿಸೈನ್ ಪಡಿಚಾಕರಿಯಾಗುತ್ತದೆ. ಡಿಸೈನ್ ಎಂದು ಕರೆಸಿಕೊಳ್ಳುವುದಿಲ್ಲ”. ಎಂದು ವಿವರಿಸಿದ.
ಈ ಮೇಲಿನ ಹೇಳಿಕೆಗಳು ನಮ್ಮ ಅಕೆಡೆಮಿಕ್ ಶಿಕ್ಷಣದ ಸ್ವರೂಪದಲ್ಲಿ ಬದಲಾವಣೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ. ವಿದೇಶಿ ಕಂಪನಿಗಳು ಮೂಲ ಸಂಶೋಧನೆಯನ್ನು ತಮ್ಮಲ್ಲೇ ಇಟ್ಟುಕೊಂಡು ಅಗ್ಗದ ಮಾನವ ಸಂಪನ್ಮೂಲಗಳಾಗಿ ನಮ್ಮನ್ನು ಬಳಸಿಕೊಳ್ಳುತ್ತವೆ. ಟೊಯೊಟಾ ಸಂಸ್ಥೆ ತನ್ನ ಸಂಶೋಧನಾ ಘಟಕವನ್ನು ಜಪಾನಿನ ವಿಶ್ವವಿದ್ಯಾಲಯಗಳಲ್ಲಿ ತೆರೆಯುತ್ತದೆಯೇ ಹೊರತು ಭಾರತದಲ್ಲಲ್ಲ. ಭಾರತದಲ್ಲಿ ಇಂತಹ ಕೆಲಸಗಳು ಟಾಟಾ, ಬಜಾಜ್, ಮಹಿಂದ್ರಾ ದಂತಹ ಸಂಸ್ಥೆಗಳಿಂದ ಆಗಬೇಕಾಗಿದೆ. ಪ್ರಸ್ತುತದಲ್ಲಿ ನಾವು ತಂತ್ರಜ್ಞಾನದ ಬಳಕೆದಾರರಷ್ಟೇ ಆಗಿದ್ದೇವೆ. ಆದರೆ ಸೃಷ್ಟಿಕಾರರಾಗಿಲ್ಲ. ಹಾಗಾಗುವುದು ಸುಲಭದ ಮಾತಲ್ಲವೆಂಬುದು ಎಷ್ಟು ಸತ್ಯವೋ, ನಮ್ಮನ್ನು ಆಳುವವರ ಮತ್ತು ಉದ್ದಿಮೆದಾರರ ದೂರದೃಷ್ಟಿಯ ಕೊರತೆಯೂ ಇದಕ್ಕೆ ಕಾರಣ ಎಂಬುದು ಅಷ್ಟೇ ಸತ್ಯ.
ನ್ಯಾನೋ ಧಾರವಾಡಕ್ಕೆ ಬಂದೀತೆಂಬ ಆಸೆಯೊಂದಿಗೆ.

-ಚಿನ್ಮಯ.