Sunday, May 24, 2009

ಸುಲೋಕಸಭೆ

(‘ಕೆಂಡಸಂಪಿಗೆ’ ಯಲ್ಲಿ ಪ್ರಕಟವಾಗಿದ್ದು)
ಮಳೆ ನೆಗಸು ಜಡಿದು ನಿಂತಂತಿದೆ. ಎದುರುಗಡೆ ಏನಿದೆ ಎಂಬುದು ನಿಚ್ಚಳವಾಗಿ ಕಾಣತೊಡಗಿದೆ. ಯಾವುದೇ ಗೊಂದಲಗಳಿಲ್ಲ. ಕೊನೆಗೂ ಭಾರತೀಯ ಮತದಾರ ಎಚ್ಚೆತ್ತುಕೊಂಡಿದ್ದಾನೆ ಎಂಬುದೇ ಸಮಾಧಾನಕರ ಸಂಗತಿ. ಫಲಿತಾಂಶದ ನಂತರದ ರಾಜಕೀಯ ಹಾದರಗಳಿಗೆ ಈ ಸಲ ಅವಕಾಶ ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ಕಾಂಗ್ರೆಸ್ 200ಕ್ಕೂ ಹೆಚ್ಚು, ಮತ್ತು ಭಾಜಪ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿರುವುದನ್ನು ಗಮನಿಸಿದರೆ. ಕ್ರಮೇಣ ರಾಷ್ಟ್ರೀಯ ಪಕ್ಷಗಳ ವ್ಯವಸ್ಥೆಯೆಡೆಗೇ ಮತ್ತೆ ಮತದಾರ ಒಲವು ತೋರುತ್ತಿದ್ದಾನೆ ಅನ್ನಿಸುತ್ತಿದೆ. ಒಳ್ಳೆಯ ಬೆಳವಣಿಗೆಯೇ ಸರಿ. ಆಳುವವರಿಗೆ ಮದವೇರುವಷ್ಟು ಸಂಖ್ಯಾಬಲವೂ ಇಲ್ಲ. ವಿರೋಧಿಗಳದ್ದು ತೀರ ಕಡಿಮೆ ಎನ್ನುವ ಸಂಖ್ಯೆಯೂ ಅಲ್ಲ. ಯಾರು ಗೆದ್ದರು ಯಾರು ಸೋತರು ಎಂಬುದನ್ನುಒಮ್ಮೆ ಬದಿಗಿರಿಸಿ ನೋಡಿದರೆ ಒಂದರ್ಥದಲ್ಲಿ ಇದು ಸಮತೋಲಿತ ಸುಲೋಕಸಭೆ.
ತೃತೀಯರಂಗ, ಚತುರ್ಥರಂಗ ಎಂಬ ಅವಕಾಶವಾದಿಗಳಿಗೆ ಈ ಸಲ ಮರ್ಮಕ್ಕೇ ಏಟು ಬಿದ್ದಿದೆ. ಹೌದು ಇವರನ್ನು ಅವಕಾಶವಾದಿಗಳೆನ್ನದೇ ಬೇರೆ ಹಾದಿ ಇಲ್ಲ. ಅತಂತ್ರ ಲೋಕಸಭೆ ಎಂಬುದು ಇವರು ನಿರಂತರ ಬಯಸುವ ಭಾಗ್ಯ. ಸೆಕ್ಯುಲರ್ ಎಂಬುದು ಇವರಿಗೆ ಅಂಗಿ ಇದ್ದಂತೆ. ತೊಟ್ಟರೆ ಸಮನ್ವಯಿ, ಕಳಚಿದರೆ ಸನಾತನಿ. (ನಮ್ಮ)ರಾಜ್ಯದಲ್ಲಿ ಜಾತಿ ರಾಜಕಾರಣವನ್ನೇ ಮಾಡಿಕೊಂಡಿದ್ದ ಜಾತ್ಯತೀತರಿಗೆ ಇನ್ನೈದು ವರ್ಷ ಅಂತಹ ಕೆಲಸವಿಲ್ಲ. ದೆಹಲಿಯಲ್ಲಿ ಇವರನ್ನು ಕೇಳುವವರು ಯಾರೂ ಇಲ್ಲ. ಇಲ್ಲಿ ಮೊದಲೇ ಕೆಲಸ ಕಳೆದುಕೊಂಡಾಗಿದೆ. ಅದರೂ ಛಲದಂಕಮಲ್ಲ ಹಿರಿಗೌಡರು ಶಕ್ತಿಮೀರಿ ವಶೀಲಿಬಾಜಿ, ಚೌಕಾಶಿ ನೆಡೆಸುತ್ತಾರೆ. ರಜ್ಯದಲ್ಲಿ ಗೆದ್ದ ಕಾಂಗ್ರೆಸ್ಸಿಗರನ್ನೇ ಕಡೆಗಣಿಸಿ, ಕುಮಾರಸ್ವಾಮಿಗೆ ಕೇಂದ್ರ ಮಂತ್ರಿಗಿರಿ ಕೊಡಮಾಡಿದರೆ, ಮುಳುಗುವ ಹಡಗು ಪೂರ್ತಿ ಮುಳುಗಿದಂತೆ ಲೆಖ್ಖ. ಲಾಲೂ, ಪಾಸ್ವಾನ್ ಸ್ಥಿತಿ ಇನ್ನೂ ಶೋಚನೀಯ. ಸದ್ಯಕ್ಕೆ ಅವರಿಗೆ ಚೇತರಿಕೆ ಇಲ್ಲ. ಎಡಪಂಥೀಯರಂತೂ ಬಂಗಾಳ, ಕೇರಳಗಳಲ್ಲೇ ಅಸ್ತಿತ್ವ ಕಳೆದುಕೊಂಡು ನಿರುದ್ಯೋಗಿ ಕಾಮ್ರೇಡ್ ಗಳಾಗಿದ್ದಾರೆ. ಕೇಂದ್ರದಲ್ಲಿ ಯಾವ ಸರ್ಕಾರವಿದ್ದರೂ ನಿಂತಲ್ಲಿ ಕೂತಲ್ಲಿ ಕಾಡುತ್ತಿದ್ದ ಚಿಲ್ಲರೆ ಸಮಯಸಾಧಕರು ಈ ಬಾರಿ ಬೇಡಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ತೃತೀಯ, ಚತುರ್ಥರಿಗೆ ಇನ್ನು ಕೆಲವರ್ಷ ರಿಸೆಶನ್. ಅಷ್ಟರಮಟ್ಟಿಗೆ ಈ ದೇಶ ಬಚಾವಾಗಿದೆ.
ಬಹುಮತ ತಲುಪಲು ಕೇವಲ ಬೆರಳೆಣಿಕೆಯ ಸೀಟುಗಳ ಅಗತ್ಯವಿರುವ ಯುಪಿಎ ಅತ್ಯಂತ ಸುಲಭವಾಗಿ ಸರ್ಕಾರ ರಚಿಸುವುದು ಮತ್ತು ಮನಮೋಹನ ಸಿಂಗ್ ಪ್ರಧಾನಿಯಾಗುವುದು ಖಚಿತವಾಗಿದೆ. ಈ ಬಾರಿ ಯುಪಿಎ, ಬಿಹಾರದಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ನೀತೀಶ್ ರನ್ನು ತಮ್ಮ ಹೊಸ ಸಾಥಿಯನ್ನಾಗಿ ಮಾಡಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಮಮತಾ, ಜಯಾ, ಕರುಣಾನಿಧಿ, ಮುಲಾಯಂ ಇವರುಗಳ ಹಳೇ ಚಾಳಿಯನ್ನು ಬಲ್ಲ ಕಾಂಗ್ರೆಸ್ಸಿಗೆ ನಿತೀಶ್ ಮತ್ತು ಓರಿಸ್ಸಾದ ನವೀನ್ ಪಟ್ನಾಯಕ್ ಜಂಟಲ್ ಮನ್ ಗಳಂತೆ ಕಂಡರೆ ಆಶ್ಚರ್ಯವಿಲ್ಲ.
ಎನ್ ಡಿ ಎ ಕಳೆದುಕೊಂಡಿದ್ದೆಷ್ಟು? ಯುಪಿಎ ಗಳಿಸಿದ್ದೆಷ್ಟು? ಕಾರಣಗಳು ಮತ್ತು ಅಂಕಿ ಅಂಶಗಳು ಬಹಳ ಆಸಕ್ತಿದಾಯಕವಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಬಾರಿಗಿಂತ ಎನ್ ಡಿಎ ಸುಮಾರು 20 ಸೀಟು ಕಡಿಮೆ ಗಳಿಸಿದೆ. ಅಂದರೆ ತೀರ ಕಳಪೆ ಸಾಧನೆಯೇನಲ್ಲ. ಆದರೆ ಯುಪಿಎ ಅದರಲ್ಲೂ ಕಾಂಗ್ರೆಸ್, ತೃತೀಯ ಮತ್ತು ಚತುರ್ಥ ರಂಗಗಳಿಂದ ಮತ್ತು ಕೆಲರಾಜ್ಯಗಳಲ್ಲಿ ಮಾತ್ರ ಭಾಜಪದಿಂದ ಗಣನೀಯವಾಗಿ ಮತಗಳನ್ನು ಕಸಿದಿದೆ. (ಕಳೆದ ಬಾರಿ , ಯುಪಿಎ: 218, ಎನ್ ಡಿ ಎ: 181 ಈ ಬಾರಿ, ಯುಪಿಎ : 262, ಎನ್ ಡಿ ಎ:160 ) ಬಹಳ ಸದ್ದು ಮಾಡಿದ್ದ ಮಾಜಿ ಸೂಪರ್ ಸ್ಟಾರ್ ಚಿರಂಜೀವಿ ದೊಡ್ಡ ಯಶಸ್ಸುಗಳಿಸದಿರುವುದು ದಕ್ಷಿಣಭಾರತದಲ್ಲಿ ಸಿನಿಮಾ ಮಂದಿಯ ಕ್ರೇಜ್ ಕಡಿಮೆ ಆಗತೊಡಗಿದ್ದರ ಸಂಕೇತ. ಮತದಾರ ಚುನಾವಣೆಯಿಂದ ಚುನಾವಣೆಗೆ ಪ್ರಬುದ್ಧನಾಗುತ್ತಿರುವುದು ನಿಚ್ಚಳ.
ಸೋಲು ಗೆಲುವುಗಳ ಹಿನ್ನೆಲೆಯನ್ನು ಕೊಂಚ ಗಮನಿಸೋಣ. 90ರ ದಶಕದಲ್ಲಿ ದೇಶದಲ್ಲಿ ಭಾಜಪದ ಅಲೆಯೊಂದು ಎದ್ದಿದ್ದನ್ನು ನೆನಪು ಮಾಡಿಕೊಳ್ಳಿ, ಅಗಲೇ ವಾಜಪೇಯಿ, ಅಡ್ವಾಣಿ ಸಾಕಷ್ಟು ವೃದ್ಧರಾಗಿದ್ದರೂ ಅವರ ಸಮರ್ಥ ನಾಯಕತ್ವದ ಬಗ್ಗೆ ಜನತೆಗೆ ಸಂಶಯಗಳಿರಲಿಲ್ಲ. ಜೊತೆಗೆ ಪ್ರಮೋದ್ ಮಹಾಜನ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿಯಂತಹವರ ಯುವ ಪಡೆಯನ್ನು ಜನ ಭರವಸೆಯ ಕಣ್ಣುಗಳಿಂದ ನೋಡಿದ್ದರು. ಆಗ ಭಾಜಪ ಯುವನಾಯಕರ ಪಕ್ಷವಾಗಿತ್ತು. ಕಾಂಗ್ರೆಸ್ ಮುದುಕರ ಪಕ್ಷವೆಂದು ಟೀಕೆಗೊಳಗಾಗಲ್ಪಟ್ಟಿತ್ತು. ಈಗ ಈ ವಿಷಯ ಪ್ರಸ್ತಾಪಿಸುವುದು ಈಗ ಏಕೆ ಮುಖ್ಯವಾಗುತ್ತದೆ ಎಂದರೆ, ಮೇಲೆ ಹೇಳಿದ ಭಾಜಪದ ನಾಯಕರೆಲ್ಲ ಮುದುಕರಾಗುತ್ತಿದ್ದಾರೆ. ಭರವಸೆಯ ಮುಂದಿನ ಪೀಳಿಗೆಯ ನಾಯಕರುಗಳೇ ಕಾಣುತ್ತಿಲ್ಲ. ಅದೇ ಕಾಂಗ್ರೆಸ್ ನೆಡೆಗೆ ನೋಡಿ, ಒಂದು ಆಕರ್ಷಕ ಯುವ ಪಡೆಯನ್ನೇ ನಿರ್ಮಿಸಿಕೊಂಡಿದೆ. ರಾಹುಲ್ ಗಾಂಧಿ, ಸಚಿನ್ ಪೈಲಟ್, ಮಿಲಿಂದ್ , ಜ್ಯೋತಿರಾದಿತ್ಯ ಸಿಂಧ್ಯಾ, ಕೃಷ್ಣ ಭೈರೆ ಗೌಡ ರಂತಹ ಭರವಸೆಯ ಯುವಮುಖಗಳು ಕಾಂಗ್ರೆಸ್ ಗೆ ಹೊಸ ರೂಪವನ್ನು ಕೊಟ್ಟಿವೆ. ಕೃಷ್ಣ ಭೈರೆಗೌಡ ಸೋತಿದ್ದಾರೆ ನಿಜ ಆದರೆ ಅವರು ಬೆಳೆಯುತ್ತಿರುವ ವೇಗ ನೋಡಿದರೆ ಒಂದಿಲ್ಲೊಂದು ದಿನ ಈತ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನಿಸದೇ ಇರಲಾರದು.
ಭಾಜಪ ವ್ಯಾಪಾರಸ್ತರ, ನೌಕರಸ್ತರ, ನಗರಜೀವಿಗಳ, ಮೆಲ್ವರ್ಗದವರ ಪಕ್ಷ ಎಂಬ ಸಾರ್ವರ್ತ್ರಿಕ ಅಭಿಪ್ರಾಯದಲ್ಲಿ ಸತ್ಯಾಂಶವಿದ್ದರೆ ಈ ಬಾರಿ ಭಾಜಪದ ವೈಫಲ್ಯಕ್ಕೆ ಇದೂ ಒಂದು ಮುಖ್ಯ ಕಾರಣವಾಗಿರಬಹುದಾಗಿದೆ. ಈ ಬಾರಿ ಕೇವಲ ಶೇ. 53 ಮತದಾನವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಚುನಾವಣೆಯ ಮಾರನೇ ದಿನವೇ ಅಡ್ವಾಣಿ ನೀಡಿದ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ಅಡ್ವಾಣಿ ಆಗಲೇ ಪೇಲವ ವದನರಾಗಿದ್ದರು. ‘ಈ ದೇಶದಲ್ಲಿ ಮತದಾನವನ್ನು ಹೇಗಾದರೂ ಮಾಡಿ ಕಡ್ಡಾಯ ಮಾಡಬೇಕು’ ಎಂಬ ಅವರ ಹೇಳಿಕೆಯ ಹಿಂದೆ ಗಾಢ ಆತಂಕ ಅಡಗಿತ್ತು. ಮತದಾನ ಮಾಡದೇ ಹೊಟೇಲು, ಸಿನಿಮಾ, ಪಿಕ್ ನಿಕ್ ಗಳಲ್ಲಿ ಕಾಲಕಳೆದ ವರ್ಗ ಯಾವುದೆಂಬುದು ಅವರಿಗೆ ಅರ್ಥವಾಗಿಹೋಗಿತ್ತು.
ಭಾಜಪದ ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಅವರ ಬಳಿ ಹೊಸ ಅಸ್ತ್ರ ಇಲ್ಲದಿರುವುದು. ಹಿಂದುತ್ವ ಹಪ್ಪು ಹಳಸಲಾಗಿ ಇವರ ಬಾಯಿಗಳೆಲ್ಲ ವಾಸನೆ ಹೊಡೆಯಲಾರಂಭಿಸಿದ್ದವು. ವರುಣ್ ಗಾಂಧಿಯ ಎಡವಟ್ಟು ಹೇಳಿಕೆಯನ್ನು ಸಮರ್ಥಿಸಿದ್ದು ಭಾಜಪದ ಖಾಯಂ ಮತದಾರನನ್ನೂ ಮತ್ತೊಮ್ಮೆ ಯೋಚಿಸುವಂತೆ ಮಾಡಿದಂತೆ ಕಾಣುತ್ತದೆ. ’ಭಯೋತ್ಪಾದನೆ’ ಯ ಕುರಿತಾದ ಬೊಬ್ಬೆಯೂ ಓಟುಗಳಾಗಿ ಪರಿವರ್ತನೆಯಾಗಲಿಲ್ಲ. ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ರಂತಹ ಪ್ರಚಂಡ ಮೇಧಾವಿಗಳು ರಚಿಸಿದ ವ್ಯೂಹಗಳೂ ಪರಿಣಾಮಕಾರಿಯಾಗಲಿಲ್ಲ. ರಾಜಸ್ಥಾನ, ಮಧ್ಯಪ್ರದೇಶ, ಓರಿಸ್ಸಾಗಳಲ್ಲಿ ಭಾಜಪ ಅನಿರೀಕ್ಷಿತವಾದ ಮತ್ತು ಬಲವಾದ ಪೆಟ್ಟು ತಿಂದಿದೆ. ಸರಿಹೊತ್ತಿನಲ್ಲಿ ಜೇಟ್ಲಿ ಮತ್ತು ಪಕ್ಷಾಧ್ಯಕ್ಷ ರಾಜನಾಥರ ನಡುವಿನ ಕಲಹವೂ ಭಾಜಪದ ವಿರುದ್ಧ ಕೆಲಸಮಾಡಿದೆ. ಹಾಗಾಗಿ ಸದರಿ ಚುನಾವಣೆಯಿಂದ ಭಾಜಪ ಕಲಿಯುವುದು ಬಹಳಷ್ಟಿದೆ. ಒಂದು ಪಕ್ಷವಾಗಿ ಅದರ ಸಾಧನೆ ನಗಣ್ಯವಲ್ಲದಿದ್ದರೂ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭಾಜಪದ ಸ್ಥಿತಿ ಇನ್ನೂ ಸಂಕೀರ್ಣವಾಗುತ್ತಾ ಹೋಗುತ್ತದೆ. ಈ ಬಾರಿ ಕಾಲೆಳೆಯುವವರ ಕಾಟವಿಲ್ಲದ ಕಾರಣ ಯುಪಿಯೆ ಒಳ್ಳೆಯ ಆಡಳಿತ ಕೊಡುವ ಸಾಧ್ಯತೆಗಳಿವೆ. ದೇಶದ ಭದ್ರತೆಯ ವಿಷಯವನ್ನು ಎಂದಿನಂತೆ ಅಲಕ್ಷಿಸಲಾರರೆಂದು ಆಶಿಸೋಣ. ಈಗಾಗಲೇ ‘ಯೂತ್’ ಮಂತ್ರ ಪ್ರಾರಂಭಿಸಿರುವ ಕಾಂಗ್ರೆಸ್ ತನ್ನ ಯುವ ಪಡೆಯನ್ನು ಕ್ರಮೇಣ ಇನ್ನಷ್ಟು ಬಲಿಷ್ಟಗೊಳಿಸಲಿದೆ. ರಾಹುಲ್ ಗಾಂಧಿ ದಿನದಿಂದ ದಿನಕ್ಕೆ ಪ್ರಬುದ್ಧರಾಗುತ್ತಿದ್ದಾರೆ.ಅಥವಾ ಹಾಗೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.(ಕೆಲಸ ಮಾಡುತ್ತಾರೋ ಕಾದು ನೋಡಬೇಕು). ಸಂಪುಟದಲ್ಲಿ ಮಾಧ್ಯಮಗಳಿಗೆ ನಿರಂತರ ಸಂಪರ್ಕವಿರುವ ಸಚಿವ ಸ್ಥಾನವೊಂದನ್ನು ಅವರಿಗೆ ಕೊಡಮಾಡಲಾಗುತ್ತದೆ. ಒಂದೆರಡು ವರ್ಷಗಳಲ್ಲೇ ಅರೋಗ್ಯದ್ದೋ, ವಯಸ್ಸಿನದೋ ಕಾರಣ ಹೇಳಿ ಮನಮೋಹನ್ ಸಿಂಗ್ ನೇಪಥ್ಯಕ್ಕೆ ಸರಿದು ರಾಹುಲ್ ಗಾಂಧಿ ಪ್ರಧಾನಿಯಾದರೆ ಆಶ್ಚರ್ಯವೇನಿಲ್ಲ. ಮತ್ತೊಮ್ಮೆ ನೆಹರು ಕುಟುಂಬದ ನೇರ ಆಳ್ವಿಕೆಗೆ ನಾವು ಒಳಗಾಗಲಿದ್ದೇವೆ. 10, ಜನಪಥ ನಿವಾಸ ಮತ್ತೂ ಪ್ರಬಲವಾಗಲಿದೆ. ದೇಶವನ್ನು ಸಮರ್ಥವಾಗಿ ಮುನ್ನೆಡೆಸುವುದಾದರೆ ನಮಗೆ ಯಾರಾದರೇನು ಅಲ್ಲವೇ?
ಒಟ್ಟಿನಲ್ಲಿ, ಪುರಾತನ ಕಾಂಗ್ರಸ್ಸಿಗೆ ಪರ್ಯಾಯ ಪಕ್ಷವೊಂದನ್ನು ಗಟ್ಟಿಮಾಡುವ ಪ್ರಯತ್ನಕ್ಕೆ ಎಂದಿನಂತೆ ಹಿನ್ನಡೆಯಾಗಿದ್ದಂತೂ ನಿಜ. ಪರ್ಯಾಯವಾಗಬಹುದಾಗಿದ್ದ ಭಾಜಪ ತನ್ನದೇ ತಪ್ಪುಗಳಿಂದ ಪರ್ಯಾಯವಾಗಿ ಕಾಂಗ್ರೆಸ್ಸನ್ನು ಬೆಳೆಯಗೊಟ್ಟಿದ್ದು ವಿಪರ್ಯಾಸ. ಭಾಜಪದ ’ಥಿಂಕ್ ಟ್ಯಾಂಕ್” ನ ಮುಂದೆ ಅತ್ಯಂತ ಜಟಿಲವಾದ ಸವಾಲುಗಳಿವೆ.ಆಡ್ವಾಣಿ ನಂತರದ ಸಮರ್ಥ ನಾಯಕತ್ವದ ಪ್ರಶ್ನೆ ಬೃಹತ್ತಾಗಿದೆ. ಪಕ್ಷದಲ್ಲಿ ತರುಣರನ್ನು ಬೆಳೆಸಬೇಕಾಗಿದೆ, ತರಬೇತುಗೊಳಿಸಬೇಕಾಗಿದೆ. ಅದಕ್ಕೂ ಮುಖ್ಯವಾಗಿ, ಬ್ಲಾಗುಗಳಲ್ಲಿ, ಇಂಟರ್ ನೆಟ್ ಚರ್ಚೆಗಳಲ್ಲಿ, ಆಫೀಸುಗಳಲ್ಲಿ ಓತಪ್ರೋತವಾಗಿ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡಿ ದಣಿಯುವ ಮಾನಸಿಕ ಬಿಜೆಪಿಗಳನ್ನು ಹೇಗಾದರೂ ಮತಗಟ್ಟೆಗೆ ಕರೆತರಬೇಕಾಗಿದೆ. ಪಕ್ಷಕ್ಕೆ ಹೊಸರೂಪ ಕೊಟ್ಟು ಹೊಸ ಆದ್ಯತೆಗಳೊಂದಿಗೆ ಜನತೆಯ ಮುಂದೆ ಹೋಗಲು ಸಿದ್ಧಗೊಳಿಸುವುದಕ್ಕೆ ಅವರ ಬಳಿ ಇನ್ನು ಐದು ವರ್ಷಗಳ ದೀರ್ಘ ಅವಧಿಯಿದೆ. ಅಲ್ಲಿಯವರೆಗೆ (ಬಹುಶಃ) ಸಿಂಗ್ ಇಸ್ ಕಿಂಗ್ ಹೈ!
-ಚಿನ್ಮಯ ಭಟ್

Friday, May 15, 2009

ರಿಸೆಶನ್ ವಿಷಘಳಿಗೆಯೂ ಮತ್ತು ಟೆಕ್ಕಿಗಳ ಬವಣೆಯೂ....

(ಇತ್ತೀಚಿಗೆ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)
ಪ್ರತಿ ಆರೇಳು ವರ್ಷಗಳಿಗೊಮ್ಮೆ ರಿಸೆಶನ್ ಗುಮ್ಮ ಬರುವುದಂತೂ ಖಾತ್ರಿಯಾಯಿತು. ಖಾತ್ರಿ ಇಲ್ಲದ್ದು ನಮ್ಮ ಉದ್ಯೋಗಗಳಷ್ಟೆ. ಇದು ಎಲ್ಲಿಂದ ಬರುತ್ತದೆ ಮತ್ತೆ ಹೇಗೆ ಹೋಗುತ್ತದೆ ಎಂಬುದರ ಬಗ್ಗೆ ನಿಖರ ವಿವರಗಳಿಲ್ಲ. ಭಾನಗಡಿ ಆದಮೇಲೆ ಗಂಟೆಗಟ್ಟಲೇ ಕೊರೆಯುವ ಆರ್ಥಿಕ ವಿಶ್ಲೇಷಕರ ಮಾತುಗಳು ವಿಶ್ವಾಸ ಮೂಡಿಸುವುದಿಲ್ಲ. ಜ್ಯೋತಿಷಿಗಳ ಭಾನುವಾರದ ಭವಿಷ್ಯಕ್ಕೂ ಇವರ ಮಾತುಗಳಿಗೂ ಅಂತಹ ವ್ಯತ್ಯಾಸ ತೋರುವುದಿಲ್ಲ. ಕೆಲವರ ಪ್ರಕಾರ ನಾವು ಆಗಲೇ ತಳ ತಲುಪಿಯಾಗಿದೆ. ಇನ್ನೇನಿದ್ದರೂ ಮೇಲಕ್ಕೇರುವುದು ಮಾತ್ರ. ಇನ್ನು ಕೆಲವರ ಪ್ರಕಾರ ಇದಿನ್ನೂ ಪ್ರಾರಂಭ, ತಳ ಇನ್ನೂ ಬಾಕಿ ಇದೆ. ಅವರವರ ಭಾವಕ್ಕೆ ಅವರವರ ಬಾವಿ.
ಗಜ ಗಾತ್ರದ ಉದ್ಯೋಗಿಗಳ ಸೇನೆ ಹೊಂದಿದ್ದ ಕಂಪನಿಗಳ ‘ಡಯಟಿಂಗ್ ’ ಪ್ರಾರಂಭವಾಗಿದೆ. ಇವರೂ VLCC ಯಂತೆ before – after ಬೋರ್ಡ್ ಹಾಕಿಕೊಳ್ಳಬೇಕಾಗಬಹುದು. ದೊಡ್ಡ ಸಂಸ್ಥೆಗಳಲ್ಲಿ, ‘’people have to sacrifice’’ ಎಂಬಂತಹ ನುಣ್ಣನೆಯ, ಕುತ್ತಿಗೆ ಕೊಯ್ಯುವ ಸಂದೇಶಗಳು ಉದ್ಯೋಗಿಗಳಿಗೆ ತಲುಪಲಾರಂಭಿಸಿವೆ. ಉದ್ಯೋಗಿಗಳಲ್ಲಿ ಪರಸ್ಪರ ಅಪನಂಬಿಕೆ, ಅಸೂಯೆ ಏರ್ಪಡುವ ನಂಜಿನ ಕಾಲ ಈ ರಿಸೆಶನ್ ಅವಧಿ. ಹಿರಿಯಣ್ಣ – ಗಿರಿಯಣ್ಣ – ಕಿರಿಯಣ್ಣ ಎಂಬ ಭೇದ ವಿಲ್ಲದೇ ಎಲ್ಲರಿಗೂ ‘ಶಿಕಾರಿ’ ಯಾಗುವ ವಿಚಿತ್ರ ಭಯ. ಎಲ್ಲ ಕಂಪನಿಗಳಲ್ಲಿಯೂ low performers ಎಂಬ ಮಿಕಗಳನ್ನು ಬೀಳಿಸುವ ನಾಟಕ. ನಿಜಕ್ಕೂ ಈ ಸಂದರ್ಭದಲ್ಲಿ ಅಗತ್ಯವಿದ್ದ Team building ನಂತಹ ಚಟುವಟಿಕೆಗಳಿಗೆ ಕಂಪನಿಗಳಲ್ಲಿ ಈಗ ಬಜೆಟ್ ಇಲ್ಲ. ಜಗತ್ತಿನೆಲ್ಲೆಡೆ ಒಂದು ಬಗೆಯ ಖಿನ್ನತೆ ಆವರಿಸಿದೆ. ಬಹುಶಃ ಈಗ ಒಳ್ಳೆಯ ಆದಾಯವಿರುವುದು ಆಸ್ಪತ್ರೆಗಳಿಗೆ ಮಾತ್ರವೇನೊ. ಆಟೋಮೋಟಿವ್ ಕ್ಷೇತ್ರದಲ್ಲಿರುವ ನನಗೆ ದಿನ ಬೆಳಿಗ್ಗೆ ಎದ್ದು ಇವತ್ತು ಯಾವ ಕಾರು ಕಂಪನಿಯ ಯಾವ ಶಾಖೆ ಮುಳುಗಿತು ಎಂಬುದನ್ನು ನೋಡುವುದೇ ಕೆಲಸವಾಗಿದೆ. ಮೊನ್ನೆ ಕಂಪನಿಯ ರಿಸೆಪ್ಶನ್ ಹಾದು ಹೋಗುತ್ತಿದ್ದೆ. ಪರ್ಚೇಸ್ ಡಿಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವ ಯುವತಿಯೊಬ್ಬರು ಅಲ್ಲಿ ನಿಂತಿದ್ದರು. ನಾನು ಸಹಜವಾಗಿ ಆಕೆಯ ಬಳಿ ನೆಡೆದು ಮಾತನಾಡಿಸಿದೆ. ಅವಳು “ನಾನು ಕೆಲಸ ಕಳೆದುಕೊಂಡಿದ್ದೇನೆ, ಇಂದು ನನ್ನ ಕಡೆಯ ದಿನ” ಎಂದಳು. ಆ ಕ್ಷಣಕ್ಕೆ ನನ್ನಲ್ಲಿ ಹತ್ತಾರು ಭಾವನೆಗಳು ಮೂಡಿ ಮರೆಯಾದವು. ನಿಮ್ಮಂತವರು ನಮ್ಮ ದೇಶಕ್ಕೆ ಬಂದು ನಮ್ಮ ಕೆಲಸ ಕದಿಯುತ್ತಿದ್ದೀರಿ ಎಂದು ಆಕೆ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿರಬಹುದೆನ್ನಿಸಿತು. ಹೀಗೆ ಕೆಲಸ ಕಳೆದುಕೊಂಡವರ ಬಳಿ ಮಾತನಾಡುತ್ತಾ ನಿಲ್ಲುವುದು ಸುರಕ್ಷಿತ ಅಲ್ಲವೇನೊ ಎಂದು ಕೂಡ ಅನ್ನಿಸಿದ್ದನ್ನು ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಾಚಿಕೆಯೂ ಆಗುತ್ತದೆ. ಈ ಬಾರಿ ರಿಸೆಶನ್ ನಲ್ಲಿ ಕಾರು ತಯಾರಕರ ಸಂಸ್ಥೆಗಳು ಬಲವಾದ ಪೆಟ್ಟು ತಿಂದಿವೆ. ಸರಕಾರಗಳ ಕೊಡುತ್ತಿರುವ ಪಾರುಗಾಣಿಕೆಯ ಪ್ಯಾಕೇಜ್ ಗಳಿಂದ ಕೆಲ ತಿಂಗಳುಗಳ ಕಾಲ ಸಂಬಳ ಕೊಡಬಹುದಷ್ಟೆ. ಮುಂದೇನು? ಮಾಡಿಟ್ಟ ಕಾರುಗನ್ನೇ ಕೊಳ್ಳುವವರಿಲ್ಲದಿರುವಾಗ ಇವರು ಹೊಸ ಉತ್ಪಾದನೆ ಯಾಕಾಗಿ ಮಾಡಿಯಾರು? ಈ ಕೊಳ್ಳುವವನ ಕೈ ಬಲ ಪಡಿಸುವವರು ಯಾರು? ಸದ್ಯಕ್ಕೆ ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳು.
ಬರಾಕ್ ಒಬಾಮ, ಗಾರ್ಡನ್ ಬ್ರೌನ್ ಮುಂತಾದವರು ಸ್ವದೇಶಿ ಮಂತ್ರ ಆರಂಭಿಸಿದ್ದಾರೆ. ಅಮೆರಿಕಾದ ಹೆಚ್ ಒನ್ ಬಿ ವಿಸಾ, ಬ್ರಿಟನ್ ನ ಟೈರ್ ಒನ್ ವಿಸಾಗಳಲ್ಲಿ ಇತ್ತೀಚೆಗೆ ಅಳವಡಿಸಲಾಗುತ್ತಿರುವ ಕಠಿಣ ಷರತ್ತುಗಳು ಹೊರಗಿನವರು ಅದರಲ್ಲೂ ಭಾರತೀಯ ತಂತ್ರಜ್ಞರು ವಲಸೆ ಬರುವುದನ್ನು ತಡೆಯಲೆಂದೇ ರೂಪುಗೊಂಡಂತಿವೆ. ನಮ್ಮ ನೆಲದ ಉದ್ಯೋಗಗಳಲ್ಲಿ ಪಕ್ಕದ ತಮಿಳರನ್ನು ಸಹಿಸಲಾಗದ ನಮಗೆ ಇವರ ಕ್ರಮವನ್ನು ವಿಮರ್ಶಿಸಲು ನೈತಿಕತೆ ಸಾಲುವುದಿಲ್ಲ. ಬ್ರಿಟನ್, ಅಮೇರಿಕಾಗಳಲ್ಲಿ, ಕೆಲಸ ಕಳೆದುಕೊಂಡ ಸಂತ್ರಸ್ತರನ್ನು ಬೀದಿಗೆ ಬೀಳದಂತೆ ತಡೆಯಲು ಸರಕಾರದಿಂದ ತಕ್ಕ ಮಟ್ಟಿನ ಹಣಕಾಸಾದರೂ ಸಿಗುತ್ತದೆ. ಅವೆಲ್ಲಕ್ಕಿಂತ ಮುಖ್ಯ ಈ ದೇಶಗಳಲ್ಲಿ dignity of labour ಇಲ್ಲದಿರುವುದು. ಬಹುಶಃ ಇದು ಚಾರ್ವಾಕ ಸಂಸ್ಕೃತಿಯ ಒಳ್ಳೆಯ ಅಂಶಗಳಲ್ಲಿ ಪ್ರಮುಖವಾದದ್ದು ಅನ್ನಿಸುತ್ತದೆ. ನಮ್ಮಲ್ಲಿ ಕೆಲಸ ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್ ದಿನಸಿ ಅಂಗಡಿ ನೆಡೆಸುವ ವಾತಾವರಣ ಉಂಟೇ?

ಸಾಫ್ಟ್ ವೇರ್ ವಿಚಾರ ಏಕೆ ಪ್ರಸ್ತಾಪ ಮಾಡಿದೆನೆಂದರೆ, ತಂತ್ರಾಂಶ ಪರಿಣಿತರು ಜಾಗತಿಕ ಆರ್ಥಿಕ ಸಂಕಟಗಳಿಗೆ ಮೊದಲು ಬಲಿಯಾಗಲ್ಪಡುವ ಅತ್ಯಂತ ಸೂಕ್ಷ್ಮ ವರ್ಗ ಎಂಬುದು ಕಳೆದ ರಿಸೆಶನ್ ಗಳಿಂದ ವೇದ್ಯವಾಗಿದೆ. ಅದರಲ್ಲೂ ಭಾರತಕ್ಕೆ ಸಂಬಂಧಪಟ್ಟಂತೆ ಇದು ಇನ್ನೂ ಸೂಕ್ತವಾಗಿ ಅನ್ವಯಿಸುತ್ತದೆ. ಭಾರಿ ವೇತನಕ್ಕೆ ಅಷ್ಟೇ ಗಾತ್ರದ ರಿಸ್ಕ್ ಎಂಬ ಜ್ವಾಲಮುಖಿ ಸಮಾನಾಂತರವಾಗಿ ಆದರೆ ಸುಪ್ತವಾಗಿ ಹರಿಯುತ್ತಿರುತ್ತದೆ. ಅದು ಯಾವಾಗಲೂ ಸ್ಫೋಟಿಸಬಹುದು. ಯಾರಿಗೂ ಅದರ ಮೇಲೆ ನಿಯಂತ್ರಣವಿಲ್ಲ. ಲೇಮನ್ ಬ್ರದರ್ಸ್ ನಂತಹ, ಬ್ಯಾಂಕುಗಳಿಗೇ ಸಾಲ ಕೊಡುವ ಅಪ್ಪ ಬ್ಯಾಂಕುಗಳು ಮುಳುಗುವ ಚಿಕ್ಕದೊಂದು ಸೂಚನೆಯೂ ಇರಲಿಲ್ಲ. ಬ್ಯಾಂಕಿಂಗ್ ಕ್ಷೇತ್ರವನ್ನು ಅವಲಂಬಿಸಿದ ಹಲವು ಐಟಿ ಕಂಪನಿಗಳಿಗೆ ಒಂದಾದ ಮೇಲೊಂದು ವಿದೇಶಿ ಬ್ಯಾಂಕ್ ಗಳು ಪತನವಾಗುತ್ತಿರುವುದು ಅತೀವ ಕಳವಳದ ವಿಷಯವಾಗಿದೆ. ಒಂದು ಕಾಲದಲ್ಲಿ ಸಾಮಾನ್ಯನಲ್ಲಿ ಬೆರಗು ಮೂಡಿಸಿದ್ದ ಸಾಫ್ಟ್ ವೇರ್ ಈಗೀಗ ಬೆವರು ಹುಟ್ಟಿಸತೊಡಗಿದೆ. ನಾನು ಹೀಗೀಗೆ, ಇಂತಿಪ್ಪ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದರೆ “ಹೇಗೆ? ನಿಮ್ದು ಪರ್ವಾಗಿಲ್ವಾ?” ಎಂದು ಕಣ್ಣು ಕಿರಿದುಗೊಳಿಸಿ ಉಚಿತ ಅನುಕಂಪ ವ್ಯಕ್ತಪಡಿಸಲಾರಂಭಿಸಿಬಿಡುತ್ತಾರೆ. ಇವರ ಹಾರಾಟ ನೋಡಿ ಬೇಸತ್ತ ಇತರ ಕ್ಷೇತ್ರಗಳ ಹೆಚ್ಚಿನ ಅನುಭವವುಳ್ಳ ಕಡಿಮೆ ಪಗಾರಿನ ಜನಕ್ಕೆ ಒಳಗೊಳಗೇ ಖುಶಿಯಾಗುತ್ತಿದ್ದರೂ, ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಮಗ ಇಂಜಿನಿಯರಿಂಗ್ ಓದಿ ಮುಗಿಸುವ ಹೊತ್ತಿಗೂ ಪರಿಸ್ಥಿತಿ ಸರಿಯಾಗದಿದ್ದರೆ ಏನು ಗತಿ ಎಂಬ ಆತಂಕ ಮಾತಾಡಗೊಡುವುದಿಲ್ಲ. ಇಂಜಿನಿಯರಿಂಗ್ ಎಂದರೆ ಸಾಫ್ಟ್ ವೇರ್ ಎಂದು ಮತ್ತೆ ಹೇಳಬೇಕಾಗಿಲ್ಲವಲ್ಲ.
ಇಲ್ಲೊಂದು ಸಂಗತಿ ಗಮನಿಸಬೇಕಾದದ್ದಿದೆ. ನೌಕರಿ ಮಾಡಿಯೂ, ಲಂಚ ತಗೆದುಕೊಳ್ಳದೆಯೂ ಶ್ರೀಮಂತನಾಗಬಹುದೆಂದು ತೋರಿಸಿಕೊಟ್ಟ ಐಟಿ ಎಂಬುದು ಈ ಎರಡು ದಶಕಗಳಲ್ಲಿ ಭಾರತೀಯ ಸಮಾಜದಲ್ಲಿ ಸಮೃದ್ಧಿ, ಪ್ರತಿಷ್ಠೆ, ವಿಲಾಸ, ಅಸೂಯೆ, ದರ್ಪ ಇವೆಲ್ಲದರ ಸಂಕೇತವಾಗಿ ಬೆಳೆದು ನಿಂತಿದೆ. ಯುವಕ /ಯುವತಿಯರಲ್ಲಿ ಹಣ ಓಡಾಡತೊಡಗಿದಾಗ ಸಹಜವಾಗಿಯೇ ಕೊಳ್ಳುಬಾಕರಾದರು. ಪಾಶ್ಚಾತ್ಯರ ಗಾಳಿ ಸೋಂಕಿದ್ದರಿಂದ ಕೊಂಚ ಪ್ರಮಾಣದ ಚಾರ್ವಾಕತನವೂ ಬಂತು. ಅದರಿಂದಾಗಿ ಸಾಮಾನ್ಯನ ಬದುಕು ದುಸ್ತರವಾಯಿತು. ಒಳ್ಳೆತನ, ಸಂಸ್ಕೃತಿ, ನ್ಯಾಯವಂತಿಕೆ ಇವುಗಳನ್ನೆಲ್ಲ ಬಡತನಕ್ಕಷ್ಟೇ ಬೆಸೆಯುವ ಟಿಪಿಕಲ್ ಭಾರತೀಯ ಮನಸ್ಸು ಟೆಕ್ಕಿಗಳನ್ನು ಏಕಕಾಲಕ್ಕೆ ಬೆರಗು, ಅಸಹನೆ ಮತ್ತು ಅಸಮಾಧಾನದೊಂದಿಗೆ ನೋಡಲಾರಂಭಿಸಿದ್ದು ಅನಿರೀಕ್ಷಿತವಲ್ಲ. ಈ ಧಾಟಿಯ ಯೋಚನಾ ಕ್ರಮ ಭಾರತೀಯರಿಗೆ ತಲಾಂತರದಿಂದ ಬಂದ ಬಳುವಳಿ. ಶತಮಾನಗಳಿಂದ ಬಡತನವನ್ನೇ ಉಸಿರಾಡುತ್ತಾ ಬಂದ ನಮಗೆ ಶ್ರೀಮಂತಿಕೆಯ ಬಗ್ಗೆ ಅದಮ್ಯ ಆಸೆಯಿದೆ ಆದರೆ ಶ್ರೀಮಂತರ ಬಗ್ಗೆ ಅಪಾರ ಅಸಹನೆ ಇದೆ. ಬಡವರ ಬಗೆಗಿನ ಅನುಕಂಪವೇ ನಮ್ಮ ಒಳ್ಳೆತನಕ್ಕೆ ಪುರಾವೆ. ಅನುಕಂಪದ ಆಚೆ ನೆಡೆದು ಬಡವರಿಗೆ ಸಹಾಯಹಸ್ತ ಚಾಚುವ ಶಕ್ತಿ ಇಲ್ಲದ್ದು ನಮ್ಮ ಮಿತಿ ಮತ್ತು ಆಸಕ್ತಿ ಇಲ್ಲದ್ದು ಆಡಳಿತ ಯಂತ್ರದ ಬೇಜವಬ್ದಾರಿತನ.
ಆದರೆ ಉದಾರಿಕರಣದಿಂದೀಚೆಗೆ ಭಾರತದಲ್ಲಿ ನ್ಯಾಯಯುತವಾಗಿ ಹಣಗಳಿಸಬಹುದಾದಂತಹ ಮಾರ್ಗಗಳು ಹೇರಳವಾಗಿ ತೆರೆದುಕೊಂಡಿದ್ದನ್ನು ನಾವು ಉಪೇಕ್ಷಿಸುವಂತಿಲ್ಲ. ಹವಾನಿಯಂತ್ರಿತ ಕಟ್ಟಡಗಳಲ್ಲಿ ಕುಳಿತು ಸಾವಿರಾರು ಜನಕ್ಕೆ ಉದ್ಯೋಗ ನೀಡುವಂತ ಯೋಜನೆ ರೂಪಿಸಬಲ್ಲ ಶ್ರೀಮಂತ ಉದ್ಯಮಿ ಯನ್ನು ಕೊಂಚವೂ ಸಾಮಾಜಿಕ ಜವಾಬ್ದಾರಿಗಳಿಲ್ಲದ, ಕಾರ್ಮಿಕರ ರಕ್ತ ಹೀರುವ ಕ್ರೂರ ಬಂಡವಾಳಶಾಹಿಯನ್ನಾಗಿಯೇ ಭಾವಿಸಬೇಕಿಲ್ಲ.
ಹೀಗೆ ಗಳಿಸಿದ ದೊಡ್ಡ ವೇತನ, ಆ ಮೂಲಕ ಸೃಷ್ಟಿಸಿಕೊಂಡ ಸಂಪತ್ತು ಐಟಿ ಉದ್ಯೋಗಿಗಳಲ್ಲಿ ಸ್ವಾಭಿಮಾನದ ಸಂಕೇತವಾಗಿ, ಕೆಲವೆಡೆ ದರ್ಪವಾಗಿಯೂ ಪ್ರಕಟಗೊಂಡಿದ್ದರೆ ಆಶ್ಚರ್ಯಪಡಬೇಕಿಲ್ಲ. ಕಂಪನಿಯ ಬ್ಯಾಡ್ಜ್ ಕುತ್ತಿಗೆಗೆ ನೇತಾಕಿಕೊಂಡು ಕಂಪನಿ ಬಸ್ಸಿನಿಂದ ಇಳಿಯುವವರ ಬಿಗುಮಾನ ನೋಡಿ ‘ಇವರು ಮನುಷ್ಯರಿಗಿಂತ ತುಸು ಮೇಲೆ’ ಎಂದು ಭಾವಿಸಿದ್ದ ಜನಕ್ಕೆ ಕ್ರಮೇಣ ಇವ್ರು ಮಾಡುವ ಕೆಲಸಕ್ಕೆ ರ್ಯಾಂಕು – ಗೀಂಕು ಬೇಡವಂತೆ, ಅದು ಕಳಪೆ ಕೆಲಸವಂತೆ ಎಂದೆಲ್ಲ ಅರೆಬರೆ ಮಾಹಿತಿ ತಿಳಿದ ಮೇಲೆ ಒಹೋ ಇಷ್ಟೇನಾ? ಎಂಬಂತಾಗಿದ್ದು ಸುಳ್ಳಲ್ಲ. ಪಶ್ಚಿಮದವರ ಸುಖಕ್ಕಾಗಿ ಹಗಲು ರಾತ್ರಿಯೆನ್ನದೇ ಸಮಯದ ಹಂಗು ತೊರೆದು ಪಶ್ಚಿಮದವರ ಸಮಯದ ಗೊಂಬೆಯಂತೆ ದುಡಿಯುವ ಐಟಿಗ ಇವತ್ತು ಕೆಲಸ ಕಳೆದುಕೊಂಡರೂ ಸಮಾಜದ ಅನುಕಂಪ ಗಿಟ್ಟಿಸುವ ಸ್ಥಿತಿಯಲ್ಲಿಲ್ಲ. ದಾರಿಯಲ್ಲಿ ಎದುರು ಸಿಗುವ ಟೆಕ್ಕಿಯನ್ನು ಕೇಳಿ ನೋಡಿ, ಇವತ್ತಿನ ಪರಿಸ್ಥಿತಿಯಲ್ಲಿ ತನ್ನ ಉದ್ಯೋಗದ ಮುಂದಿನ ಎರಡು ತಿಂಗಳಿನ ಭವಿಷ್ಯ ಆತನಿಗೆ ತಿಳಿದಿಲ್ಲ. ಆದರೆ ಬಹುತೇಕರು ಹದಿನೈದು - ಇಪ್ಪತ್ತು ವರ್ಷಗಳ ಹೌಸಿಂಗ್ ಲೋನ್ ಹೊಂದಿದ್ದಾರೆ.
ಮರೆಯಬಾರದ ಸಂಗತಿಯೆಂದರೆ, ಆರ್ಥಿಕವಾಗಿ ದಿವಾಳಿಯಂಚಿನಲ್ಲಿದ್ದ ಭಾರತವನ್ನು ಐಟಿ ಮೇಲಕ್ಕೆತ್ತಿದ್ದಲ್ಲದೇ ಜಾಗತಿಕವಾಗಿ ಭಾರತಕ್ಕೊಂದು ಪ್ರಮುಖ ಸ್ಥಾನ ಒದಗಿಸಿಕೊಟ್ಟಿದೆ. ಐಟಿ ಉದ್ಯೋಗಿಗಳು ಕಟ್ಟುವ ಕಂದಾಯದ ಮೊತ್ತ ಇವತ್ತಿನ ಸರಕಾರಕ್ಕೆ ಬಹಳ ದೊಡ್ಡ ಆದಾಯ. ಮುಂಬರುವ ದಶಕಗಳಲ್ಲಿ ರಿಸೆಶನ್ ಎಂಬ ಅತಿಥಿ ಅಗಾಗ ಬರುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆಯಾದ್ದರಿಂದ ಟೆಕ್ಕಿಗಳು ತಮ್ಮ ದೊಡ್ಡ ಸಂಬಳದ ಸಣ್ಣಭಾಗವೊಂದನ್ನು ‘ರಿಸೆಶನ್ ತುರ್ತು ನಿಧಿ‘ ಯಾಗಿ ಕೂಡಿಡುತ್ತಾ ಹೋಗುವುದು ಅನಿವಾರ್ಯವೇನೊ. ಸರಕಾರದ ಕಣ್ಣಲ್ಲಿ ಶಾಶ್ವತ ಬಡವರಾಗಿ ಆದಾಯ ತೆರಿಗೆ ತಪ್ಪಿಸಿಕೊಳ್ಳುತ್ತಾ ಐಟಿಯವರನ್ನು ಬೈಯ್ಯುವ ಜನಕ್ಕೆ ಮನೆ ಮುಂದಿನ ರೋಡಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಅರಿವಿದ್ದರೆ ಸಾಕು.
-ಚಿನ್ಮಯ ಭಟ್

Friday, January 16, 2009

ಇತ್ತೀಚೆಗೆ ಭೀಮಸೇನ್ ಜೋಶಿಯವರಿಗೆ ಭಾರತರತ್ನ ಘೋಷಣೆಯಾದ ಸಂದರ್ಭದಲ್ಲಿ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ.

ಸಂಗೀತ ಲೋಕದ ಭೀಮಸೇನರೀಗ ಭಾರತ ರತ್ನ


ಬಹಳ ತಡವಾಯಿತು. ಭಾರತೀಯರಿಗೆ ಸಂಗೀತಲೋಕದ ಈ ‘ಭೀಮಸೇನ’ ಭಾರತದ ರತ್ನವೆಂದು ಮನದಟ್ಟಾಗಿ ಬಹುಕಾಲವಾಗಿತ್ತು. ದೆಹಲಿ ದೊರೆಗಳು ಇನ್ನೂ ವಯಸ್ಸಾಗಿಲ್ಲ ಎಂದು ಕಾದಿದ್ದರೆಂದು ಕಾಣುತ್ತದೆ. ಭೀಮಸೇನ್ ಜೋಶಿಯವರಿಗೆ ಭಾರತರತ್ನ ಕೊಡದಿದ್ದರೆ ಏನಾಗುತ್ತಿತ್ತು? ಏನೂ ಆಗುತ್ತಿರಲಿಲ್ಲ. ನೊಬೆಲ್ ಕೊಡಮಾಡದೇ ಗಾಂಧೀಜಿ ವಿಶ್ವಶ್ರೇಷ್ಠರಾಗಿ ಉಳಿದಿಲ್ಲವೇ? ಅಂತೆಯೇ ಭೀಮಸೇನರು. ಆಂತೂ ಭಾರತರತ್ನ ಪ್ರಶಸ್ತಿಯ ಮೌಲ್ಯ ಜಾಸ್ತಿಯಾಯಿತು. ಕನ್ನಡಿಗರು ಹೆಮ್ಮೆಪಡುವಂತಾಯಿತು.
ಜೋಶಿಯವರ ಸಂಗೀತ ಆಸ್ವಾದಿಸಲು ನೀವು ಸಂಗೀತ ಅಭ್ಯಾಸ ಮಾಡಿರಬೇಕಿಲ್ಲ. ಅವರ ಆಪ್ತದನಿಯಲ್ಲಿ ಕೇಳಿಬರುವ ದಾಸವಾಣಿಗೆ ಇಡೀ ಕನ್ನಡ ಜನತೆಯೇ ಮರುಳಾಯಿತು. ಕ್ಯಾಸೆಟ್ಟು ತಿರಿಸಿ ಮುರಿಸಿ ಹಾಕಿ ಸವೆಸಿದರು ಜನ. ಭಜನೆ, ಅಭಂಗ್, ಠುಮ್ರಿ, ಖ್ಯಾಲ್ ಹೀಗೆ ಹಲವು ಪ್ರಾಕಾರಗಳಲ್ಲಿ ಏಕ ರೀತಿಯ ಪ್ರಭುತ್ವ ಸಾಧಿಸಿದ ಅಪರೂಪದ ಸಾಧಕರವರು.
ಬೆಲ್ಲದ ಸಿಹಿ ಹೇಗಿರುತ್ತದೆ ಎಂಬುದನ್ನು ನಿವೆಷ್ಟೇ ಪದಪುಂಜಗಳಿಂದ ವಿವರಿಸಿದರೂ ಪ್ರಯೋಜನವಿಲ್ಲ. ಬೆಲ್ಲ ತಿಂದಾಗಲೇ ಅದರ ಅನುಭೂತಿ ನಮಗೆ ದಕ್ಕುವುದು. ಭೀಮಸೇನರ ಸಂಗೀತವನ್ನು ಪದಗಳಲ್ಲಿ ಹಿಡಿಯುವುದು ಕಷ್ಟ. ಹಿಂದುಸ್ತಾನಿ ಸಂಗೀತಕ್ಕೆ ಒಂದು ಮಸ್ಕ್ಯೂಲರ್ ರೂಪ ಕೊಟ್ಟವರು ಭೀಮಸೇನರು. ನನಗೆ ಅವರ ಲಲಿತ್ ಭಟಿಯಾರ್ ನ “ಓ ಕರತಾರ್” ನಂತಹ ಬಂದಿಷ್ ಗಳನ್ನು ಕೇಳಿದಾಗಲೆಲ್ಲ ಜರ್ಮನ್ ನಿರ್ಮಿತ ಸುಂದರ ಆದರೆ ಸದೃಢಕಾಯದ ಕಾರುಗಳು ನೆನಪಾಗುತ್ತವೆ. ಹೆಣ್ಣಿನ ಸೌಂದರ್ಯ ಮತ್ತು ಪುರುಷನ ಬಲದ ಬಹು ನಾಜೂಕಿನ ಮಿಶ್ರಣದಂತೆ ಭಾಸವಾಗುತ್ತದೆ ಜೋಶಿಯವರ ಗಾಯನ. ವಿಲಂಬತಗಳಲ್ಲಿ ರಾಗದ ವಾತಾವರಣವನ್ನು ನಿರ್ಮಿಸುವಾಗ ಶಾಂತವಾಗಿ ಹರಿಯುವ ಬಯಲುಸೀಮೆಯ ನದಿಗಳಂತೆ ಭಾಸವಾಗುವ ಅವರ ಗಾಯನವು ಮಧ್ಯ ಲಯದ ತಾನುಗಳ ಇಕ್ಕಟ್ಟಿನ ಹಾದಿಯಲ್ಲಿ ಚಲಿಸುವಾಗ ರಮಣೀಯವಾಗುತ್ತಾ, ಧೃತ್ ನಲ್ಲಿ ಧುಮ್ಮಿಕ್ಕುವ ಜಲಪಾತವಾಗಿ ರುದ್ರರಮಣೀಯ ಅನುಭವವನ್ನು ಕೊಡುತ್ತದೆ. ಭೀಮಸೇನರ ದನಿಗೆ ಕೇಳುವವರನ್ನು ಸಮ್ಮೋಹನಗೊಳಿಸುವ ಶಕ್ತಿ ಎಲ್ಲಿಂದ ಬರುತ್ತದೆ ಎಂದರೆ ಅವರ ಪರಿಪೂರ್ಣವಾದ ‘ಸುರೇಲಿ’ (ಶೃತಿಬದ್ಧವಾಗಿ) ಹಾಡುವ ಸಾಧನೆಯಿಂದ. ಈ ಸುರೇಲಿಯೆಂಬುದು ಅವರ ಅತಿವೇಗದ ತಾನುಗಳಿಂದ ಹಿಡಿದು ಗಾಯನದ ಯಾವುದೇ ಸ್ತರಗಳಲ್ಲಿ ಸ್ಥಾಯಿಯಾಗಿಯೇ ಇರುತ್ತದೆ ಎಂಬುದೇ ಅವರ ಗಾಯನದ ಮುಖ್ಯವಾದ ಹಿರಿಮೆ. ಈ ಕಾರಣಕ್ಕಾಗಿಯೇ ಅವರು ರಾಗ ಕಾಫಿಯಲ್ಲಿ ಹಾಡಿದ ‘ಪಿಯಾ ತೊ ಮಾನತ ನಾಹಿ’ ಯಂತಹ ಪ್ರೇಮಿಯೊಬ್ಬಳ ವಿರಹ ಸಂವೇದನೆಯ ಠುಮ್ರಿ ನಮ್ಮನ್ನು ಭಾವ ಪರವಶಗೊಳಿಸುತ್ತದೆ. ಈ ಭಾವವನ್ನು ಚಿತ್ರಿಸುತ್ತಿರುವುದು ಗಡಸುದನಿಯ ಪುರುಷ ಗಾಯಕ ಎಂಬ ಅರಿವೇ ನಮಗೆ ಮೂಡುವುದಿಲ್ಲ.
ಖ್ಯಾತ ಹಾರ್ಮೋನಿಯಮ್ ವಾದಕರಾದ ವಸಂತ್ ಕನಕಾಪುರ ಅವರು ಎಸ್ ಪಿ ಬಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ನನಗೆ ಜೋಶಿಯವರಿಗೆ ಸಾಥ್ ಮಾಡುವದು ಯಾವಾಗಲೂ ಒಂದು ಸವಾಲು” ಎಂದಿದ್ದರು. ಅದು ಅವರ ವಾದನದಲ್ಲಿಯ ಕೊರತೆ ಎಂದಲ್ಲ. ಅವರೇ ಹೇಳುವಂತೆ “ಭೀಮಸೇನರು ಹಾಡುವಾಗ ಎಷ್ಟು ತಲ್ಲೀನನಾಗಿಬಿಡುತ್ತೇನೆ ಎಂದರೆ ನಾನು ನನ್ನ ಕೆಲಸವನ್ನೇ ಮರೆತುಬಿಡುತ್ತೇನೆ”.
ನಾವು ಜೋಶಿಯವರನ್ನು ಕೇಳಲು ಆರಂಭಿಸುವ ಹೊತ್ತಿಗಾಗಲೇ ಅವರ ಪರಾಕಾಷ್ಠತೆಯ ಕಾಲ ಕಳೆದು ಹೋಗಿತ್ತು. ಅಂದರೆ ಅವರ ಸಂಗೀತ ಕಳೆಗುಂದಿತ್ತು ಎಂದಲ್ಲ. ಅಲ್ಲಿ ಆರ್ಭಟದ ತಾನುಗಳ ಜಲಪಾತ ಕೊಂಚ ಕಡಿಮೆಯಾಗಿತ್ತು. ಮುಂಬಯಿ, ಪುಣೆಗಳಂತಹ ಷಹರಗಳಲ್ಲಿ ಒಂದೇ ದಿನದಲ್ಲಿ ಎರಡು ಮೂರು ಕಡೆ ಅವರ ಕಛೇರಿಗಳಿರುತ್ತಿದ್ದವು ಎಂದು ಹಿರಿಯೊಬ್ಬರು ನೆನೆಸಿಕೊಂಡಾಗ ನನ್ನಂತಹವರಿಗೆ ಇಂತಹ ಸುವರ್ಣಕಾಲದಲ್ಲಿ ನಾನು ಹುಟ್ಟಿರಲಿಲ್ಲ ಎಂದು ಖೇದವಾಗುತ್ತದೆ. ಹೆಚ್ ಎಂ ವಿ ಎಂಬ ಸಂಸ್ಥೆ ಈ ಮಹಾನ್ ಕಲಾವಿದನನ್ನು ಹೋದಲ್ಲಿ ಬಂದಲ್ಲಿ ಕಾಡಿ ದುಡಿಸಿಕೊಳ್ಳದೇ ಹೋಗಿದ್ದರೆ ಜೋಶಿಯವರ ಆಳ ಅಗಲಗಳು ಈ ತಲೆಮಾರಿಗೆ ತಿಳಿಯುತ್ತಲೇ ಇರಲಿಲ್ಲ. ಕೋಮಲ್ ವೃಷಭ್ ಅಸಾವರಿ ನಮಗೆ ಸಿಕ್ಕುತ್ತಿರಲಿಲ್ಲ. ಅತಿ ಸುಂದರವಾಗಿ ಕಡೆದಿಟ್ಟ ಭೈರವಿ ಠುಮ್ರಿ ’ಬಾಬುಲ್ ಮೊರಾ’ ದಿಂದ ನಾವು ವಂಚಿತರಾಗಿಬಿಡುತ್ತಿದ್ದೆವು. ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಸಂಗೀತೋತ್ಸವವೊಂದರಲ್ಲಿ ರಾಗ ಮುಲ್ತಾನಿಯಲ್ಲಿ ಹಾಡಿದ ‘ನೈನನ ಮೆ ಆನ ಬಾನ’ ಧ್ವನಿ ಸುರುಳಿ ಮೈ ನವಿರೇಳಿಸುವಂತಿದೆ. ಅಲ್ಲಿ ಹಾಜರಿದ್ದ ಆ ಕಾಲಘಟ್ಟದ ಪ್ರಮುಖ ಕಲಾವಿದೆ ರೋಷನಾರಾ ಬೇಗಮ್ ಜೋಶಿಯವರು ಈ ರಾಗ ಮುಗಿಸಿದ ಬಳಿಕ ಆನಂದ ಭಾಷ್ಪ ಸುರಿಸುತ್ತಾ ಬಂದು ಭೀಮಸೇನರನ್ನು ಆಲಂಗಿಸಿದ್ದರ ಉಲ್ಲೇಖವಿದೆ.
ಭೀಮಸೇನರ ಇತಿಹಾಸ ಗಮನಿಸಿದರೆ ಅವರು ಸಂಗೀತಕ್ಕಾಗಿಯೇ ಹುಟ್ಟಿದವರು ಎನ್ನಲು ಯಾವ ಅಡ್ಡಿಯೂ ಇಲ್ಲ. ಸಂಗೀತದ ಕಲಿಕೆಗಾಗಿ ಬಾಲ್ಯದಲ್ಲಿಯೇ ಮನೆಬಿಟ್ಟು ಹೋದ ಅವರು ಆ ಉದ್ದೇಶಕ್ಕಾಗಿ ಭಾರತದ ಉದ್ದಗಲ ಅಲೆದಿದ್ದಾರೆ. ಅವರ ಪರಿಣಾಮಕಾರಿ ಆಲಾಪ್ ಗಳ ಹಿಂದೆ, ಬಲಶಾಲಿ ತಾನ್ ಗಳ ಹಿಂದೆ ಒಬ್ಬ ತೀವ್ರ ಹಠವಾದಿ ಸಾಧಕನಿದ್ದಾನೆ. ಒಂದೆರಡು ರಾಗ ಕಲಿತು ದಿಢೀರ್ ಜನಪ್ರಿಯತೆಗಳಿಸುವ ಉದ್ದೇಶವೇ ಅವರಿಗಿರಲಿಲ್ಲ. ಆದರೆ ರಂಗಕ್ಕೆ ಇಳಿದ ಮೇಲೆ ಅವರು ಮೆಟ್ಟಿಲು ಹತ್ತಿದರೇ ಹೊರತು ಇಳಿಯಲಿಲ್ಲ.
ಕಿರಾನಾ ಘರಾಣೆಯ ಸ್ಥಾಪಕರಾದ ಉಸ್ತಾದ್ ಕರೀಂ ಖಾನ್ ರನ್ನು ಕೇಳಿದರೆ ನಮಗೆ ಭೀಮಸೇನರ ಗಾಯಕಿಯ ಮೇಲೆ ಅಪಾರ ಪ್ರಭಾವ ಬೀರಿದ್ದನ್ನು ಗಮನಿಸಬಹುದು. ಕರೀಂ ಖಾನ್ ರದ್ದು ಬಲು ಕೋಮಲವಾದ ಮಧುರವಾದ ಧ್ವನಿ. ಜೋಶಿಯವರು ಅವರ ಒಳ್ಳೆಯ ಅಂಶಗಳನ್ನೆಲ್ಲ ತಮ್ಮ ಗಾಯಕಿಯಲ್ಲಿ ಅಳವಡಿಸಿಕೊಂಡರು. ಇನ್ನು ಕರಿಂ ಖಾನ್ ರ ಶಿಷ್ಯರೇ ಆಗಿದ್ದ ಸವಾಯಿ ಗಂಧರ್ವರ (ಭೀಮ ಸೇನರ ಗುರುಗಳು) ಪ್ರಭಾವ ಜೋಶಿಯವರ ಮೇಲೆ ಆಗಿರಲೇಬೇಕು.ಜೋಶಿಯವರ ಪ್ರಕಾರ “ಎಲ್ಲಾ ಕಲಾವಿದನಲ್ಲೂ ಒಬ್ಬ ಚೋರನಿರುತ್ತಾನೆ. ಯಾರನ್ನಾದರೂ ನಕಲು ಮಾಡುವುದು ಸುಲಭ ಆದರೆ ಅದನ್ನು ಅಸಲು ಮಾಡಿಕೊಂಡು ಪ್ರಸ್ತುತಪಡಿಸುವುದರಲ್ಲಿ ಕಲಾವಿದನ ಸೃಜನಶೀಲತೆಯಿದೆ”.
ಜೋಶಿಯವರ ವೈಶಿಷ್ಟ್ಯವೇನೆಂದರೆ ಅವರ ಮಟ್ಟದ ಕಲಾವಿದರಾಗುವುದು ಹಾಗಿರಲಿ, ಜೋಶಿಯವರನ್ನು ಸಮರ್ಥವಾಗಿ ಅನುಕರಿಸುವುದೂ ನಮ್ಮ ಹಲವು ಕಲಾವಿದರಿಂದ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಭೀಮಸೇನರನ್ನು ಅನುಕರಿಸಿ ಹಾಡುವವರ ದಂಡೇ ಬೆಳೆದಿತ್ತು, ಅದರಲ್ಲೂ ಕರ್ನಾಟಕದಲ್ಲಿ. ಬಹುಪಾಲು ಗಾಯಕರು ತಮ್ಮ ಅಸಲಿ ಮಧುರ ಧ್ವನಿಯನ್ನು ಬಿಟ್ಟು ಜೋಶಿಯವರ ಗಡಸು ಧ್ವನಿಯನ್ನು ಅನುಕರಿಸಲು ಸಮಯ ವ್ಯರ್ಥ ಮಾಡಿದರು. ಕೆಲವರು ಜೋಶಿಯವರಂತೆ ನೆಟ್ಟಗೆ ಕುಳಿತುಕೊಳ್ಳುವದನ್ನು ಅನುಕರಿಸಿದರು. ಇನ್ನೂ ಕೆಲವರು ಜೋಶಿಯವರ ಹಿಂದೆ ಎಷ್ಟು ಜನ ತಂಬೂರ ಸಾಥಿಯವರನ್ನು ಕೂರಿಸಿಕೊಳ್ಳುತ್ತಾರೋ ಅಷ್ಟೇ ಜನರನ್ನು ತಾವೂ ಹಿಂದುಗಡೆ ಬಿಟ್ಟುಕೊಂಡು ಹಾಡಿ ನೋಡಿದರು. ಅವರ ಗಾಯಕಿ ಮಾತ್ರ ಯಾರಿಗೂ ಹತ್ತಲಿಲ್ಲ. ಆಲದ ಮರದ ಬುಡದಲ್ಲಿ ಬೆಳೆಯುವ ವ್ಯರ್ಥ ಪ್ರಯತ್ನವೇ ಆಯಿತು.
ಜೋಶಿಯವರು ಮುಂದಿನ ಸಾಲಿನ ವಿದ್ವಾಂಸರನ್ನು ಮೆಚ್ಚಿಸುವದಕ್ಕೆ ಆತುರ ತೋರಿದ್ದು ಕಡಿಮೆಯೇ ಎನ್ನಬಹುದು. “ಗಾಯಕನಾಗಿರದಿದ್ದರೆ ಕಾರ್ ಮೆಕ್ಯಾನಿಕ್ ಆಗಿರುತ್ತಿದ್ದೆ’‘ ಎನ್ನುವ ಜೋಶಿಯವರು ಗಾಯನದ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದವರಲ್ಲ. ಅವರ ಹಾಗೆ ಮೈಕ್ ಗಳನ್ನು ಪರಿಣಾಮಕಾರಿಯಾಗಿ ಬಳಸುವ ಕಲಾವಿದರು ವಿರಳ. ಹಾಡುವಾಗ ಮುಖವನ್ನು ಮೈಕಿನ ದೂರಕ್ಕೂ, ಹತ್ತಿರಕ್ಕೂ ತರುತ್ತಾ ಆ ಮೂಲಕ ಉಂಟುಮಾಡುವ ಶಬ್ದ ವ್ಯತ್ಯಾಸಗಳು ಕೇಳುಗನಿಗೆ ವಿಭಿನ್ನ ಅನುಭವವನ್ನು ನೀಡುತ್ತವೆ. ಲಯಕ್ಕೆ ಬಹಳ ಮಹತ್ವ ಕೊಡುತ್ತಿದ್ದರಾದರೂ ಲೆಕ್ಕಾಚಾರಗಳಲ್ಲಿ ಮುಳುಗಿ ಗಾಯನ ಹದಗೆಡೆಸಿಕೊಂಡವರಲ್ಲ. ಅವರ ಪ್ರಕಾರ “ಗಾಯನದಲ್ಲಿ ತಿ ಹೈ ಗಳು ಗಣಿತ ಲೆಕ್ಕಾಚಾರದ ಫಲಗಳಾಗಿ ಹೊರಹೊಮ್ಮದೇ ಅವೇ ಅವಾಗಿ ಪ್ರಕಟಗೊಂಡರೆ ಚೆಂದ”.
ಇವೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ಭಾವಪೂರ್ಣ ಭಜನೆಗಳಿಂದ ಅವರು ನಮ್ಮೆಲ್ಲರ ಮನದಲ್ಲಿ ನಿಂತಿದ್ದಾರೆ. ಜನಪ್ರಿಯನಾದವನು ಶ್ರೇಷ್ಠನೂ ಆಗಬಹುದೆಂಬುದಕ್ಕೆ ಅವರು ಒಳ್ಳೆಯ ಉದಾಹರಣೆ.ಭೀಮಸೇನರನ್ನು ನಾವು ಕನ್ನಡಿಗರು ಎಷ್ಟು ಪ್ರೀತಿಸುತ್ತೇವೆಯೋ ಅದರ ಇಮ್ಮಡಿಯಾದ ಪ್ರೀತಿ ಅವರ ಮೇಲೆ ಮರಾಠಿಗರಿಗಿದೆ. ಎಷ್ಟೋ ಮರಾಠಿಗರಿಗೆ ಜೋಶಿಯವರ ಕನ್ನಡದ ಮೂಲದ ಬಗ್ಗೆ ತಿಳಿದೇ ಇಲ್ಲ. ಹಲವು ದಶಕಗಳ ಕಾಲ ತಮ್ಮ ಅತ್ಯುತ್ತಮ ದರ್ಜೆಯ ಸಂಗೀತ ಉಣಬಡಿಸಿದ ಇಂತಹ ಅಪ್ರತಿಮ ಗಾರುಡಿಗನಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಂದಿದ್ದು ಬಹಳದ ಸಂಗತಿ. ಇಂತಹ ದೈತ್ಯಪ್ರತಿಭೆ “ಸಂಗೀತ ಕ್ಷೇತ್ರದ ಎಲ್ಲಾ ಸಾಧಕರ ಪರವಾಗಿ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ” ಎಂದಿದ್ದು ಬಹು ದೊಡ್ಡ ಮಾತು. ಸಮಸ್ತ ಕನ್ನಡಿಗರ ಪರವಾಗಿ ನಾಡಿನ ಎರಡನೇ ಭಾರತರತ್ನಕ್ಕೆ ಅಭಿನಂದನೆಗಳು.
-ಚಿನ್ಮಯ.
ಪ್ರಕಟಿಸಿದ ವಿಜಯ ಕರ್ನಾಟಕಕ್ಕೆ ವಂದನೆಗಳು.

ಫೋಟೊ ಇಂಟರ್ ನೆಟ್ ನಿಂದ ಡೌನ್ ಲೋಡ್ ಮಾಡಿದ್ದು.