Friday, November 14, 2008

ಹೀಗೊಂದು ಪ್ರತಿಕ್ರಿಯೆ

ಇತ್ತೀಚೆಗೆ ರುಜುವಾತು ಸಂಪದ. ನೆಟ್ ನಲ್ಲಿ ಪ್ರಕಟವಾದ ಡಾ. ಆನಂತಮೂರ್ತಿಗಳ ‘ಇವತ್ತಿನ ರಾಜಕಾರಣದಲ್ಲಿ ನಾನು ಮತ್ತು ನೀವು’ ಬರಹಕ್ಕೆ ನಾನು ಬರೆದ ಪ್ರತಿಕ್ರಿಯೆ. ಪ್ರಕಟಿಸಿದ ರುಜುವಾತು ಸಂಪದ ತಂಡಕ್ಕೆ ವಂದನೆಗಳು.

ನಮಸ್ಕಾರ ಸರ್,
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಪಕ್ಷವೊಂದನ್ನು ಕಟ್ಟುವ ಪ್ರಯತ್ನಗಳು ನಿರಂತರ ಜಾರಿಯಲ್ಲಿರುವುದನ್ನು ಸಾದ್ಯಂತವಾಗಿ ವಿವರಿಸಿದ್ದೀರಿ. ಈ ಪ್ರಯತ್ನದಲ್ಲಿ ಅಲ್ಲಲ್ಲಿ ತಾತ್ಕಾಲಿಕ ಯಶಸ್ಸು ಕಂಡುಬಂದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯೇ ಕಾಂಗ್ರೆಸ್ಸಿನ ಪರ್ಯಾಯವಾಗಿದ್ದು ನಮ್ಮ ಕಣ್ಣ ಮುಂದಿದೆ.
ನನ್ನ ದೃಷ್ಟಿಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ದ್ವಿಜಶಾಹಿ ಪಕ್ಷಗಳೇ. ಬಿಜೆಪಿ ಅಂಗಿ ಬಿಚ್ಚಿ ನಿಂತಿದ್ದರಿಂದ ಜನಿವಾರ ಕಾಣುತ್ತಿದೆ ಅಷ್ಟೆ. ನಾಳೆ ಮುಸಲರಿಗೆ ಮತ್ತು ಕ್ರೈಸ್ತರಿಗೆ ಓಟು ಹಾಕುವ ಹಕ್ಕಿಲ್ಲವೆಂದಾಗಿಬಿಟ್ಟರೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ಚುನಾವಣೆಗೆ ಬಹು ಮುಖ್ಯ ವಿಷಯವೇ ಕಳೆದು ಹೋಗುತ್ತದೆ. ಬಿಜೆಪಿಯ ಹಿಂದುತ್ವ ಹಿಂದೆ ಸರಿಯಬೇಕಾಗುತ್ತದೆ. ಆಗ ಕೋಮುವಾದ ಎಂಬ ಶಬ್ದಕ್ಕೆ ರಾಜಕೀಯ ಅರ್ಥವಿರುವುದಿಲ್ಲ. ಆಗ ಮುಂಚೂಣಿಗೆ ಬರುವುದು ಜಾತಿವಾದ ಮಾತ್ರ. (ಈ ಕಾಲ್ಪನಿಕ ಸನ್ನಿವೇಶದಲ್ಲಿ ಬ್ರಾಹ್ಮಣರು ಅಲ್ಪ ಸಂಖ್ಯಾತರಾಗುವುದರಿಂದ ಅವರ ಓಟುಗಳೇ ನಿರ್ಣಾಯಕವಾಗಿಬಿಡಬಹುದು. ಪುನಃ ಅದು ಪುರೋಹಿತಶಾಹಿ ವ್ಯವಸ್ಥೆಯೇ ಆಗಿಬಿಡುವ ಅಪಾಯವಿದೆ)
ಕಾಂಗ್ರೆಸ್ ತನ್ನ ಸುದೀರ್ಘ ಆಳ್ವಿಕೆಯಲ್ಲಿ ಅಷ್ಟಾಗಿ ಗಮನ ಹರಿಸದ ಸಂಗತಿಗಳನ್ನು ಬಿಜೆಪಿ ಬಲವಾಗಿ ಅಪ್ಪಿಕೊಂಡಿತು. ಕಾಂಗ್ರೆಸ್ಸಿನ ತಪ್ಪುಗಳು ಅವೇ ಅವಾಗಿ ಬಿಜೆಪಿಗೆ ಒಂದು ಬಲವಾದ ಪಕ್ಷವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟವು. ಸುಮಾರು ಐವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿಗೆ ಮುಸ್ಲಿಮರ ಓಟಷ್ಟೇ ಬೇಕಾಯಿತು. ಅವರ ಉದ್ಧಾರ ಬೇಕಿರಲಿಲ್ಲ. ಇಷ್ಟು ಸುದೀರ್ಘ ಅವಧಿಯಲ್ಲಿ ಒಂದು ಜನಾಂಗವನ್ನು (ದಲಿತರನ್ನೊಳಗೊಂಡು) ಮುಖ್ಯವಾಹಿನಿಗೆ ತರುವುದು ಖಂಡಿತ ಸಾಧ್ಯವಿತ್ತು – ಇಚ್ಛಾ ಶಕ್ತಿ ಇದ್ದಿದ್ದರೆ. ಮುಸ್ಲಿಮರು ಈಗಾಗಲೇ ಮುಖ್ಯವಾಹಿನಿಯೊಳಗಿದ್ದಿದ್ದರೆ ದೇಶದೊಳಗಿನ ಮುಸ್ಲಿಮರಿಂದಲೇ ಬಾಂಬ್ ಸ್ಫೋಟಗಳು ಆಗುವುದು ಸಾಧ್ಯವಿರಲಿಲ್ಲ. ಇದು ಕಾಂಗ್ರೆಸ್ಸಿನ ಅತಿ ದೊಡ್ಡ ವೈಫಲ್ಯ. ಈಗ ನೆಡೆಯುತ್ತಿರುವ ಸರಣಿ ಸ್ಫೋಟಗಳು ಮುಂದಿನ ಚುನಾವಣೆಗೆ ಬಿಜೆಪಿಯನ್ನು ಬಲಗೊಳಿಸುತ್ತಲೇ ಹೋಗುತ್ತವೆ ಎಂಬುದು ವಿಪರ್ಯಾಸವಾದರೂ ಕಠೋರ ಸತ್ಯ.
ಇನ್ನು ಕಾಂಗ್ರೆಸ್ ಅವಧಿಯಲ್ಲೇ ರಚಿತವಾದ ಭಾಷಾವಾರು ಪ್ರಾಂತ್ಯ ವಿಂಗಡಣೆಯೆಂಬ ಸೂತ್ರವೇ ರಾಷ್ಟ್ರೀಯ ಕಲ್ಪನೆಗೆ ವಿರುದ್ಧವಾಗಿದೆಯೇನೋ ಎಂಬ ಅನಿಸಿಕೆ ನನ್ನಲ್ಲಿ ವ್ಯಕ್ತವಾಗಲಾರಂಭಿಸಿದೆ. ಇದು ಒಳ್ಳೆಯ ನಿರ್ಣಯವಾಗಿತ್ತೋ ಅಥವಾ ಕೆಟ್ಟದಾಗಿತ್ತೋ ಎಂಬ ಆಳ ವಿಮರ್ಶೆಗೆ ನನ್ನ ತಿಳುವಳಿಕೆ ಕಡಿಮೆ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿಗೆ ಇದು ಹೊಡೆತ ಕೊಡುತ್ತಲೇ ಇದೆ. ಇವತ್ತು ರಾಜ್ ಠಾಕ್ರೆಯ ಭಾಷಾಧಾರಿತ ಹಿಂಸಾಚಾರಗಳು ಆತನಿಗೆ ವೈಯಕ್ತಿಕ ರಾಜಕೀಯ ಅಭಿವೃದ್ಧಿಗೂ ಕೊನೆಯಲ್ಲಿ ಒಂದು ದಿನ ಬಿಜೆಪಿಗೇ ಅನುಕೂಲವಾಗಬಹುದು. ( ಆತನಿಗೆ ಬಿಜೆಪಿ ಕಾಂಗ್ರೆಸ್ಸಿಗಿಂತ ಹತ್ತಿರವಾದ ಪಕ್ಷ.) ಕರವೇ ದಂತಹ ನೆಲ ಜಲದ ಕುರಿತು ಹೋರಾಡುತ್ತಿರುವ ಸಂಘಟನೆಗಳಿಗೆ ಬಿಜೆಪಿಯೊಂದೇ ಆಶಾಕಿರಣವಾಗಿ ಉಳಿದಿದೆಯೆಂಬ ಸಂಶಯ ನನ್ನಲ್ಲಿದೆ. ಪ್ರಸ್ತುತ ರಾಜಕೀಯದಲ್ಲಿ ಭಾಷೆ ಎಂಬುದು ಧರ್ಮಕ್ಕಿಂತ ಜಟಿಲವಾದ ಮತ್ತು ಬಹಳ ಸಂಕೀರ್ಣವಾಗುತ್ತಿರುವ ಸಂಗತಿ. ಹಿಂದೂ ಮುಸ್ಲಿಂ ಎಂಬ ಸರಳ ಲೆಕ್ಕಾಚಾರಗಳು ಭಾಷೆಯ ವಿಚಾರದಲ್ಲಿ ಕೆಲಸ ಮಾಡಲಾರವು. ಲಾಲೂರನ್ನು ಖುಷಿಪಡಿಸಲು ರಾಜ್ ರನ್ನು ಹಣಿಯಲು ಹೋದರೆ ಒಂದಿಷ್ಟು ಮರಾಠಿ ಓಟುಗಳನ್ನು ಕಳೆದುಕೊಳ್ಳಲು ಕಾಂಗ್ರೆಸ್ ತಯಾರಾಗಿರಲೇಬೇಕು. ಕನ್ನಡ,ಮರಾಠಿ, ಬಂಗಾಳಿ ಇತ್ಯಾದಿ ಪ್ರತ್ಯೇಕ ಪ್ರಾಂತ್ಯವಾಗಿದ್ದುಕೊಂಡು ರಾಷ್ಟ್ರೀಯತೆಯ ಮನೋಭಾವ ಬೆಳೆಸಿಕೊಳ್ಳುವುದು ತಾರ್ಕಿಕವಾಗಿ ಸಾಧ್ಯವಾಗಬಹುದು ಆದರೆ ಜನಸಾಮನ್ಯನಲ್ಲಿ ಅದು ಕಷ್ಟ ಎಂದೇ ನನ್ನ ಅನಿಸಿಕೆ.
ಇದು ಕಾಂಗ್ರೆಸ್ಸಿನ ಕಥೆಯಾಯಿತು. ಸಮಾಜವಾದದ ಹಿನ್ನೆಲೆಯಿಂದ ಹುಟ್ಟಿಕೊಂಡ ಜನತಾ ಪರಿವಾರಕ್ಕೆ ಬಂದ ಯಶಸ್ಸನ್ನು ಕಾಯ್ದುಕೊಳ್ಳುವ ಸಾಮರ್ಥ್ಯವೇ ಇಲ್ಲದಾಯಿತು. ಕಾಂಗ್ರೆಸ್ಸು ಇವತ್ತು ಒಂದು ಕುಟುಂಬದ ಸ್ವತ್ತು. ಜನತಾ ಪರಿವಾರ ಹರಿಹರಿದು ಕೆಲವು ಕುಟುಂಬಗಳ ಸ್ವತ್ತು. ಹಾಗೆ ನೀಡಿದರೆ ಬಿಜೆಪಿಯಲ್ಲಿಯೇ ಕುಟುಂಬಕಾರಣ ಇಲ್ಲವೆನ್ನಬಹುದು.
ತಮ್ಮ ಲೇಖನದ ಕೊನೆಯಲ್ಲಿ ಬಿಜೆಪಿಯೇತರ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಸೋಲಿಸಬೇಕು ಎಂದಿದ್ದೀರಿ. ಆದರೆ ಅದರಿಂದ ಒಳಿತೇನು ಎಂಬುದು ಸ್ಪಷ್ಟಗೊಳ್ಳುವುದಿಲ್ಲ. ಸರಿಯಾದ ನಾಯಕರಿಲ್ಲದೇ ಎಲ್ಲವೂ’ಹತ್ತನೇ ಮನೆ’ ಯಿಂದಲೇ ನಿರ್ಧಾರಿತಗೊಳ್ಳುವ ಮುಖವಿಲ್ಲದ ಕಾಂಗ್ರೆಸ್ ಅನ್ನು ಹೇಗೆ ಆರಿಸೋಣ? ಕಾಂಗ್ರೆಸ್ಸೇತರರೆಡೆಗೊಮ್ಮೆ ನೋಡಿ. ದೇವೆಗೌಡ ಅಂಡ್ ಸನ್ಸ್, ಲಾಲೂ ಯಾದವ್, ಪಾಸ್ವಾನ್ ಇವರ್ಯಾರಾದರೂ ನಂಬಿಕೆಗೆ ಅರ್ಹರೇ? ನೀವು ಹೇಳುವ ಸಮಾಜವಾದದ ಸಿದ್ಧಾಂತಗಳೆಲ್ಲ ಇವರೆಲ್ಲ ಮರೆತು ಯಾವ ಕಾಲವಾಯಿತು. ಶಿಸ್ತಿನ ಪಕ್ಷವೆಂದುಕೊಂಡಿದ್ದ ಬಿಜೆಪಿಗೇ ಈಗ ಸಿದ್ಧಾಂತಗಳಿಲ್ಲ. ಯಡ್ಯೂರಪ್ಪನವರದು ಈಗ ಬರೀ ‘ಲೋಹವಾದ’.
ಹಟತೊಟ್ಟು ಬಿಜೆಪಿಯನ್ನು ಸೋಲಿಸಬೇಕೆಂಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ. ಏಕೆಂದರೆ ಹಾಗೆ ಸೋಲಿಸುವುದರಿಂದ ಅಂತಹ ಪ್ರಯೋಜನವಿಲ್ಲ. ಬದಲಿಗೆ ವಯಸ್ಸು ಕಳೆದಂತೆ ಕೊಂಚ ಮಂದಗಾಮಿಯಾಗಿ ತೋರುತ್ತಿರುವ ಅಡ್ವಾಣಿಯವರಲ್ಲಿಯೇ ದೇಶವನ್ನು ಮುನ್ನೆಡೆಸುವ ಸತ್ವ ಕಾಣಿಸುತ್ತದೆ ನನಗೆ. ಧರ್ಮವೆಂಬ ಆಫೀಮು ಮೆಲ್ಲುವ ಅಂಗ ಸಂಸ್ಥೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡರೆ ಅವರು ಖಂಡಿತವಾಗಿ ಯಶಸ್ಸುಗಳಿಸಬಲ್ಲರು ಅನ್ನಿಸುತ್ತದೆ.
ವಂದನೆಗಳು.
-ಚಿನ್ಮಯ.

Wednesday, October 15, 2008

ನಿಂತು ನಗಿಸುವ ಗಾರುಡಿ

ಇತ್ತೀಚೆಗೆ ಹಾಸ್ಯೋತ್ಸವಗಳನ್ನು ನಾನು ನೋಡಿಲ್ಲ. ಕನ್ನಡದಲ್ಲಿ ಇವುಗಳು ದೊಡ್ಡ ಪ್ರಮಾಣದಲ್ಲಿ ಪ್ರಚಲಿತಕ್ಕೆ ಬಂದೇ ಆರೆಂಟು ವರ್ಷಗಳಾದವೇನೋ. ಬಹುಬೇಗ ಜನಪ್ರಿಯತೆಯ ಪರಾಕಾಷ್ಟತೆ ತಲುಪಿ ಮೆರೆದ ಇದರ ಈಗಿನ ಸ್ಥಿತಿ ನಮ್ಮ ಈಗಿನ ಷೇರು ಸೂಚ್ಯಂಕದಷ್ಟೇ ಕೆಳಕ್ಕೆ. ಹೆಚ್ ಎನ್ ಕಲಾಕ್ಷೇತ್ರದಲ್ಲಿ ಪ್ರತಿ ಕ್ರಿಸ್ಮಸ್ ದಿನದಂದು ನಡೆಯುತ್ತಿದ್ದ ಹಾಸ್ಯೋತ್ಸವಕ್ಕೆ ಹೆಂಗಸರು ಮಕ್ಕಳಾದಿಯಾಗಿ ಬೆಳಿಗ್ಗೆ ಆರಕ್ಕೇ ಬಂದು ಕೂರುತ್ತಿದ್ದುದು ನೆನಪಾಗುತ್ತದೆ. ಪ್ರೊ. ಅ. ರಾ ಮಿತ್ರ ತುಂಬ ಸೊಗಸಾಗಿ ನೆಡೆಸಿಕೊಡುತ್ತಿದ್ದರು. ಈಗಲೂ ಅದೇ ಆಕರ್ಷಣೆ ಅಲ್ಲಿ ಉಳಿದಿದೆಯೋ ಇಲ್ಲವೋ ತಿಳಿದಿಲ್ಲ.
ಆಮೇಲೆ ಶುರುವಾಯಿತು ನೋಡಿ, ಗಲ್ಲಿ ಗಲ್ಲಿಗಳಲ್ಲಿ ದಿನ ಬೆಳಗಾದರೆ ಹಾಸ್ಯೋತ್ಸವ. ಜೋಕುಗಳು ಹಪ್ಪು ಹಳಸಲಾದರೂ ಬಿಡದೇ ಅಗಿದರು ನಗೆಗಾರರು. ಸರ್ದಾರ್ ಜಿ ಜೋಕುಗಳು, ಇಂಟರ್ ನೆಟ್ ಜೋಕುಗಳು, ಬೀಚಿ ಜೋಕುಗಳು ಎಲ್ಲ ಮುಗಿದ ಮೇಲೆ ಅವರಾದರೂ ಏನು ಮಾಡಿಯಾರು? ತಮ್ಮ ಸೃಜನಶೀಲತೆಯಿಂದ ಸೃಷ್ಟಿಸಿದ ಅದ್ಭುತ ಉತ್ಪತ್ತಿಗಳಿಂದ ಸ್ವತಃ ಬೀಚಿಯವರಿಗೆ ಎಷ್ಟು ಉತ್ಪನ್ನ ಹುಟ್ಟಿತ್ತೋ ಗೊತ್ತಿಲ್ಲ ಆದರೆ ಅವರು ಸಂದು ಹಲವು ವರ್ಷಗಳ ನಂತರ ಕೆಲವು ಜನರ ಹೊಟ್ಟೆ ತುಂಬಿಸಿದ್ದಂತೂ ನಿಜ. ಗಮನಿಸಬೇಕಾದ್ದೆಂದರೆ ಬೀಚಿ ಎಂದರೆ ಏನೆಂದು ಗೊತ್ತಿಲ್ಲದ ಮತ್ತು ಹೆಸರಷ್ಟೇ ಕೇಳಿದ್ದ ಜನಕ್ಕೂ ರಾಯಸಂ ಭೀಮಸೇನ್ ರಾವ್ ರ ತಾಕತ್ತೇನೆಂದು ತಿಳಿಯಿತು. ಪ್ರಾಣೇಶರಂತವರಿಗೆ ಅದರ ಪಾಲು ಸಲ್ಲಬೇಕಾದ್ದೇ.
ಪಾಶ್ಚಾತ್ಯರಲ್ಲಿ ಸ್ಟಾಂಡ್ ಅಪ್ ಕಾಮಿಡಿ ಎಂಬುದು ಬಹಳ ಹಳೆಯ ಮತ್ತು ಜನಪ್ರಿಯ ಅಭಿವ್ಯಕ್ತಿ. ೧೯ನೇ ಶತಮಾನದಲ್ಲಿಯೇ ಹುಟ್ಟು ಪಡೆದ ಈ ಪ್ರಾಕಾರ ಎಪ್ಪತ್ತರ ದಶಕದಲ್ಲಿ ಉತ್ತುಂಗಕ್ಕೆ ಏರಿದ್ದೊಂದೇ ಅಲ್ಲ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರುವಷ್ಟರ ಮಟ್ಟಕ್ಕೆ ಬೆಳೆದಿತ್ತು ಎಂಬ ಉಲ್ಲೇಖಗಳಿವೆ. ಈಗಲೂ ಇದು ಸಾಕಷ್ಟು ಸತ್ವವನ್ನು ಉಳಿಸಿಕೊಂಡಿದೆ ಅಲ್ಲಿ.
ನಗೆಗಾರರಿಗೂ ಸುದ್ದಿಗಾರರಿಗೂ ಒಂದು ಸಾಮ್ಯವಿದೆ. ನಿತ್ಯವೂ ನೂತನವಾದ್ದನ್ನು ಹುಡುಕಬೇಕು. ಸುದ್ದಿ ಓದಿದ ಮರುಕ್ಷಣದಲ್ಲಿ ಹಳತಾಗಿಬಿಡುತ್ತದೆ. ಜೋಕು ಕೇಳಿದ ತಕ್ಷಣಕ್ಕೆ ಹಳಸಲಾಗಿಬಿಡುತ್ತದೆ. ಕೇಳಿದ ಅಥವಾ ಓದಿದ ಹಾಸ್ಯಗಳೇ ಆದರೂ ಕೆಲವು ಆಗಾಗ ನೆನಪಾಗಿ ಸಟಕ್ಕನೆ ನಗೆ ತರಿಸಿವುದುಂಟು. ತಂತ್ರದ (concept) ಹಿನ್ನೆಲೆಯಿರುವ ಜೋಕುಗಳು ಹೀಗೆ ಮಾಡಬಲ್ಲವು. ಅದ್ಭುತ ಆಂಗಿಕ ಅಭಿನಯವುಳ್ಳ ಹಾಸ್ಯಗಳಿಗೂ ನಿರಂತರ ಗಟ್ಟಿತನವಿರುತ್ತದೆ. ಮಿ.ಬೀನ್ ಇದಕ್ಕೆ ಒಳ್ಳೆಯ ಉದಾಹರಣೆ. ಬೀಚಿ ಸೋಮಾರಿ ರಾಜ್ಯವೊಂದರ ವರ್ಣನೆ ಮಾಡುತ್ತಾ, ''ಆ ರಾಜ್ಯದಲ್ಲಿ ಗಿಡದಲ್ಲಿ ಸುಲಿದ ಬಾಳೆ ಹಣ್ಣೇ ಬೆಳೆಯುತ್ತಿತ್ತು.” ಎಂದು ಬರೆದರು. ಇಂತಹ ಹಾಸ್ಯಕ್ಕೆ ಭಾಷೆಯ ಹಂಗಿಲ್ಲ ನೋಡಿ. ಸಸ್ಯ ವಿಜ್ಞಾನಿಗಳು ಇದನ್ನು (ಸುಲಿದ ಬಾಳೆಹಣ್ಣಿನ ಗಿಡ) ನಿಜವಾಗಿಸುವವರೆಗೂ ಈ ಹಾಸ್ಯ ಹಸಿರಾಗಿಯೇ ಇರುತ್ತದೆ. ಭಾಷೆಯ ಚಳಕದಿಂದ, ಪ್ರಾಸಗಳಿಂದ ಜನಿತವಾಗುವ ಹಾಸ್ಯಗಳ ವ್ಯಾಪ್ತಿ ಚಿಕ್ಕದು. ಹಾಗೆ ನೋಡಿದರೆ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯವಾದ ಯಕ್ಷಗಾನದಲ್ಲಿ ಉತ್ತಮ ದರ್ಜೆಯ ಹಾಸ್ಯಗಳು ಸೃಷ್ಟಿಯಾಗುತ್ತವೆ. ಮತ್ತು ಅವು ಆಶುಹಾಸ್ಯಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಇವರ ಮಿತಿಗಳೇನೆಂದರೆ ಅವರು ಹೇಳುವ ಹಾಸ್ಯದ ಮಾತುಗಳು (ಬಹುಪಾಲು) ಅತಿ ಪ್ರಾದೇಶಿಕವಾದವುಗಳು. ಕಲಾವಿದರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಸಂಗತಿಗಳನ್ನು ಪ್ರಸಂಗಕ್ಕೆ ಧಕ್ಕೆಯಾಗದಂತೆ ಜಾಣ್ಮೆಯಿಂದ ಹಾಸ್ಯಕ್ಕೆ ಇಳಿಸುವ ವಿದೂಷಕರು ಕರತಾಡನ ಗಿಟ್ಟಿಸುತ್ತಾರಾದರೂ ಸಮಸ್ತ ಜನತೆಗೆ ತಲುಪಲಾರದ ಕೊರತೆ ಎದ್ದು ಕಾಣುತ್ತದೆ.
ನಗೆಗಾರನೇ (ಸ್ಟಾಂಡ್ ಅಪ್ ಕಾಮಿಡಿಯನ್) ಹಾಸ್ಯಗಳನ್ನು ಸೃಷ್ಟಿಸುವ ಸೃಜನಶೀಲನಾಗಿದ್ದರೆ ಆತನ ಭವಿಷ್ಯ ದೀರ್ಘವಾಗಿರುತ್ತದೆ. ಬೇರೆಯವರು ಬರೆದಿದ್ದನ್ನು ಹೇಳುವ ಹಾಸ್ಯ ಹಾಸ್ಯವೇ ಆಗಿದ್ದರೂ ಅದರ ಖಜಾನೆಗೆ ಮಿತಿಗಳಿವೆ. ಮತ್ತು ಮೊದಲೇ ಓದಿದ, ಕೇಳಿದ ಪ್ರೇಕ್ಷಕನಿಗೆ ಅದು ಅತೀವ ಕಿರಿಕಿರಿಯನ್ನುಂಟುಮಾಡುತ್ತದೆ. ಹೀಗಾದಾಗಲೇ ನಗೆಗಾರರು ನಗೆಪಾಟಲಿಗೆ ಒಳಗಾಗತೊಡಗುತ್ತಾರೆ. ಜನಾಕರ್ಷಣೆ ಕಡಿಮೆ ಆಗತೊಡಗುತ್ತದೆ. ಹಾಸ್ಯೋತ್ಸವಗಳು, ‘ಇಲ್ಲಿ ಕುಳಿತಿರುವುದೇ ಅಲ್ಲಿ ಕುಳಿತರಾಯಿತೆಂಬ’(ಬೀಚಿ ಉವಾಚ) ಧೋರಣೆಯ ಜನಕ್ಕೆ ಸೀಮಿತವಾಗುತ್ತವೆ. ಪಾಶ್ಚಾತ್ಯ ನಗೆಗಾರರು ಸರಕು ಮುಗಿದಾಗ ಕ್ಲಬ್ಬುಗಳಲ್ಲಿ ಅಶ್ಲೀಲ ಜೋಕುಗಳನ್ನು ಹೇಳಿಕೊಂಡಾದರೂ ಬದುಕುವ ಅವಕಾಶಗಳಿವೆ. ಹಾಸ್ಯದ ಸೃಷ್ಟಿಗೆ ಅತಿ ಅಗ್ಗದ ಸಾಧನವೇ ಅಶ್ಲೀಲತೆ. ನಮ್ಮಲ್ಲಿ ಅದರ ಸಾಧ್ಯತೆಗಳು ಕಡಿಮೆಯಾದ್ದರಿಂದ ನಮ್ಮ ನಗೆಗಾರರು ಒಂದು ಹಂತಕ್ಕೆ ತಲುಪಿ ದಿಕ್ಕುಗಾಣದೇ ನಿಂತುಬಿಡುತ್ತಾರೆ. ಪ್ರಾಣೇಶರು ಮತ್ತು ಕೃಷ್ಣೇ ಗೌಡರು ಈ ಪ್ರಾಕಾರಕ್ಕೆ ತಕ್ಕಮಟ್ಟಿಗಿನ ನ್ಯಾಯ ಒದಗಿಸುತ್ತಾರಾದರೂ ಏಕತಾನದಿಂದ ಹೊರಬರುವುದಕ್ಕೆ ಸಾಧ್ಯವಾಗಿಲ್ಲ. ದಯಾನಂದರು ಮಿಮಿಕ್ರಿಗೆ ಸೀಮಿತವಾಗುತ್ತಾರೆ. ಇದು ಇವರುಗಳ ಬಗೆಗಿನ ಪುಕಾರಲ್ಲ. ದಿನ ನಿತ್ಯ ಹೊಸದನ್ನು ತರುವುದು ಸುಲಭವಲ್ಲ ಎಂಬುದನ್ನು ಯಾರೂ ಒಪ್ಪಿಕೊಳ್ಳಬೇಕಾದದ್ದೇ.
ಭಾರತೀಯ ಸ್ಟಾಂಡ್ ಅಪ್ ಕಾಮಿಡಿಯ ಬಗ್ಗೆ ಹೇಳುವಾಗ ರಾಜು ಶ್ರೀವಾಸ್ತವ್ ರನ್ನು ಪ್ರಸ್ತಾಪಿಸಲೇಬೇಕಾಗುತ್ತದೆ. ಬಾಲಿವುಡ್ ಸಿನಿಮಾಗಳಲ್ಲಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈತನ ಅಗಾಧ ಹಾಸ್ಯಪ್ರಜ್ಞೆ ಮತ್ತು ಪ್ರತಿಭೆ ಬೆಳಕಿಗೆ ಬಂದಿದ್ದು ‘ಲಾಫ್ಟರ್ ಚಾಲೆಂಜ್’ ಎಂಬ ಎಪಿಸೋಡುಗಳ ಮೂಲಕ. ಇವರ ಬಗ್ಗೆ ನಾನು ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ. ಹಿಂದಿ ಬಲ್ಲ ಎಲ್ಲ ಭಾಷೆಯ ಟೀವಿ ವೀಕ್ಷಕರು ಇವರ ಹಾಸ್ಯವನ್ನು ನೋಡಿರುತ್ತಾರೆ. ಆತ ಬದುಕನ್ನು ಅರ್ಥ ಮಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಆತನ ಪ್ರೆಸೆಂಟೇಶನ್ ಸ್ಕಿಲ್ ಸಾಟಿ ಇಲ್ಲದ್ದು. ಅವರ ಹಾಸ್ಯಗಳನ್ನು ನೋಡುತ್ತಿದ್ದರೆ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ದಂಧೆಯ ಜನ ತಮ್ಮ ಸುತ್ತಲಿನ ರಾಜಕೀಯ ಮತ್ತು ಸಾಮಾಜಿಕ ಆಗುಹೋಗುಗಳನ್ನು ನಿರಂತರ ಗಮನಿಸುತ್ತಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇಂತಹ ಮಾಹಿತಿಗಳನ್ನು ತುರ್ತಾಗಿ ತಮ್ಮ ಸರಕಾಗಿ ಮಾರ್ಪಡಿಸಿಕೊಳ್ಳುವ ಕಲೆಗಾರಿಕೆ, ಬೇಕಾಗುತ್ತದೆ. ಮುಂಬೈ ಲೋಕಲ್ ರೈಲುಗಳ ಬಗ್ಗೆ ತುಂಬ ಪರಿಣಾಮಕಾರಿಯಾಗಿ ಮಾತನಾಡುವ ರಾಜು ಖಾಲಿ ಬೋಗಿಗಳಲ್ಲಿ ಮೇಲಿನ ಹಿಡಿಕೆಗಳ ತೊನೆದಾಟದಿಂದ ಹಿಡಿದು ಸಣ್ಣ ಸಣ್ಣ ವಿವರಗಳನ್ನು ತೋರಿಸುವದನ್ನು ನೋಡಿಯೇ ಅನುಭವಿಸಬೇಕು. ನೇತಾಗಳನ್ನು ಹಂಗಿಸುವುದರಲ್ಲಿ ನಿಸ್ಸೀಮರು ರಾಜು. ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುವ ತಂದೆಯೊಬ್ಬನ ತಳಮಳಗಳನ್ನು ತುಂಬಾ ನವಿರಾಗಿ ಚಿತ್ರಿಸುತ್ತಾ ಒಂದು ಹಂತದಲ್ಲಿ ನಮ್ಮ ಕಣ್ಣುಗಳನ್ನೂ ತೇವಗೊಳಿಸಿಬಿಡುತ್ತಾರೆ. ಘಟನೆಯ ಪಾತ್ರಗಳ ಭಾವದ ಜೊತೆ ನಿರ್ಜೀವ ವಸ್ತುಗಳಿಗೂ ಸಂವೇದನೆಗಳಿವೆಯೇನೋ ಎಂಬಂತೆ ಅಭಿವ್ಯಕ್ತಿಸುವ ರಾಜು ನಮ್ಮ ಜಯಂತ ಕಾಯ್ಕಿಣಿಯವರ ಬರಹಗಳನ್ನು ನೆನಪಿಗೆ ತರುತ್ತಾರೆ. ಒಂದುಸಲ ನೋಡಿಬಿಡುವ ಆಸೆಯಾದರೆ, ನಿಮಗೆ ಹಿಂದಿ ಅರ್ಥವಾಗುತ್ತಿದ್ದರೆ, ಯೂ ಟ್ಯೂಬ್ ನಲ್ಲಿ ‘ರಾಜು ಶ್ರೀವಾಸ್ತವ್’ ಎಂದೊಮ್ಮೆ ಹೊಡೆದು ನೋಡಿ. ನಮ್ಮ ನಗೆಗಾರರು ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ ಅನ್ನಿಸೀತು. ಸ್ಯಾಂಪಲ್ಲಿಗೆ ಕೆಳಗಡೆ ಲಿಂಕ್ ಕ್ಲಿಕ್ ಮಾಡಿ ನೋಡಿ.
http://uk.youtube.com/watch?v=5e6-PRoOhV8
ಕೊನೆಯ ಮಾತು. ನಮ್ಮಲ್ಲಿ ಹಾಸ್ಯಪ್ರಜ್ಞೆ ಎಂಬುದು ಮೊದಲಿಗಿಂತ ಬೆಳೆದಿದೆಯೋ, ಅಳಿದಿದೆಯೋ ಎನ್ನುವುದು ಪ್ರತ್ಯೇಕ ಚರ್ಚೆಯಾಗಬಲ್ಲ ವಸ್ತು. ಆದರೆ ಹಾಸ್ಯವನ್ನು ಸ್ವೀಕರಿಸುವ ಪ್ರೇಕ್ಷಕನಲ್ಲಂತೂ ಗಣನೀಯ ಬದಲಾವಣೆಗಳಾಗಿವೆ. ಹಳೇ ರಾಜ್ ಕುಮಾರ್ ಚಿತ್ರಗಳಲ್ಲಿನ ನರಸಿಂಹರಾಜು ಹಾಸ್ಯ ವರ್ತಮಾನದ ಪ್ರೇಕ್ಷಕನಿಗೆ ಅಷ್ಟಾಗಿ ಒಗ್ಗದಿರುವುದು ಪ್ರೇಕ್ಷಕನ ನಿರೀಕ್ಷೆಗಳಲ್ಲಾದ ಬದಲಾವಣೆಗಳನ್ನು ತೋರಿಸುತ್ತದೆ.
ಕನ್ನಡದಲ್ಲಿ ಇವತ್ತು ನಿಂತು ನಗಿಸುವುದರಲ್ಲಿ ಶ್ರೇಷ್ಠರು ಇದ್ದಾರಾದರೆ ಅದು ಮಾಸ್ಟರ್ ಹಿರಣ್ಣಯ್ಯನವರೇ. ಆದರೆ ಅವರನ್ನು ಈ ಪ್ರಾಕಾರಕ್ಕೆ ಪೂರ್ತಿ ಸೇರಿಸಲಾಗುವುದಿಲ್ಲ. ಅವರ ವ್ಯಾಪ್ತಿ ಅದಕ್ಕಿಂತಲೂ ದೊಡ್ಡದು.
-ಚಿನ್ಮಯ.

Saturday, October 11, 2008

ಗೊಂದಲವೆಂಬ ಗೊಂಡಾರಣ್ಯದಲ್ಲಿ...

ಯಾವ ಪಕ್ಷ, ಸಂಘಟನೆಗಳಿಗೂ ಸೇರಿರದ, ಸೆಕ್ಯುಲರ್, ಪೆಕ್ಯುಲಿಯರ್ ಇದ್ಯಾವುದೂ ಅಲ್ಲದ ಪ್ರಜೆ ಎಂಬುವನಿದ್ದಾನಲ್ಲ. ನನ್ನಂತವನು, ನಿಮ್ಮಂತವನು..ಇವನ ನಿಲುವೇನು ಇವತ್ತಿನ ದಿನಗಳಲ್ಲಿ? ಹೋದ ತಿಂಗಳು ಟೀವಿ ಧಾರವಾಹಿಗಳಿಗಿಂತ ಕರಾರುವಾಕ್ಕಾಗಿ ಬಾಂಬ್ ಸ್ಫೋಟಗಳಾದವು, ನೂರಾರು ಜನರು ಜೀವ ಕಳೆದುಕೊಂಡರು. ಚರ್ಚ್ ಗಳ ಮೇಲೆ ಧಾಳಿ ನಡೆದವು. ಓರಿಸ್ಸಾದಲ್ಲಿ ನನ್ ಒಬ್ಬರ ಮೇಲೆ ಅತ್ಯಾಚಾರದಂತಹ ಅಮಾನುಷ ಕೃತ್ಯಗಳಾದವು. ಇಂತ ಘಟನೆಗಳು ನೆಡೆದಾಗ ಟಿವಿ ಚಾನೆಲ್ಲುಗಳಿಗೆ, ಪತ್ರಿಕೆಗಳಿಗೆ, ರಾಜಕಾರಣಿಗಳಿಗೆ, ಧರ್ಮಕಾರಣಿಗಳಿಗೆ ಪೂರ್ಣಾವಧಿ ಕೆಲಸವಿರುತ್ತದೆ. ಬುದ್ಧಿಕಾರಣಿಗಳು ಇತ್ತೀಚಿನ ಸೇರ್ಪಡೆ. ನಮ್ಮದೇನಿದ್ದರೂ ಗೊಣಗಾಟ.
ರಕ್ತಸಿಕ್ತರನ್ನೂ ಬಿಡದೇ ಮೈಕಿನ ಕೋಲನ್ನು ಮೂತಿಗೆ ಹಿಡಿದುಬಿಡುವ ಸುದ್ಧಿ ಮಾಧ್ಯಮಗಳು ಘಟನೆಗಳನ್ನು ಇನ್ನೂಬೀಭತ್ಸವನ್ನಾಗಿ ಮಾಡಿಬಿಡುತ್ತವೆ. ಬುದ್ಧಿ ಜೀವಿಗಳು ಯಥಾಪ್ರಕಾರ ಶಾಂತಿಯ ಮಂತ್ರವನ್ನು ಪಠಿಸಿ ಸುಮ್ಮನಾಗುತ್ತಾರೆ. ಹೀಗಿರುವಾಗ ಶ್ರೀಸಾಮಾನ್ಯನ ನಿಲುವು ಏನೆಂಬುದು ಗೊತ್ತಾಗುವದೇ ಇಲ್ಲ. ಏಕೆಂದರೆ ಯಾರೂ ಅವನನ್ನು ಸಂದರ್ಶಿಸುವುದಿಲ್ಲ.
ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ಹಲವರಿಗೆ ತಮ್ಮ ನಿಲುವನ್ನು ಹೇಳಿಕೊಳ್ಳಲು ಅಡ್ಡಿ ಏನೆಂದರೆ ಬ್ರಾಂಡ್ ಆಗಿಬಿಡುವ ಭಯ. ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸಿದಿರೋ ನಿಮ್ಮನ್ನು ನೀವು ’ಬುದ್ಧಿಜೀವಿಗಳು’ ಎಂದು ಕರೆಸಿಕೊಳ್ಳುವ ಅಪಾಯವಿದೆ. ಹಿಂದುತ್ವದ ಹಿಂದೆ ಬಿದ್ದಿರೋ ನಿಮ್ಮನ್ನು ‘ಚೆಡ್ಡಿ ಜೀವಿಗಳು’ ಎಂದುಬಿಡುತ್ತಾರೆ. ಈಗಿನ ಹೊಸ ವ್ಯಾಖ್ಯಾನವೇನೆಂದರೆ. ಕೇವಲ ಹಿಂದೂಗಳ ಹಿತ ಕಾಯುವ ಸಮೂಹವನ್ನು ಕೋಮುವಾದಿಗಳೆಂದೂ, ಗಲಭೆಯಾದ ತಕ್ಷಣ ಗಡಬಡಿಸಿ ಎದ್ದು ಬುದ್ಧಿ ಹೇಳಲು ಬರುವವರನ್ನು ಬುದ್ಧಿವಾದಿಗಳೆಂದೂ, ಗಲಭೆಯಾಗಲಿ, ಬೇಕಾದ್ದಿರಲಿ ತಮಗೇನಾದರೂ ಸಿಗುತ್ತದೆಯೋ ಎಂದು ಸದಾ ಹೊಂಚು ಹಾಕಿ ಕುಳಿತಿರುವ ರಾಜಕಾರಣಿಗಳ ಸಮೂಹವನ್ನು ಅವಕಾಶವಾದಿಗಳೆಂದೂ ಕರೆಯಬಹುದಾಗಿದೆ
ಮೇಲೆ ಹೇಳಿದ ವಾದಿಗಳೆಲ್ಲ ಸೇರಿ ಸಾಮಾನ್ಯನಿಗೆ ಒಂದು ನಿಲುವನ್ನು ಸ್ಥಾಪಿಸಿಕೊಳ್ಳಲು ಸಾಧ್ಯವೇ ಆಗದ ಒಂದು ನಿರಂತರ ಗೊಂದಲದ ಸ್ಥಿತಿಯನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿವೆ. ಮಾಧ್ಯಮಗಳ ಪಾತ್ರವೂ ಬಹಳ ದೊಡ್ಡದು ಇದರಲ್ಲಿ. ನೋಡಿ, ನಮ್ಮಲ್ಲಿ ಎಲ್ಲವಕ್ಕೂ ಒಂದು ನಿರಾಕರಣವಿದೆ. ಮೊನ್ನೆ ದೆಹಲಿಯಲ್ಲಿ ಭಯೋತ್ಪಾದಕರು ಎನಿಸಿಕೊಂಡವರ ಪೊಲೀಸ್ ಎನ್ ಕೌಂಟರ್ ನೆಡೆಯಿತಲ್ಲ. ಒಬ್ಬ ಅತ್ಯಂತ ದಕ್ಷ ಅಧಿಕಾರಿಯೂ ಗುಂಡೇಟಿನಿಂದ ಸತ್ತರು. ಬದುಕುಳಿದ ಒಬ್ಬಿಬ್ಬರನ್ನು ಹಿಡಿದು ತಂದಿದ್ದು ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ಮರುದಿನವೇ ಇನ್ನೊಂದು ವರದಿ ಪ್ರಕಟವಾಗಿಬಿಡುತ್ತದೆ. ಪೊಲೀಸರು ಒತ್ತಡ ಹೆಚ್ಚಾದಾಗ ಕೆಲವು ಪಾಪದ ಸಾಬರ ಹುಡುಗರನ್ನು ಹಿಡಿದು ಮುಖಕ್ಕೆ ಕರಿಮುಸುಕು ತೊಡಿಸಿದ್ದಾರೆಂಬ ಆರೋಪವಿರುತ್ತದೆ. ಮಾನವ ಹಕ್ಕುಗಳ ಸದಸ್ಯರು ತಗಾದೆ ತೆಗೆಯುತ್ತಾರೆ. ನಮಗೂ ಇದ್ದಿರಬಹುದೇ ಎಂಬ ಆತಂಕ ಹುಟ್ಟಿಬಿಡುತ್ತದೆ. ದೂರದ ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾಲಬುಡದ ಕರಾವಳಿಯಲ್ಲಿಯೇ ಬಂಧನಗಳು ನಡೆದಾಗ, ಕಣ್ಣಿಗೆ ಕಾಣುವ ಮೀಸೆ ಇಲ್ಲದ ಗಡ್ಡಧಾರಿಗಳೆಲ್ಲ ಭಯೋತ್ಪಾದಕರಂತೆ ಕಂಡುಬಿಡುತ್ತಾರೆ. ಊರಿನ ತುದಿಗೆ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವ, ಸೈಕಲ್ ರಿಪೇರಿಯ ನಿರುಪದ್ರವಿ ಬಡ ಸಾಯ್ಬ ಭಟ್ಕಳಕ್ಕೆ ಹೋಗುವುದು ಹಾಗಿರಲಿ,ಭಟ್ಕಳ ಬೋರ್ಡ್ ಇರುವ ಬಸ್ಸಿನಿಂದ ಇಳಿದರೂ ಎಂಥೆಂತದೋ ಅನುಮಾನ ಹುಟ್ಟಿಬಿಟ್ಟಾಗ ನಮ್ಮ ಯೋಚನಾ ಕ್ರಮದ ಬಗ್ಗೆ ನಾಚಿಕೆಯಾಗಿಬಿಡುತ್ತದೆ. ಆದರೆ ಇವೆಲ್ಲ ನಮ್ಮ ಗೊಂದಲಗಳ ಫಲಗಳೆಂದೇ ನನ್ನ ಅನಿಸಿಕೆ.
ನಾನಾವತಿ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿದಾಗ ಪಾಪ, ಮೋದಿ ಮುಗ್ಧ ಇದೆಲ್ಲ ಕಾಂಗ್ರೆಸ್ಸಿಗರ ಪಿತೂರಿ ಎಂದು ಮರುಗಿದೆವು ನಾವು – ನನ್ನಂತವರು. ಬೆನ್ನಲ್ಲೇ ಬಂತಲ್ಲ ಮತ್ತೊಂದು ವರದಿ. ಮೋದಿ ನಾನವತಿಯನ್ನು ಹೊಂದಿಸಿಕೊಡಿದ್ದಾರೆಂದು ತೆಹಲ್ಕಾ ಹೇಳಿಕೊಂಡಿತು. ”ನಾನಾವತಿ ಹಮಾರಾ ಆದ್ಮಿ ಹೈ, ಹಮ್ ಉನ್ ಕೊ ಫಿಟ್ ಕರ್ಲೇಂಗೆ” ಎಂದು ಬಿಜೆಪಿಯ ಎಮ್ಮೆಲ್ಲೆಯೊಬ್ಬ ಹೇಳಿದ್ದು ನಮ್ಮ ಕ್ಯಾಮರಾದಲ್ಲಿದೆ ಎಂದಳು ತೆಹಲ್ಕಾ ಪತ್ರಕರ್ತೆ. ಹೇಳಿ ಯಾವುದು ಸತ್ಯ ಯಾವುದು ಸುಳ್ಳು.
ಇಂತಹ ನಿರಾಕರಣಗಳು ಹಿಂದೆ ಇರಲಿಲ್ಲವೆಂದಲ್ಲ. ಜಗತ್ತಿನ ಎಲ್ಲೆಡೆಯಲ್ಲೂ ಇವೆ. ಆದರೆ ಬಹು ಪ್ರಮುಖ ಘಟನೆಗಳಿಗೆ, ವ್ಯಕ್ತಿತ್ವಗಳಿಗೆ ಸಂಬಂಧಪಟ್ಟಂತೆ ನಿರಾಕರಣಗಳಿವೆ. ಹಿಟ್ಲರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದ ಇವುಗಳಲ್ಲಿ ಪ್ರಮುಖವಾದದ್ದು. ತಾಜ್ ಮಹಲ್ ಕಟ್ಟಿಸಿದ್ದು ಷಹಜಹಾನ್ ಅಲ್ಲವೇ ಅಲ್ಲ ಎಂಬ ವಾದವೂ ಈ ಗುಂಪಿಗೆ ಸೇರುತ್ತದೆ. ಈಗ ಹಾಗಿಲ್ಲ. ನಮ್ಮ ಸುತ್ತಲಿನ ಯಾವುದೇ ಕ್ಷುಲ್ಲಕ ಘಟನೆಗೂ ಒಂದು ನಿರಾಕರಣವುಂಟು. ಮತ್ತು ಇವೇ ನಮ್ಮನ್ನು ಸದಾ ಗೊಂದಲದಲ್ಲಿರುವಂತೆ ಮಾಡುತ್ತವೆ. ನಮಗೆ ತಿಳಿದಿರುವುದು ಸತ್ಯವೆಂದು ಭಾವಿಸಿ ಕುಳಿತುಕೊಳ್ಳುವ ಹಾಗಿಲ್ಲ.
ಮೊನ್ನೆ ಎನ್ ಡಿ ಟಿವಿಯಲ್ಲಿ, ಓರಿಸ್ಸಾದಲ್ಲಿ ನೆಡೆದ ಕ್ರೈಸ್ತರ ಮೇಲಿನ ದೌರ್ಜನ್ಯದ ಕುರಿತಾದ ಚರ್ಚೆಯೊಂದನ್ನು ವೀಕ್ಷಿಸುತ್ತಿದ್ದೆ. ಹಿಂದೂ ಜಾಗರಣ ವೇದಿಕೆಯ ಪ್ರತಿನಿಧಿಯೊಬ್ಬರು ಇಂತಹ ಘಟನೆಗಳ ಹಿಂದೆ ಮತಾಂತರದ ಪಾತ್ರ ಬಹಳ ದೊಡ್ಡದಿದೆ ಎಂಬುದನ್ನು ಮಂಡಿಸಿದರು. ಮಂಗಳೂರಿನ ಸುತ್ತಮುತ್ತ ಕ್ರೈಸ್ತ ಮತಾಂತರ ಹೇಗೆ ವ್ಯವಸ್ಥಿತವಾಗಿ ನೆಡೆಯುತ್ತಿದೆಯೆಂದು ವಿಶದವಾಗಿ ವಿವರಿಸಿದರು. ಕ್ರೈಸ್ತ ಪ್ರತಿನಿಧಿ ಅದಕ್ಕೆ ಉತ್ತರವಾಗಿ ಹೇಳಿದರು. “ನಾವು ಯಾರನ್ನು ಮತಾಂತರ ಮಾಡುತ್ತಿದ್ದೇವೆಂದು ಗಮನಿಸಿ, ನಿಮ್ಮ ಧರ್ಮ ಅವರನ್ನು ಸೂಕ್ತವಾಗಿ ನೆಡೆಸಿಕೊಂಡಿಲ್ಲ. ಅವರಿಗೆ ನಾವು ಬದುಕು ಕೊಡುತ್ತಿದ್ದೇವೆ.” ಎಂದರು. ಹಾಗೆಯೇ ಮುಂದುವರಿದು, “ಅದಿರಲಿ, ನಮ್ಮಲ್ಲಿ ಅದಕ್ಕೆ ಅವಕಾಶವಾದರೂ ಇದೆ, ನನ್ನನ್ನು ನೀವು ಹಿಂದೂ ಧರ್ಮಕ್ಕೆ ಮತಾಂತರಿಸಿಕೊಳ್ಳುತ್ತೀರೋ?“ ಎಂದು ಪ್ರಶ್ನಿಸಿದರು.
“ಅವಶ್ಯ ಬನ್ನಿ, ನಿಮಗೆ ಸ್ವಾಗತ” ಎಂದರು ಇವರು.
ಅವರ ತತ್ತಕ್ಷಣದ ಪ್ರಶ್ನೆಯೇನು ಗೊತ್ತೇ? “ನನ್ನನ್ನು ನೇರವಾಗಿ ಬ್ರಾಹ್ಮಣನನ್ನಾಗಿ ಮಾಡಿಕೊಳ್ಳುತ್ತೀರೋ?”
“ನೀವು ನಿಮಗೆ ಬೇಕಾದ ಜಾತಿಯನ್ನು ಆಯ್ದುಕೊಳ್ಳಬಹುದು” ಎಂದರು ಜಾಗರಣ ವೇದಿಕೆಯವರು.
ನನಗೆ ಇಲ್ಲಿ ಎರಡು ಸಂಗತಿಗಳು ಕಾಣುತ್ತವೆ. ಪ್ರಶ್ನಿಸುವ ಅವರಿಗೂ, ಉತ್ತರಿಸುವ ಇವರಿಗೂ ಮತ್ತು ನಮಗೂ ಗೊತ್ತು. ಮೇಲಿನ ಹೇಳಿಕೆಗಳು ಎಂದಿಗೂ ಕಾರ್ಯ ರೂಪಕ್ಕೆ ಬರಲಾರವು. ಈ ಪ್ರಶ್ನೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಬುಡಕ್ಕೆ ನಮ್ಮನ್ನು ಕೊಂಡೊಯ್ದು ನಿಲ್ಲಿಸುತ್ತದೆ. ಮತ್ತು ಮುಂದದು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಜಾತಿ ಬೇರುಗಳು ಎಷ್ಟು ಆಳಕ್ಕೆ ಇಳಿದುಬಿಟ್ಟಿವೆಯೆಂದರೆ, ಕ್ರೈಸ್ತರ ಆಮಿಷಗಳಿಗೆ ಒಲಿದು ಹಿಂದೂ ಸಮೂಹದ ಎಲ್ಲ ಜಾತಿಗಳಿಂದ ಒಂದಿಷ್ಟು ಮತಾಂತರವಾಗಿಬಿಟ್ಟಿದ್ದರೆ ಕಾಲಕ್ರಮೇಣ ಬ್ರಾಹ್ಮಣ ಕ್ರೈಸ್ತರು, ವಕ್ಕಲಿಗ ಕ್ರೈಸ್ತರು, ಕುರುಬ ಕ್ರೈಸ್ತರು ಇತ್ಯಾದಿಗಳೆಲ್ಲ ಹುಟ್ಟಿಕೊಂಡಿರುತ್ತಿದ್ದವು.

ಎರಡನೆಯದು, ಹಿಂದೂಗಳಲ್ಲಿ ಕೆಳ ಜಾತಿಯವರ ಬದುಕು ದುಸ್ತರವೆಂಬುದು ಎಷ್ಟು ನಿಜವೋ, ಕ್ರೈಸ್ತ ಧರ್ಮ ಮತಾಂತರಗೊಂಡವರ ಬದುಕನ್ನು ಹಸನಾಗಿಸುತ್ತದೆ ಎಂಬುದು ಒಂದು ಭ್ರಮೆಯೇ. ಕ್ರೈಸ್ತ ಧರ್ಮ ಮತಾಂತರಗೊಂಡವರಿಗೆ ಒಂದು ಅನನ್ಯತೆಯ ಗೌರವವನ್ನು ತಂದು ಕೊಡುತ್ತದೆ ಎಂದು ಅನಂತ ಮೂರ್ತಿಗಳು ಯಾವ ಅರ್ಥದಲ್ಲಿ ಹೇಳಿದರೋ ತಿಳಿಯೆ.

ನಿರಾಕರಣದ ಬಗ್ಗೆ ಹೇಳುವಾಗ ಸಮರ್ಥನೆಯ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ.
ಮುಸ್ಲಿಂ ಜಗತ್ತಿಗೆ ಅದರದ್ದೇ ಆದ ಸಮರ್ಥನೆ ಇರುತ್ತದೆ. ನಮ್ಮನ್ನು ಮುಖ್ಯವಾಹಿನಿಯಲ್ಲಿ ಯಾವತ್ತೂ ಪರಿಗಣಿಸಲಿಲ್ಲ. ನಿಮ್ಮ ಕಾಲನಿಗಳಲ್ಲಿ ನಮಗೆ ಮನೆ ಕೊಡಲಾರಿರಿ, ನಿಮ್ಮ ಕಂಪನಿಗಳಲ್ಲಿ ಕೆಲಸ ಕೊಡಲಾರಿರಿ. ಗುಜರಾತಿನಲ್ಲಾದ ಮುಸ್ಲಿಮರ ಕಗ್ಗೊಲೆಯಿಂದ ನೊಂದ ಕೆಲವರು ಭಯೋತ್ಪಾದಕರಾಗಿರಬಹುದು. ಇತ್ಯಾದಿ..ಇತ್ಯಾದಿ.
ನೀವು ದಿನ ಬೆಳಗಾದರೆ ಸಿಕ್ಕ ಸಿಕ್ಕಲ್ಲಿ ಬಾಂಬ್ ಸ್ಫೋಟಿಸುತ್ತಿದ್ದರೆ ನಿಮ್ಮನ್ನು ಹತ್ತಿರ ಸೇರಿಸುವುದಾದರೂ ಹೇಗೆ? ಎಂಬುದು ಇನ್ನೊಂದು ಸಮೂಹದ ವಾದ. ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಪ್ರಶ್ನೆಯಷ್ಟೇ ಗೊಂದಲಕಾರಿಯಾದದ್ದು ಇದು.
ಎತ್ತ ಸಾಗುತ್ತಿದ್ದೇವೆ ನಾವು?
-ಚಿನ್ಮಯ.

Sunday, October 5, 2008

ಟಾಟಾ ನ್ಯಾನೊ ಮತ್ತು ನಮ್ಮ ವಿಜ್ಞಾನ, ತಂತ್ರಜ್ಞಾನ

“ಶಾಂತಿಯ ಬಗ್ಗೆ ಚರ್ಚಿಸುವಾಗ ಗಾಂಧಿ ಎಂಬ ಹೆಸರನ್ನು ಉಪೇಕ್ಷಿಸಿದಿರಾದರೆ ಅದು ನಿಮ್ಮ ಸ್ವಂತ ರಿಸ್ಕು” ಹೀಗೆ ಹೇಳಿದವರು ಖ್ಯಾತ ಸಮಾಜ ಸುಧಾರಕ ಮಾರ್ಟಿನ್ ಲೂಥರ್ ಕಿಂಗ್.
ಟಾಟಾ ಕುರಿತು ಇಂತಹುದೇ ಒಂದು ಪ್ರಮೇಯ ಈಗ ಜಾಗತಿಕ ಮಟ್ಟದ ಕಾರು ತಯಾರಿಕರಿಗೆ ಮತ್ತು ಪೂರೈಕೆದಾರ ಸಂಸ್ಥೆಗಳಿಗೆ ಒದಗಿಬಂದಿದೆ. ಈಗ ಇವರ್ಯಾರೂ ಟಾಟಾ ಸಂಸ್ಥೆಯನ್ನು ಉಪೇಕ್ಷಿಸುವಂತಿಲ್ಲ. ಉಪೇಕ್ಷಿಸಿದರೆ ಅವರಿಗೇ ಹಾನಿ. ಕಾರು ತಯಾರಿಕರಿಗೆ ಟಾಟಾ ಒಂದು ಸವಾಲಾದರೆ, ಪೂರೈಕೆದಾರರಿಗೆ (ಸಪ್ಲಾಯರ್ಸ್) ಟಾಟಾ ಹೊಸ ಆಶಾಕಿರಣ. ತಮ್ಮದೇ ಪ್ರತಿಷ್ಟಿತ ಕಂಪನಿಗಳನ್ನು ಕಬಳಿಸುತ್ತಿರುವ ಟಾಟಾ ಬ್ರಿಟಿಷರಿಗೆ ಈಸ್ಟ್ ಇಂಡಿಯಾ ಕಂಪನಿಯೇ ಹೊಸ ಅಂಗಿ ತೊಟ್ಟು ಬಂದಂತೆ ಗೋಚರಿಸುತ್ತಿದೆ.
ರತನ್ ರ ಕನಸು ನ್ಯಾನೋ ದತ್ತ ಇಡೀ ಜಗತ್ತೇ ಭರವಸೆಯ ಕಣ್ಣುಗಳಿಂದ ನೋಡುತ್ತಿರುವಾಗ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದ ಕಣ್ಣುಗಳಲ್ಲಿ ಆಸೆಯನ್ನೂ ಹೊರಹೊಮ್ಮಿಸಿದೆ. ಸ್ವಯಂವರದಲ್ಲಿ ರತನ್ ಟಾಟಾ ಎಂಬ ಬ್ರಹ್ಮಚಾರಿಯ ಕುವರಿ ನ್ಯಾನೋ ಯಾರನ್ನು ವರಿಸುತ್ತಾಳೆಂಬುದನ್ನು ಕಾದು ನೋಡಬೇಕಾಗಿದೆ. ಕರ್ನಾಟಕ ಮತ್ತು ಆಂಧ್ರ ನಾನೋ ನೀನೋ ಎಂದು ಪೈಪೋಟಿಗೆ ಬಿದ್ದಿವೆ.
ಸುದ್ಧಿವಾಹಿನಿಗಳಲ್ಲಿ ಸದರಿ ಮಾಹಿತಿ ಪ್ರಸಾರವಾದಾಗ ಎಲ್ಲ ಕನ್ನಡಿಗರಂತೆ ನನಗೂ ಸಂತಸವಾಯಿತು. ಅದರಲ್ಲೂ ಧಾರವಾಡದಲ್ಲಿ ಇಂತಹ ಕೈಗಾರಿಕೆಯೊಂದು ಸ್ಥಾಪನೆಯಾಗುತ್ತದೆಯೆಂದರೆ ಬಹಳ ಖುಶಿಯ ಸಂಗತಿ. ಬಹುಕಾಲದಿಂದ ಅಲಕ್ಷಕ್ಕೊಳಗಾಗಿದ್ದ ಉತ್ತರ ಕರ್ನಾಟಕಕ್ಕೆ ಇದೊಂದು ಬಂಪರ್ ಅವಕಾಶವಾಗುವುದರಲ್ಲಿ ಸಂಶಯವಿಲ್ಲ. ಕರ್ನಾಟಕದಲ್ಲಿ ಬೃಹತ್ ಕೈಗಾರಿಕಾ ವಿಕೇಂದ್ರಿಕರಣದ ಮೊದಲ ಹೆಜ್ಜೆಯಾಗಲಿದೆ ಇದು.
ನ್ಯಾನೋಕರ್ನಾಟಕಕ್ಕೆ ಬಂತೆಂದು ಭಾವಿಸೋಣ. (ಇನ್ನೂ ದೇವೆಗೌಡರ ಅಸ್ತ್ರ ಹೊರಬಿದ್ದಿಲ್ಲ. ಅದನ್ನು ದೇವರು ಮಾತ್ರ ಬಲ್ಲ.) ಇದರ ಮೊಟ್ಟ ಮೊದಲ ಫಲಾನುಭವಿಗಳು ರಿಯಲ್ ಎಸ್ಟೇಟ್ ಮಂದಿ. ಇವರಿಗೆ ಮಾಹಿತಿಗಳು ಖಚಿತವಾಗಿರಬೇಕೆಂಬುದೇನಿಲ್ಲ. ವದಂತಿಗಳಿದ್ದರೂ ಸಾಕು. ಇವರು ಆಜನ್ಮ ಪರಾವಲಂಬಿ ಜೀವಿಗಳು. ಅಭಿವ್ರದ್ಧಿ ಸರಕಾರದಿಂದಾಗಲಿ, ಸಂಘ ಸಂಸ್ಥೆಗಳಿಂದಾಗಲಿ, ಅವುಗಳನ್ನೆಲ್ಲ ಜನಕ್ಕೆ ತೋರಿಸಿ ತಮ್ಮ ಅಭಿವೃದ್ಧಿ ಮಾಡಿಕೊಂಬವರು ಇವರು. ಈಗಾಗಲೇ ಧಾರವಾಡದ ಸುತ್ತಮುತ್ತ ಬೆಟ್ಟ ಬಯಲುಗಳೆಲ್ಲ ಭಯಂಕರ ಬೆಲೆ ಪಡೆದುಕೊಂಡಿರಬಹುದು. ಸರಕಾರ ಪ್ರಾರಂಭದಲ್ಲಿಯೇ ಇಂತಹ ಬೆಳವಣಿಗೆಗಳನ್ನು ನಿಯಂತ್ರಿಸಬೇಕಾಗಿದೆ. ನಿವೇಶನಗಳನ್ನು ಮಾರಾಟಕ್ಕೆಂದೇ ಖರೀದಿಸುವವರನ್ನು ಹೇಗಾದರೂ ತಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಧಾರವಾಡದಲ್ಲಿ ಮಿನಿ ಬೆಂಗಳೂರು ಉದಯಿಸಲಿದೆ. ಸಾಮನ್ಯ ಅಂಗಡಿಕಾರರಿಗೆ, ಶಾಲಾ ಮಾಸ್ತರರಿಗೆ, ಮತ್ತು ಇನ್ನಿತರ ಸಣ್ಣ ಪಗಾರದ ಜನರಿಗೆ ಧಾರವಾಡ ತುಟ್ಟಿಯಾಗುವ ಕಾಲ ದೂರವಿಲ್ಲ.
ಮತ್ತೊಂದು ಪ್ರಮುಖ ವಿಷಯವೆಂದರೆ ಉದ್ಯೋಗಾವಕಾಶಗಳು. ಸರಕಾರ ನ್ಯಾನೊದಂತಹ ದೊಡ್ಡ ಉದ್ದಿಮೆಗಳನ್ನು ರಾಜ್ಯಕ್ಕೆ ತರುವಾಗ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆಯ ಕರಾರನ್ನು ಅಳವಡಿಸುವದಕ್ಕೆ ಪ್ರಯತ್ನಿಸಬೇಕು. ಕಸಗುಡಿಸುವವರು ಮತ್ತು ಇತರೇ ಕೆಳಮಟ್ಟದ ಕೆಲಸಗಳಿಗೆ ನಮ್ಮವರು ಮತ್ತು ಅಧಿಕಾರಿ ವರ್ಗ ಮಹಾರಾಷ್ಟದವರು, ಬಂಗಾಳದವರಾದರೆ ಹೆಚ್ಚಿನ ಪ್ರಯೋಜನವಿಲ್ಲ. ಇದು ಭಾಷಾಭಿಮಾನದ ಪರಿಧಿಯನ್ನು ಮೀರಿದ್ದು. ಆದರೆ ಒಂದು ಭೂಭಾಗದ ಜನರ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ. ಧಾರವಾಡದಲ್ಲಿನ ಉದ್ದಿಮೆಯೊಂದರಲ್ಲಿ ದೂರದ ಮಹಾರಾಷ್ಟ್ರದ ಜನತೆ ಬಹು ಸಂಖ್ಯೆಯಲ್ಲಿ ಉದ್ಯೋಗ ಪಡೆದರೆ ಅದು ಸಹಜವಾಗಿ ಸ್ಥಳೀಕರ ಅಸಹನೆಗೆ ಕಾರಣವಾಗುತ್ತದೆ. ಹಾಗೆ ಕೆಲಸ ಮಾಡುವ ಮರಾಠಿಗರು ನಮಗೂ ಮಹಾರಾಷ್ಟ್ರಕ್ಕೂ ಎಂದಿಗೂ ಸೇತುವೆಯಾಗಲಾರರು.
ಹೀಗೆ ಹೇಳುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸ್ಥಳೀಯತೆಯೆಂಬುದೇ ನಮ್ಮ ಪ್ರತಿಭೆ ಮತ್ತು ಅರ್ಹತೆಯಾಗಬಾರದು. ಉದ್ದಿಮೆಗಳು ನಿರ್ದಿಷ್ಟ ಪರಿಣಿತರನ್ನು ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಹೋಗದಂತೆ ಮಾಡಬೇಕಾಗಿದೆ. ಆದರೆ ಅದು ಸಾಕಾರವಾಗುವುದು ಹೇಗೆ? ಇಲ್ಲಿ ಸರಕಾರ, ಕೈಗಾರಿಕೋದ್ಯಮಿಗಳು, ಮತ್ತು ಜನರು ಸಮಾನ ಜವಾಬ್ದಾರರಾಗುತ್ತಾರೆ. ಉದಾಹರಣೆಗೆ, ಧಾರವಾಡದಲ್ಲಿ ನ್ಯಾನೊ ಸ್ಥಾಪನೆಯ ಜೊತೆಯಲ್ಲೇ ಟಾಟಾ ಸ್ಥಳೀಯ ವಿಶ್ವವಿದ್ಯಾಲಯಗಳಲ್ಲಿ ಸರಕಾರದ ಸಹಕಾರದೊಂದಿಗೆ ಸಂಶೋಧನಾ ಘಟಕಗಳನ್ನು ಪ್ರಾರಂಭಿಸಬೇಕು. Automotive manufacturing, Automotive design, Lean manufacturing ಇತ್ಯಾದಿ ಕೋರ್ಸುಗಳನ್ನು ಪ್ರಾರಂಭಿಸಬೇಕು. ಮತ್ತು ಈ ಕೋರ್ಸುಗಳ ಸಿಂಹಪಾಲು ರಾಜ್ಯದ ಜನತೆಗೇ ದಕ್ಕುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ, ವಿದ್ಯಾರ್ಥಿಗಳು ನಿರಂತರ ಮ್ಯಾನುಫಾಕ್ಚರಿಂಗ್ ಪರಿಸರದಲ್ಲಿ ಬೆಳೆಯುವುದರಿಂದ ಹೆಚ್ಚಿನ ಆವಿಷ್ಕಾರಗಳನ್ನು ನಿರೀಕ್ಷಿಸಬಹುದು. ಮೂಲತ: ನಮ್ಮಲ್ಲಿ ಅಪ್ಲೈಡ್ ಸೈನ್ಸ್ ನ ಕೊರತೆ ಇದೆ. “ಭಾರತೀಯರಲ್ಲಿ ತಂತ್ರಜ್ಞಾನವೆಂಬುದು ಇನ್ನೂ ಕೈ ಬೆರಳುಗಳಿಗೆ ರವಾನೆಯಾಗಿಲ್ಲ” ಎಂಬ ಹಿರಿಯ ಕೈಗಾರಿಕಾ ಬರಹಗಾರರೊಬ್ಬರ (ಅವರ ಹೆಸರು ಗುರುಚರಣ್ ದಾಸ್ ಇರಬೇಕು) ಮಾತು ಬಹಳ ಸತ್ಯವೆನ್ನಿಸುತ್ತದೆ.
ನಾನು ಬ್ರಿಟಿಷರ ನಾಡಿನಲ್ಲಿ ಕಾರು ತಯಾರಿಕೆಗೆ ಸಂಬಂಧಿಸಿದ ಸಂಸ್ಥೆಯೊಂದರಲ್ಲಿ ಡಿಸೈನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪರ್ಚೇಸ್ ವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ನನಗಿಂತ ಉತ್ತಮವಾಗಿ, ಸಮರ್ಥವಾಗಿ ಕಾರಿನ ವಿನ್ಯಾಸದ ಬಗ್ಗೆ, ಇತರೇ ಟೆಕ್ನಿಕ್ ಗಳ ಬಗ್ಗೆ ಮಾತನಾಡಬಲ್ಲ. ಇವರು ಕಳೆದ ಶತಮಾನದ ಆದಿಯಿಂದ ಕಾರು ಬಳಸುತ್ತಿರುವವರು ಎಂಬುದು ನಿಜವಿದ್ದರೂ ನನ್ನ(ಮ್ಮ) ಅಜ್ಞಾನಕ್ಕೆ ಅದು ಸಮರ್ಥೆನೆಯಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಇವರುಗಳ ಬದುಕಿನಲ್ಲಿ ಹೇಗೆ ಹಾಸು ಹೊಕ್ಕಾಗಿದೆ ಎಂಬುದಷ್ಟೇ ನನಗೆ ಮುಖ್ಯವಾಗಿ ಕಾಣುತ್ತಿರುವುದು. ಇಲ್ಲಿ ನನ್ನ ಮಿತ್ರನೊಬ್ಬನ ಅನುಭವವನ್ನು ದಾಖಲಿಸುವುದು ಉಚಿತವೆನಿಸುತ್ತದೆ. ಆತ ಬೆಂಗಳೂರಿನಲ್ಲಿ ಅಮೇರಿಕನ್ ಮೂಲದ ಕಾರು ತಯಾರಿಕಾ ಸಂಸ್ಥೆಯ ಡಿಸೈನ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾನೆ. ಒಮ್ಮೆ ಆತನನ್ನು ಅಮೆರಿಕಾದ ಕೇಂದ್ರ ಸಂಸ್ಥೆಗೆ ಚರ್ಚೆಯೊಂದಕ್ಕೆ ಆಹ್ವಾನಿಸಲಾಯಿತು. “ಕಳೆದ ವರ್ಷದಿಂದ ಈ ವರ್ಷಕ್ಕೆ ನಿಮ್ಮ ಕೆಲಸದಲ್ಲಿ ಏನು ಪ್ರಗತಿ ಸಾಧಿಸಿದ್ದೀರೆಂದು ಹೇಳಬಲ್ಲಿರಿ?” ಎಂದು ಹಿರಿಯ ಉದ್ಯೋಗಿಯೊಬ್ಬರು ಅನೌಪಚಾರಿಕವಾಗಿ ಈತನನ್ನು ಕೇಳಿದರು.
“ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅರ್ಥಪೂರ್ಣವಾದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ” ಎಂದ ಮಿತ್ರ.
ಸ್ವಲ್ಪ ವಿವರಿಸಿ ನಿಮ್ಮ ಮಾತನ್ನು ಎಂದರು ಅವರು.
“ನಮ್ಮ ಬೆಂಗಳೂರಿನ ವಿಭಾಗದಲ್ಲಿ ಕೆಲಸ ಮಾಡುವ ಒಟ್ಟೂ ಆರು ಸಾವಿರ ಉದ್ಯೋಗಿಗಳಲ್ಲಿ ಶೇಕಡಾ ಹತ್ತು ಜನರ ಬಳಿಯೂ ಕಾರು ಎಂಬ ಪದಾರ್ಥವಿಲ್ಲ. ಆದರೆ ದಿನ ನಿತ್ಯ ನಾವುಗಳು ಕಾರಿನ ವಿವಿಧ ಭಾಗಗಳ ಡಿಸೈನ್ ಮತ್ತು ಡೆವೆಲಪ್ ಮೆಂಟ್ ಕಾರ್ಯದಲ್ಲಿ ಮುಳುಗಿದ್ದೇವೆ. ಕಾರಿನ HVAC ಭಾಗದ ಡಿಸೈನ್ ಮಾಡುತ್ತಿರುವ ಉದ್ಯೋಗಿಯು ಜನ್ಮದಲ್ಲಿ ಆ ವಸ್ತುವನ್ನು ನೋಡಿರುವುದಿಲ್ಲ. ಕೇವಲ ಪುಸ್ತಕ ಜ್ಞಾನ ಮತ್ತು ಡಿಜಿಟಲ್ ಮಾಡೆಲ್ ಗಳಷ್ಟೇ ಆತನ ಆಧಾರ. ಕನಿಷ್ಟ ಪಕ್ಷ ಕಾರೊಂದನ್ನು ಅರ್ಧ ಸೀಳೊಂದನ್ನು (ಡಿಸೆಕ್ಷನ್) ನಮ್ಮಲ್ಲಿ ತಂದಿಟ್ಟರೆ ಅನುಕೂಲವಾಗುತ್ತದೆ. ಅದಿಲ್ಲದಿದ್ದರೆ ನಮ್ಮ ಕೆಲಸ ಕೇವಲ ಡಿಸೈನ್ ಪಡಿಚಾಕರಿಯಾಗುತ್ತದೆ. ಡಿಸೈನ್ ಎಂದು ಕರೆಸಿಕೊಳ್ಳುವುದಿಲ್ಲ”. ಎಂದು ವಿವರಿಸಿದ.
ಈ ಮೇಲಿನ ಹೇಳಿಕೆಗಳು ನಮ್ಮ ಅಕೆಡೆಮಿಕ್ ಶಿಕ್ಷಣದ ಸ್ವರೂಪದಲ್ಲಿ ಬದಲಾವಣೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ. ವಿದೇಶಿ ಕಂಪನಿಗಳು ಮೂಲ ಸಂಶೋಧನೆಯನ್ನು ತಮ್ಮಲ್ಲೇ ಇಟ್ಟುಕೊಂಡು ಅಗ್ಗದ ಮಾನವ ಸಂಪನ್ಮೂಲಗಳಾಗಿ ನಮ್ಮನ್ನು ಬಳಸಿಕೊಳ್ಳುತ್ತವೆ. ಟೊಯೊಟಾ ಸಂಸ್ಥೆ ತನ್ನ ಸಂಶೋಧನಾ ಘಟಕವನ್ನು ಜಪಾನಿನ ವಿಶ್ವವಿದ್ಯಾಲಯಗಳಲ್ಲಿ ತೆರೆಯುತ್ತದೆಯೇ ಹೊರತು ಭಾರತದಲ್ಲಲ್ಲ. ಭಾರತದಲ್ಲಿ ಇಂತಹ ಕೆಲಸಗಳು ಟಾಟಾ, ಬಜಾಜ್, ಮಹಿಂದ್ರಾ ದಂತಹ ಸಂಸ್ಥೆಗಳಿಂದ ಆಗಬೇಕಾಗಿದೆ. ಪ್ರಸ್ತುತದಲ್ಲಿ ನಾವು ತಂತ್ರಜ್ಞಾನದ ಬಳಕೆದಾರರಷ್ಟೇ ಆಗಿದ್ದೇವೆ. ಆದರೆ ಸೃಷ್ಟಿಕಾರರಾಗಿಲ್ಲ. ಹಾಗಾಗುವುದು ಸುಲಭದ ಮಾತಲ್ಲವೆಂಬುದು ಎಷ್ಟು ಸತ್ಯವೋ, ನಮ್ಮನ್ನು ಆಳುವವರ ಮತ್ತು ಉದ್ದಿಮೆದಾರರ ದೂರದೃಷ್ಟಿಯ ಕೊರತೆಯೂ ಇದಕ್ಕೆ ಕಾರಣ ಎಂಬುದು ಅಷ್ಟೇ ಸತ್ಯ.
ನ್ಯಾನೋ ಧಾರವಾಡಕ್ಕೆ ಬಂದೀತೆಂಬ ಆಸೆಯೊಂದಿಗೆ.

-ಚಿನ್ಮಯ.

Thursday, July 3, 2008

ಹಿಂದೊಮ್ಮೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದ್ದ ನನ್ನದೊಂದು ಕತೆ.

ನಿರುದ್ಯೋಗಪರ್ವ

ಅಂಗ್ರೇಜಿಯಲ್ಲಿ ಬಡಬಡಿಸುವುದೊಂದು ಬಿಟ್ಟು ಜಗನ್ನಾಥನಿಗೆ ಇನ್ಯಾವ ಮಹಾಜ್ಞಾನವೂ ಇಲ್ಲ. ಇಂಜನಿಯರಿಂಗ್ ಬರೋಬ್ಬರಿ ನಾಲ್ಕೂ ವರ್ಷ ನನ್ನದೇ ನಕಲು ಮಾಡಿ ಹಾಗೂ ಹೀಗೂ ಪಾರಾದವನು. ಕಾಲ್ಸೆಂಟರಿನಲ್ಲಿ ಈತನ ’ತಂತ್ರಜ್ಞಾನ’ದ ಅಗತ್ಯ ಇಲ್ಲದ ಕಾರಣ ಅಂಗ್ರೇಜಿಯೇ ಕಾಪಾಡುತ್ತಿದೆ.
ಭಾಷೆಗೂ ಜ್ಞಾನಕ್ಕೂ ಸಂಬಂಧವಿಲ್ಲವೆಂಬುದು ಹಳೆಸತ್ಯವೇ ಆಗಿದ್ದರೂ, ಜಾಗತೀಕರಣವೆಂಬುದು ಜ್ಞಾನಕ್ಕೂ (ಮಾಡುವ) ಕೆಲಸಕ್ಕೂ ಸಂಬಂಧವಿಲ್ಲವೆಂಬ ಹೊಸ ವಿಚಾರವನ್ನು ಹುಟ್ಟುಹಾಕಿದೆ. ಜಗ್ಗ ಅಪ್ಪನ ಒತ್ತಾಯಕ್ಕೆ ಇಂಜನಿಯರಿಂಗ್ ಸೇರಿದವನು. ರೊಕ್ಕಸ್ತ ಅಪ್ಪನ ಮಗ. ದುಬಾರಿ ಬಟ್ಟೆಗಳನ್ನು ಧರಿಸುತ್ತಾನೆ. ಸಾಕಷ್ಟು ಹುಡುಗಿಯರ ಪರಿಚಯವಿದೆ. ನನ್ನಂತಹ ಕುಗ್ರಾಮದ ಹಿನ್ನೆಲೆಯಿಂದ ಬಂದವನಿಗೆ ಅದೊಂದು ದೊಡ್ಡ ಸಂಗತಿಯೇ ಹೌದು. "ಇವಳೊಂದಿಗೆ ನಾನು ಎಲ್ಲವನ್ನೂ ಮುಗಿಸಿದ್ದೇನೆ" ಎನ್ನುತ್ತಾನೆ, ಹುಡುಗಿ ಆಚೆ ಸರಿದ ಮೇಲೆ. ರೈಲು ಬಿಡುತ್ತಿರುವುದು ಖಚಿತವಾಗಿದ್ದರೂ ನಿಜವಿರಬಹುದೇ ಎಂಬ ಆತಂಕ ಹುಟ್ಟಿಬಿಡುತ್ತದೆ. ಸುಳ್ಳಿರಲಿ ಎಂದೇ ಮನಸ್ಸು ಆಶಿಸುತ್ತದೆ. ಅಂದರೆ ಹುಡುಗಿಯರ ಬಗ್ಗೆ ವಿಪರೀತ ಕಾಳಜಿ ಎಂದರ್ಥವೇನಲ್ಲ. ಅದೊಂದು ಥರದ ಸಾತ್ವಿಕ ಕೊರಗು.
ನನಗೂ ಜಗ್ಗನಿಗೂ ಯಾವ ವಿಚಾರದಲ್ಲಿಯೂ ಸಾಮ್ಯತೆ ಇಲ್ಲ. ಈ ಸ್ನೇಹಕ್ಕೆ ಕಾರಣ ಕೇವಲ ಸುದೀರ್ಘ ನಕಲು ಇತಿಹಾಸ. ನನ್ನಂತಹ ಪುಳಿಚಾರು ಮನುಷ್ಯನನ್ನು ಯಾವ ಪುರುಷಾರ್ಥಕ್ಕಾಗಿ ದೋಸ್ತಿ ಮಾಡುತ್ತೀಯೆಂದು ಆತನ ಸ್ನೇಹಿತ ವರ್ಗ ಗೇಲಿ ಮಾಡುವುದು ನನಗೆ ತಿಳಿಯದ ವಿಚಾರವೇನಲ್ಲ. ಅವರ ತಕರಾರೆಂದರೆ ಕುಡಿಯಲು ಒಲ್ಲದ, ಸೇದಲೂ ಸಲ್ಲದ ನಾನೊಬ್ಬ ಪ್ರಯೋಜನಕ್ಕೆ ಬಾರದ ಹುಳು. ಜಗ್ಗ ನನಗೆ ಸಾಕಷ್ಟು ಸಲ ಬುದ್ಧಿವಾದ(?) ಹೇಳಿದ್ದಾನೆ. "matrimonial websites ಎಂದಾದರೂ ನೋಡಿದ್ದೀಯೇನು? ಹುಡುಗಿಯರೂ ತಮ್ಮ ಭಾವೀ ಪತಿಯ ಬಗ್ಗೆ, 'drinking and smoking occasionally okay' ಎಂದು ಬರೆದಿರುತ್ತಾರೆ. ಇನ್ನು ನಿಂದೇನು?" ಎನ್ನುತ್ತಾನೆ. ಆದರೆ ಹೇಳುತ್ತಿರುವ ಈತನಿಗೂ ಕೇಳುತ್ತಿರುವ ನನಗೂ ಖಚಿತವಾಗಿ ಗೊತ್ತು. ಕುಡಿಯುವವರಿಗೆ ಒಕೇಶನ್-ವೆಕೇಶನ್ಗಳ ಜರೂರತ್ತಿಲ್ಲವೆಂಬುದು. ಪಾಸಾದ್ದಕ್ಕೆ, ಫೇಲಾದ್ದಕ್ಕೆ, ಹುಡುಗಿ ಕೈತಪ್ಪಿದ್ದಕ್ಕೆ, ಕೆಲಸ ಸಿಕ್ಕಿದ್ದಕ್ಕೆ, ಬಾಸ್ ಬೈಗುಳ ತಿಂದಿದ್ದಕ್ಕೆ, ಯಾವುದೂ ಇಲ್ಲದಿದ್ದರೆ ಕೊಂಚ ಮೋಡವಾಗಿ ಮಳೆ ಹನಿದರೆ ........... ಹೀಗೆ ಒಕೇಶನ್ಗಳಿಗೆ ಬರಗಾಲವೇ? ಗೊಂದಲಕ್ಕೀಡಾಗುತ್ತೇನೆ. ಕುಡಿಯುವುದು ಪಾಪವೋ ಅಥವಾ ಕುಡಿಯದಿರುವುದು ಮೌಲ್ಯವೇ ಎಂಬ ಗಹನವಾದ ಚರ್ಚೆಯೇ ಮನಸ್ಸಿನಲ್ಲಿ ಏರ್ಪಡುತ್ತದೆ. ಅದೇನೆ ಇರಲಿ, ನನಗೆ ಅರ್ಥವಾಗದೇ ಇರುವುದು ಒಂದೇ, ಈ ಕುಡುಕ ಪ್ರಾಣಿಗಳು ಅದೆಷ್ಟು ಬೇಗ ಆತ್ಮೀಯರಾಗಿಬಿಡುತ್ತಾರೆ. ಮಧ್ಯಾನ್ನದ ಊಟಕ್ಕೆ ಸಾಲ ಕೇಳಿದರೆ, ಕೆಳತುಟಿ ಕೆಳಕ್ಕೆ ಮಡಚಿ ತಲೆ ಅಲ್ಲಾಡಿಸುವ ಮನುಷ್ಯರು ಸ್ವಂತ ದುಡ್ಡಿನಲ್ಲಿ ಸ್ನೇಹಿತನಿಗೆ ಹೊಟ್ಟೆ ತುಂಬಾ ಶರಾಬು ಕುಡಿಸಿ "ಜೊ ಮಜಾ ಹೈ ಪಿಲಾನೆ ಮೆ, ಓ ಪೀನೆ ಮೆ ನಹಿ’ ಎಂದು ಗಾಲಿಬ್ನನ್ನು ಉದುರಿಸಿ ಬಾತ್ರೂಮ್ ಕಡೆ ಓಡುತ್ತಾರೆ. ವಾಂತಿಗೂ ಉಚ್ಚೆಗೂ ನಾ ಮೊದಲು ತಾ ಮೊದಲು ಎಂಬ ಸ್ಪರ್ಧೆ ಅಲ್ಲಿ.
ಜಗ್ಗ ಕಾಲ್ಸೆಂಟರಿನಲ್ಲಿ ಕೆಲಸ ಮಾಡುವುದಾದರೆ ಹೇಗಾದರೂ ಸಂದರ್ಶನಕ್ಕೆ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾನೆ. ಇಂಜನಿಯರಿಂಗ್ ಓದಿ, ಒಳ್ಳೆಯ ಅಂಕವನ್ನು ಪಡೆದೂ ಇನ್ನೇನೊ ಮಾಡಲು ಮನಸ್ಸು ಒಪ್ಪುವುದಿಲ್ಲ. ಮನೆಯಿಂದ ವಿಪರೀತ ಒತ್ತಡ ಬರುತ್ತಿದೆ. ಯಾವುದೂ ಇಲ್ಲದಿದ್ದರೆ ಮನೆಗೆ ಬಂದುಬಿಡಲಿ, ಇಲ್ಲೇ ಒಂದು ಬೀಡಾ ಅಂಗಡಿಯಾದರೂ ಮಾಡಿಕೊಡುತ್ತೇನೆ ಎಂದು ಅಪ್ಪಯ್ಯ ಸುದ್ದಿ ಮುಟ್ಟಿಸಿಯಾಗಿದೆ. ಅಪ್ಪಯ್ಯನ ಕಷ್ಟ ಅರ್ಥಮಾಡಿಕೊಳ್ಳಬಲ್ಲೆ. ಪೌರೋಹಿತ್ಯವೂ ಅಷ್ಟೊಂದು ಆದಾಯ ತರುತ್ತಿಲ್ಲ. ಮೊದಲಿನ ಹಾಗೆ ದೂರದ ಊರುಗಳಿಗೆ ಒಡಾಡಲು ತ್ರಾಣವಿಲ್ಲ ಆತನಿಗೆ. ಇಳಿವಯಸ್ಸಿನಲ್ಲಿ ಗಂಟೆಗಟ್ಟಲೇ ಒಂದೆಡೆ ಕುಳಿತು ಪೂಜಾ ವಿಧಾನಗಳನ್ನು ಪೂರೈಸುವುದೂ ಆತನಿಂದ ಈಗೀಗ ಕಷ್ಟವಾಗುತ್ತಿದೆ. ಇತ್ತೀಚೆಗೆ ಪಕ್ಕದ ಊರುಗಳಲ್ಲಿ ಕೆಲವು ಮರಿಪುರೋಹಿತರುಗಳು ಉದಯವಾಗಿದ್ದಾರೆ. ಮದುವೆ, ಮುಂಜಿ, ಶ್ರಾದ್ಧಗಳನ್ನು ಅವರೇ ಹುಡಿಹಾರಿಸುತ್ತಿದ್ದಾರೆ. ನನ್ನದೇ ಸಹಪಾಠಿಗಳಾಗಿದ್ದವರು ಹೈಸ್ಕೂಲು ದಿನಗಳಲ್ಲಿ. ಕೆಲಸ ಪೌರೋಹಿತ್ಯವೇ ಆಗಿದ್ದರೂ ಇಂದಿನ ಹೈಟೆಕ್ ದಿನಗಳಿಗೆ ಅವರೂ ಸ್ಪಂದಿಸದೇ ಇಲ್ಲ. ದ್ವಿಚಕ್ರ ವಾಹನಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಇನ್ಸ್ಟಂಟ್ ಮಂತ್ರಗಳಿಂದ ಕಾರ್ಯಕ್ರಮ ಮುಗಿಸಿ, ದಕ್ಷಿಣೆ ಪಡೆದು, ಊಟ ಮುಗಿಸಿ ಅರ್ಧಗಂಟೆಯ ವಿಶ್ರಾಂತಿ ನಂತರ ಮನೆಗೆ ವಾಪಸ್! ಅಪ್ಪಯ್ಯನ ಪಾಂಗಿತವಾದ ಉದ್ದನೆಯ ಪೂಜಾಪ್ರಕ್ರಿಯೆಗಳು ಇತ್ತೀಚಿನ ಜನಕ್ಕೆ ಅಷ್ಟೊಂದು ಒಗ್ಗುತ್ತಿಲ್ಲ. ಜನಕ್ಕೆ ಅವಸರ. ಸೊಸೈಟಿಯ ಸಾಲ, ಎಮ್ಮೆ ಸಾಲ, ಅದೂ ಇದೂ ಚಿಲ್ಲರೆ ಕೈಗಡಗಳ ಮಧ್ಯೆ ನನ್ನನ್ನು ಓದಿಸುವುದರಲ್ಲಿ ಅಪ್ಪಯ್ಯ ಸಾಕಷ್ಟು ಹಣ್ಣಾಗಿದ್ದಾನೆ. ಸೊಸೈಟಿ ಸಕ್ರೆಟರಿಯ ಮುಂದೆ ಸಾಲಕಟ್ಟದ ಕಾರಣಕ್ಕೆ ಬೈಸಿಕೊಂಡು ನಿಂತ ಆತನ ಅಸಹಾಯಕ ಮುಖವನ್ನು ನೆನೆಸಿಕೊಂಡರೆ ಯಾವ ಕೆಲಸವಾದರೆ ಏನು ಆದಷ್ಟು ಬೇಗ ಒಂದು ಕೆಲಸ ಸಿಕ್ಕಿದರೆ ಸಾಕೆನ್ನಿಸಿಬಿಡುತ್ತದೆ. ಇಂಜನಿಯರಿಂಗ್ ಮುಗಿದು ಪೂರ್ತಿ ಎಂಟು ತಿಂಗಳುಗಳೇ ಕಳೆದುಬಿಟ್ಟಿವೆ.
ಬಾಲ್ಯಸ್ನೇಹಿತ ನಾಗರಾಜನ ಆಶ್ರಯವೊಂದು ಸಿಗದಿದ್ದರೆ ಇರಲೊಂದು ಸೂರೂ ಇರುತ್ತಿರಲಿಲ್ಲ. ‘ಕೆಲಸ ಸಿಕ್ಕುವವರೆಗೆ’ ಎಂಬ ಬಾಯಿ ಕರಾರಿನ ಮೇಲೆ ಸೇರಿಕೊಂಡ ಜೀವಿ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಆತನಿಗೆ. ಚಾಮರಾಜಪೇಟೆಯ ಒಳಗಲ್ಲಿಯೊಂದರ ಚಿಕ್ಕ ಕೋಣೆ ಇದು. ಪಕ್ಕದ ಕೋಣೆಗಳೂ ಇದೇ ತರಹ ಬೆಂಕಿಪೊಟ್ಟಣದ ಗಾತ್ರದವು. ಕೆಳಗಡೆ ಓನರತಿ ಸಾವಿತ್ರಮ್ಮನ ವಾಸಸ್ಥಾನ. ಈ ಕೋಣೆಗಳ ಬಾಡಿಗೆ ಬಿಟ್ಟರೆ ಬೇರೇನೂ ಆದಾಯವಿದ್ದಂತಿಲ್ಲ. ಕಂಪೌಂಡಿನ ಗೋಡೆಯಿಂದ ಬರೋಬ್ಬರಿ ಒಂದೇ ನರಮನುಷ್ಯನಿಗಾಗುವಷ್ಟಿರುವ ಅವಕಾಶದಲ್ಲಿ ರೂಮು ತಲುಪಿಕೊಳ್ಳುವುದೇ ಒಂದು ಸಾಹಸ. ಎದುರಿಗಿನ ಕಟ್ಟಡದ ಎತ್ತರದ ಗೋಡೆ ಈ ಕೋಣೆಗಳ ಗಾಳಿ, ಬೆಳಕನ್ನು ಕಬಳಿಸಿದೆ. ಬೆಳಿಗ್ಗೆ ಏಳಕ್ಕೆ ನಾಗರಾಜ ಹೊರಟರೆ ರಾತ್ರಿ ಒಂಭತ್ತರವರೆಗೆ ನಾನು ಒಬ್ಬಂಟಿ. ಪಕ್ಕದ ಕೋಣೆಗಳಲ್ಲಿ ಅರ್ಥವಾಗದ ಭಾಷೆ ಮಾತನಾಡುವ ಹುಡುಗರಿದ್ದಾರೆ. ಅಷ್ಟಾಗಿ ಪರಿಚಯವಿಲ್ಲ. ಎಲ್ಲೋ ಕೆಲಸ ಮಾಡುತ್ತಿರಬೇಕು ಅಥವಾ ಓದುತ್ತಿರಬಹುದು. ಬೆಳಿಗ್ಗೆ ಹೋದರೆ ರಾತ್ರಿಯೇ ವಾಪಸ್ಸಾಗುವುದು. ಉದ್ದುದ್ದ ಸೈಡ್ಲಾಕ್ ಬಿಟ್ಟಿದ್ದಾರೆ. ಬಂದ ತಕ್ಷಣ ವಿಪರೀತ ವಾಲ್ಯೂಮ್ನಲ್ಲಿ ರಾಕ್ ಸಂಗೀತ ಹಾಕಿಕೊಂಡು ತಾವೂ ಅರಚುತ್ತಾ ಬಳಲಿ ಬೆಂಡಾಗುತ್ತಾರೆ. ಅವರುಗಳ ಆರ್ಭಟದ ಮುಂದೆ ನನ್ನ ಸಣ್ಣ ಸ್ಪೀಕರಿನಲ್ಲಿ ಹಾಡುವ ಗುಲಾಮ್ ಅಲಿ ಗಂಟಲು ಸಾಲದೆ ಸುಮ್ಮನಾಗಬೇಕಾಗುತ್ತದೆ.
ಎಲ್ಲರೂ ಕೆಲಸಕ್ಕೆ ತೆರಳಿದ ಮೇಲೆ ಡೆಕ್ಕನ್ ಹೆರಾಲ್ಡ್, ಟೈಮ್ಸ್ ಕ್ಲಾಸಿಫೈಡ್ಸ್ ‘ಅಧ್ಯಯನ’ದ ನಂತರ ಇನ್ನೇನಿದೆ? ಖರ್ಚು ಮಾಡಲು ಹಣವಂತೂ ಇಲ್ಲ. ಯಾವುದಾದರೂ ಸಂದರ್ಶನಕ್ಕೆ ಕರೆ ಬಂದಿದ್ದರೆ ಅವತ್ತಿನ ಕಾಲಹರಣ ಅದಕ್ಕಾಯಿತು. ಅರೆಗತ್ತಲ ಕೋಣೆಯಲ್ಲಿ ಮಾಸಲು ಚಾಪೆಯ ಮೇಲೆ ಹೊರಳಾಟ ನನ್ನ ನಿತ್ಯದ ದಿನಚರಿ. ವಿಪರೀತ ಸೆಖೆಯಾದರೆ ಸೀಲಿಂಗ್ ಫ್ಯಾನಿನ ಸಶಬ್ಧ ಸೇವೆ. ನನಗಿಂತ ಕಡಿಮೆ ಅಂಕಗಳಿಸಿದ್ದ ನನ್ನ ಜೊತೆಯ ಹುಡುಗರೆಲ್ಲ ಕೆಲಸಕ್ಕೆ ತಗುಲಿಕೊಂಡಾಯಿತು. ನನ್ನ ಒಳ್ಳೆಯ ಅಂಕ ನನ್ನ ಮೇಲೆ ಅನುಕಂಪವನ್ನಷ್ಟೇ ಗಿಟ್ಟಿಸಲು ಸಫಲವಾಗಿದೆ. ಹೊರಳಾಡಿ ಬೇಸರವಾದರೆ ಬಾಗಿಲ ಬಳಿ ತುಸು ಹೊತ್ತು ನಿಂತುಕೊಳ್ಳುತ್ತೇನೆ. ಎಲ್ಲವೂ ಖಾಲಿ ಖಾಲಿ. ಎಲ್ಲ ಕೋಣೆಗಳೂ ಬೀಗ ಜಡಿದುಕೊಂಡು ರಾತ್ರಿ ವೇಳೆ ಡಿಪೋದಲ್ಲಿ ನಿಂತ ನಿಶ್ಚಲ ಬಸ್ಸುಗಳಂತೆ ತೋರುತ್ತವೆ. ನನ್ನೊಬ್ಬನನ್ನು ಬಿಟ್ಟು ಈ ಜಗತ್ತಿನಲ್ಲಿ ಮಿಕ್ಕೆಲ್ಲರಿಗೂ ಮಾಡಲು ಕೆಲಸವೊಂದಿದೆ ಎಂದೆನ್ನಿಸುತ್ತದೆ. ಇನ್ನೂ ಬೇಸರವೆನಿಸಿದರೆ ತುಸು ಹೊತ್ತು ಟೆರೇಸಿನ ಮೇಲೆ ಹೊಗಿ ನಿಂತುಕೊಳ್ಳುತ್ತೇನೆ. ಪೋಲಿ ಪುಸ್ತಕಗಳಲ್ಲಿ ಓದಿದ ಅತೃಪ್ತ ಗೃಹಿಣಿಯರು ಕಂಡುಬರುತ್ತಾರೋ ಎಂಬ ಕುತೂಹಲ ಹುಟ್ಟುತ್ತದೆ. ಮನುಷ್ಯ ನಿರುದ್ಯೋಗಿಯಾದರೂ ಮನಸ್ಸು ನಿರುದ್ಯೋಗಿಯಲ್ಲವಲ್ಲ? ಪಾರ್ಕಿಗಾದರೂ ಹೋಗಿ ಕುಳಿತುಕೊಳ್ಳೋಣವೆಂದರೆ ಮಧ್ಯಾಹ್ನದ ವೇಳೆ ಅಲ್ಲಿ ಕಲ್ಲು ಬೆಂಚುಗಳ ಮೇಲೆ ಒಂದಿಷ್ಟು ವೃದ್ಧರು ಕುಳಿತಿರುತ್ತಾರೆ-ನಿವೃತ್ತ ಮಂದಿ. ಶಾಂತಿ ಪರ್ವವೋ, ರಾಮನಿರ್ಯಾಣವೋ ಆಳವಾದ ಚರ್ಚೆ ನಡೆದಿರುತ್ತದೆ. ನನಗೆ ತಾರುಣ್ಯದಲ್ಲಿಯೇ ವಿಪರೀತ ವಯಸ್ಸಾದ ಅನುಭವವಾಗಿ ಎದ್ದು ಹೊರಡುತ್ತೇನೆ.
ಇಂಜನಿಯರಿಂಗ್ ಓದುವ ಕಾಲ ಎಷ್ಟು ಸೊಗಸಾಗಿತ್ತು. ಅಪೂರ್ವವಾದದ್ದೇನೋ ಮಾಡುತ್ತಿದ್ದೇನೆಂಬ ಹೆಮ್ಮೆ ಇತ್ತು. ರಜೆಯಲ್ಲಿ ಊರಿಗೆ ಹೋದರೆ ಜನರ ಉಪಚಾರ, ಆದರ ಬಹಳ ಖುಷಿಕೊಡುತ್ತಿತ್ತು. ಈಗ ಊರಿಗೆ ಹೋಗುವುದೇ ಕಷ್ಟವಾಗಿದೆ “ನಿಮ್ಮನೆ ಮಾಣಿ ಫಾರಿನ್ನಿಗೆ ಯಾವಾಗ ಹೋಗ್ತಾ?” ಎಂಬ ಪ್ರಶ್ನೆ ಅಪ್ಪಯ್ಯನನ್ನು ಹಲವು ಸಲ ಮುಜುಗರಕ್ಕೆ ಸಿಲುಕಿಸಿದೆ. ಈ ಎಂಟು ತಿಂಗಳುಗಳಲ್ಲಿ ಅದೆಷ್ಟು ಕಂಪನಿಗಳಿಗೆ ಅಲೆದಿದ್ದೇನೆ. ಇನ್ನೊಂದು ನಾಲ್ಕು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆಯೆಂದು ಮೆಜೆಸ್ಟಿಕ್ನಲ್ಲಿ ಬೀದಿ ಬದಿ ನಿಂತು ಭವಿಷ್ಯ ನುಡಿಯುವ ಕಂಪ್ಯೂಟರ್ ಉಲಿದಾಗಿದೆ. ''we will get back to you''ಎಂದು ಕಳುಹಿಸಿದ ಯಾರೂ ಇವತ್ತಿನವರೆಗೆ ಉತ್ತರ ನೀಡಿಲ್ಲ. ಕೊಂಚ ವಯಸ್ಸು ಮೀರಿದ ಸುಂದರ ಹುಡುಗಿಗೆ ಇನ್ನೂ ಮದುವೆಯಾಗದಿರುವುದಕ್ಕೆ ಕಾರಣ ಹುಡುಕುವಂತೆ ಜನ ನನಗಿನ್ನೂ ಕೆಲಸ ಸಿಕ್ಕಿಲ್ಲದಿರುವುದಕ್ಕೆ ನನ್ನಲ್ಲೇನೋ ಐಬಿರಬೇಕೆಂಬ ಗುಮಾನಿಗೆ ಬಿದ್ದಿದ್ದಾರೆ. ಒಂದೆರಡು ಪ್ರತಿಷ್ಠಿತ ಕಂಪನಿಗಳಿಗೆ ಲಿಖಿತ ಪರೀಕ್ಷೆ ಬರೆದೆ. ಸಾವಿರಾರು ಜನರ ನಡುವೆ ನನ್ನನ್ನೇ ನಾನು ಕಳೆದುಕೊಂಡ ಅನುಭವ. ಯಾವುದೋ ಬಟ್ಟೆ ಅಂಗಡಿಯ ‘ಒಮ್ಮೆ ಭೇಟಿ ಕೊಡಿ’ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಅಂಕಪಟ್ಟಿ, ಇನ್ನಿತರ ಸರ್ಟಿಫಿಕೇಟ್ಗಳನ್ನು ಇಟ್ಟುಕೊಂಡು ಪ್ಯಾಲಿಯಂತೆ ನಿಂತ ನನ್ನ ಬಗ್ಗೆ ನನಗೇ ಕನಿಕರವೆನ್ನಿಸಿತು. ಇಂಗ್ಲೆಂಡಿನಿಂದ ಈಗಷ್ಟೆ ಉದುರಿಬಿದ್ದಂತೆ ತೋರುವ ಮಿನಿಸ್ಕರ್ಟಿನ ಹುಡುಗಿಯರು ಕೆಲಸಕ್ಕಾಗಿ ಬಂದವರೋ ಅಥವಾ ಸಂದರ್ಶನ ಮಾಡುವವರೋ ಅರ್ಥವಾಗದೇ ಗೊಂದಲಕ್ಕೊಳಗಾಗಿದ್ದೇನೆ. ಎಲ್ಲರೂ ನನಗಿಂತ ಬುದ್ಧಿವಂತರಂತೆ ತೋರುತ್ತಾರೆ ಅಥವಾ ತೋರಿಸುತ್ತಾರೆ. ಪುಸ್ತಕ ಜೀವಿಗಳಂತೆ ಕಾಣುವ ಸೋಡಾಗ್ಲಾಸಿನ ಹುಡುಗರು ನನ್ನ ನೌಕರಿ ಕದಿಯಲೆಂದೇ ಬಂದವರಂತೆ ಕಾಣುತ್ತಾರೆ. ಲಿಖಿತ ಪರೀಕ್ಷೆ ಪಾಸಾದರೂ ಮೌಖಿಕ ಪರೀಕ್ಷೆಯಲ್ಲಿ ತಡವರಿಸಿದೆ. ಜೋಲುಮೋರೆ ಹೊತ್ತು ಪ್ಲಾಸ್ಟಿಕ್ ಬ್ಯಾಗನ್ನು ಎದೆಗೆ ಅವುಚಿ ಹಿಡಿದು ಸಿಟಿ ಬಸ್ಸಿನಲ್ಲಿ ಜೋತಾಡುವಾಗ ಕಣ್ಣು ಮಂಜಾದವು.
- - - - - - - - - - - - - - - - - - - - - - -
ಇಷ್ಟು ದೊಡ್ಡ ಕಂಪನಿಯೊಂದರಲ್ಲಿ ಕೆಲಸಮಾಡಲಿದ್ದೇನೆಂಬ ಕಲ್ಪನೆಯೇ ಇರಲಿಲ್ಲ. ಬೇರೆ ಕ್ಷೇತ್ರಗಳಲ್ಲಿ ೨೦ ವರ್ಷ ಅನುಭವವುಳ್ಳವರಿಗೂ ನನ್ನ ವೇತನ ಸಿಗಲಿಕ್ಕಿಲ್ಲ. ಇದೇ ಸಾಫ್ಟ್ವೇರ್ ಮಹಾತ್ಮೆ. ಜಾಗತೀಕರಣದ ಪರಿಣಾಮ. ಇಲ್ಲಿ ಒಂದೇ ಕ್ಷೇತ್ರದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ ‘ಮಾಗಿ’ದ ಜನ ಸಿಗುವುದು ಕಷ್ಟ. ದಿನಕ್ಕೊಂದು ಮಾಹಿತಿ-ತಂತ್ರಜ್ಞಾನ. ಈ ಉದ್ಯಮದ ನೌಕರರೆಲ್ಲರೂ ಕೊಳ್ಳುವ ಶಕ್ತಿ ಉಳ್ಳವರು.
ಹಿಂದೆ ನೌಕರಸ್ಥರು ಮನೆಕಟ್ಟುವ ಯೋಚನೆ, ಯೋಜನೆ ಮಾಡುವ ಹೊತ್ತಿಗೆ ತಲೆಕೂದಲು ಬೆಳ್ಳಗಾಗಿರುತ್ತಿತ್ತು. ಈಗ ಹಾಗಿಲ್ಲ, ಸಾಫ್ಟ್ವೇರ್ ಉದ್ಯೋಗಿಗೆ ಮೂವತ್ತರ ವೇಳೆಗೆ ಕೈಲೊಂದು ಸೈಟು, ಓಡಾಡಲೊಂದು ಕಾರು ಬಂದಿರುತ್ತದೆ. ಕೂದಲು ಮೊದಲೇ ಬೆಳ್ಳಗಾಗಿರುತ್ತದೆಂಬುದು ಬೇರೆಯದೇ ಸತ್ಯ. ಧುತ್ತೆಂದು ಹುಟ್ಟಿಕೊಂಡ ಈ ಉದ್ಯಮ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಘನತೆಯೇ ಇಲ್ಲವೆಂಬಂತೆ ಮಾಡಿಬಿಟ್ಟಿತಲ್ಲ. ಎಷ್ಟೋ ಸಲ ಹಾಗೆನ್ನಿಸಿದೆ. ಡಾಲರ್ನಿಂದ ವಿನಿಮಯವಾದ ಹಣ ನಮ್ಮ ಸಾಮಾಜಿಕ ವ್ಯವಸ್ಥೆಯನ್ನೇ ಕಲೆಸಿಬಿಟ್ಟಿದೆ. ಮನೆ ಬಾಡಿಗೆಗೆ ಕೊಡುವವನಿಂದ ಹಿಡಿದು ಹೆಣ್ಣು ಕೊಡುವವನವರೆಗೂ ಸಾಫ್ಟ್ವೇರ್ ಉದ್ಯೋಗಿಗೆ ಮೊದಲ ಆದ್ಯತೆ. ಕೂಲಂಕುಶವಾಗಿ ನೋಡಹೋದರೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಭಾರತೀಯ ಕಂಪನಿಗಳಲ್ಲಿ ಬಹುಪಾಲು ಕಂಪನಿಗಳು ಅಮೇರಿಕವೆಂಬ ಹಿರಿಯಣ್ಣನ ಉತ್ಪನ್ನಗಳಿಗೆ ಪಡಿಚಾಕರಿ ಮಾಡಿಕೊಡುವ ಕೆಲಸದಲ್ಲಿ ಮುಳುಗಿವೆ. ಇವಕ್ಕೆ ‘ಸರ್ವೀಸ್ ಇಂಡಸ್ಟ್ರೀಸ್’ ಎಂದು ಹೆಸರು. ನಿಮಗಿಷ್ಟವಾದ ಒಳಕ್ಷೇತ್ರ (ಡೊಮೈನ್) ವೊಂದರಲ್ಲಿ ತಜ್ಞರಾಗುವುದಕ್ಕೆ ಇಲ್ಲಿ ಅವಕಾಶ ಕಡಿಮೆ. ಕಂಪನಿಯ ಸೇವೆ ಯಾವ ಉತ್ಪನ್ನವೋ ಅದರ ಮೇಲೆ ಕೆಲಸ. ಅದು ಮುಗಿದರೆ ಇನ್ನೊಂದು. ಕಾಲೇಜು ಪಾಸಾಗಿ ಸೇರಿದ ತಂತ್ರಜ್ಞಾನಿಗಳು ಮೊದಲಿನ ಒಂದೆರಡು ವರ್ಷಗಳಷ್ಟೇ ನೇರವಾಗಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಾರೆ ಅಥವಾ ಮಾಡಬೇಕಾಗುತ್ತದೆ. ಒಂದು ಅಥವಾ ಎರಡು ಭಡ್ತಿ ಪಡೆದುಬಿಟ್ಟರೆಂದರೆ ಮುಗಿಯಿತು. ಅವರಿಗೂ ತಂತ್ರಜ್ಞಾನಕ್ಕೂ ಅಷ್ಟಕ್ಕಷ್ಟೆ. ಅವರದೇನಿದ್ದರೂ ಜನ ನಿರ್ವಹಣೆ (ಪೀಪಲ್ ಮ್ಯಾನೇಜ್ಮೆಂಟ್). ಲೆಕ್ಕದ ಪಟ್ಟಿ ಇಟ್ಟುಕೊಂಡು ಎಷ್ಟು ಜನರಿಂದ ಎಷ್ಟು ತಾಸು ಕೆಲಸವಾಯಿತು ಎಂಬುದಷ್ಟೇ ಅವರ ತಲೆಬಿಸಿ. ಅವರು ಅಂಕಿ ಉಪಾಸಕರು. ಎಲ್ಲವೂ ಡಾಲರಿನ ಜಾದೂ. ಕಂಪನಿಗಳ ತ್ರೈಮಾಸಿಕ ಲಾಭಾಂಶ ಹೆಚ್ಚಾದಂತೆ ನಗರದ ಪಬ್ಬು, ಬಾರುಗಳ ಆದಾಯವೂ ಹೆಚ್ಚಾಗುತ್ತಿರುವುದು ಸುಳ್ಳಲ್ಲ. ಡಾಲರಿನ ಬೆಲೆ ಒಂದು ರೂಪಾಯಿ ಆದರೆ ಮಾತ್ರ ಈ ವ್ಯವಹಾರಗಳೆಲ್ಲ ಕಷ್ಟಕಷ್ಟ.
ಹಣವೆಲ್ಲಿದೆಯೋ ಜನ ಅಲ್ಲಿ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೋ, ವೈಮಾನಿಕ ಪ್ರಯೋಗಾಲಯಗಳಲ್ಲೋ ಸೇರಿ ಅದ್ಭುತವಾದದ್ದನ್ನು ಸಾಧಿಸಬೇಕೆಂದು ಕನಸು ಕಂಡ ಜನರೂ ಭಾರೀ ವೇತನಕ್ಕೆ ಮನಸೋತು ಸಾಫ್ಟ್ವೇರ್ ಉದ್ಯಮಕ್ಕೆ ಸೇರಿ ಪೂರ್ಣಾವಧಿ ಪಡಿಚಾಕರಿಯಲ್ಲಿ ತೊಡಗಿದ್ದಾರೆ. ಅಲ್ಲಿಂದ ಬಿಟ್ಟು ಇಲ್ಯಾಕೆ ಬರುವುದಾಯಿತು ಎಂದು ಸಮಜಾಯಿಷಿ ಕೊಟ್ಟು ಕೊಟ್ಟು ಹೈರಾಣಾಗಿದ್ದಾರೆ. ವೇತನದ ವಿಷಯ ಮಾತ್ರ ಬಾಯಿ ಬಿಡಲಾರರು. ದೇಶದ ಅತಿಶ್ರೇಷ್ಠ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಉದ್ಯಮಕ್ಕೆ ಸೇರಿದ ಅತಿಬುದ್ಧಿವಂತ ವರ್ಗಕ್ಕೆ ತಮ್ಮ ಸಾಮರ್ಥ್ಯಕ್ಕೆ ತಕ್ಕದಾದ ಕೆಲಸ ಕೊಡುತ್ತಿಲ್ಲವೆಂಬ ಅಸಮಾಧಾನವಿದೆ. ಇವರಿಗೆ ಓದಿನಲ್ಲಿದ್ದ ಅಪಾರ ಶೃದ್ಧೆ ಕೆಲಸದಲ್ಲಿ ಏಕಿಲ್ಲವೆಂಬುದು ಕೆಲಸ ಕೊಟ್ಟವನ ಚಿಂತೆ.
ಏನೇ ಆದರೂ ನನ್ನಂತಹ ಕುಗ್ರಾಮದ ಹಿನ್ನೆಲೆಯಿಂದ ಬಂದ ಬಡ ಪುರೋಹಿತರ ಮಾಣಿಯನ್ನು ಫಾರಿನ್ನೆಂಬ ಫಾರಿನ್ನಿಗೆ ಕಳುಹಿಸಿದ್ದು ಸಾಫ್ಟ್ವೇರ್ ಉದ್ಯಮವೇ. ಅಪ್ಪಯ್ಯನ ಸೊಸೈಟಿ ಸಾಲ ತೀರಿ ಬಹಳೇ ದಿನಗಳಾದವು. ತಲೆಮಾರುಗಳಷ್ಟು ಹಳತಾದ ಗೆದ್ದಲು ಹಿಡಿದಿದ್ದ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಅಪ್ಪಯ್ಯನಿಗೂ ಊರಲ್ಲೆಲ್ಲ ಕೊಂಚ ಜಾಸ್ತಿಯೇ ಗೌರವ ಸಿಗುತ್ತಿದೆ. ಸೌಮ್ಯಳಂತಹ ಸುಂದರಿಯ ರೊಕ್ಕಸ್ತ ಅಪ್ಪ ಮಗಳನ್ನು ಕೊಡಲು ಮುಂದಾಗಿದ್ದು ಇತ್ತೀಚಿನ ಬೆಳವಣಿಗೆ. ಜಾಗತೀಕರಣದ ಪರಮ ಬೆಂಬಲಿಗರಾದ ನನ್ನ ಸ್ನೆಹಿತರುಗಳು ದೇಶದಲ್ಲಿ ಸಾಮಾಜಿಕ ಸಮತೋಲನ ಏರ್ಪಡುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ವಾದ ಹೂಡಿದ್ದಾರೆ. ಈ ಸಮತೋಲನಕ್ಕೆ ನನ್ನ ಬ್ಯಾಂಕ್ ಬ್ಯಾಲೆನ್ಸ್ನಿಂದ ನೇರ ಸಂಬಂಧವಿರುವುದು ಬಹಿರಂಗ ಸತ್ಯವಾದರೂ ಹೇಳುವಂತಿಲ್ಲ.
ಸಿನಿಪರದೆಯ ಮೇಲೆ ಚಿತ್ರಗಳು ಓಡುತ್ತಿದ್ದರೂ ನನ್ನ ತಲೆಯಲ್ಲಿ ಬೇರೆಯದೇ ಚಿತ್ರಗಳು ಸುಳಿದಾಡುತ್ತಿವೆ. ನನ್ನ ಸುದೀರ್ಘ ಮೌನ ಸೌಮ್ಯಳಿಗೆ ಬೇಸರ ತರಿಸಿರಬೇಕು. ತಲೆಯ ಮೇಲೆ ಮೆಲ್ಲನೆ ಮೊಟಕಿ “ಏನಾಯಿತು?” ಎಂದಳು.
- - - - - - - - - - - - - - - - - - - - - - -
ತಲೆಯ ಮೇಲೆ ಏನೋ ಧೊಪ್ಪನೆ ಬಿದ್ದಂತಾಗಿ ಎಚ್ಚರವಾಯಿತು. ಫ್ಯಾನಿನ ಮೊರೆತ ನಿರಾತಂಕವಾಗಿ ಸಾಗಿತ್ತು. ಕಿಟಕಿಯಿಂದ ಎಸೆದ ಎರಡು ಪತ್ರಗಳು ಮುಖದ ಮೇಲೆಯೇ ಬಿದ್ದಿದ್ದವು. ಎದ್ದು ಕುಳಿತೆ. ಕನಸಿನಿಂದ ಹೊರಕ್ಕೆ ಬರುವುದೇ ಕಷ್ಟವಾಯಿತು. ಒಂದು ಲೋಟ ತಣ್ಣನೆಯ ನೀರನ್ನು ಗಟಗಟನೆ ಗಂಟಲಿಗಿಳಿಸಿದೆ. ಅಸ್ತವ್ಯಸ್ತವಾಗಿದ್ದ ಪಂಚೆಯನ್ನು ಬಿಗಿದು ಕಟ್ಟಿದೆ. ಕೆಳಗಡೆ ಓನರತಿ ಸಾವಿತ್ರಮ್ಮ ಪಕ್ಕದ ಮನೆ ಹೆಂಗಸಿನೊಡನೆ ಜಗಳ ಕಾಯುತ್ತಿದ್ದಳು. ಪತ್ರಗಳನ್ನು ಬಿಡಿಸಿ ನೋಡಿದೆ. ಒಂದು ವಿಷಾದ ಪತ್ರ. ಇನ್ನೊಂದು ಇನ್ಯಾವುದೋ ಕಂಪನಿಯಿಂದ ಸಂದರ್ಶನಕ್ಕೆ ಕರೆ. ನನ್ನ ಬಗ್ಗೆ ನನಗೇ ಕನಿಕರವೆನಿಸಿತು.
ಕನಸಿನಲ್ಲಿ ಕಂಡ ಆ ಹುಡುಗಿಯನ್ನು ಎಲ್ಲೋ ನೋಡಿದ್ದೇನೆಂಬ ಭಾವ. ಅರೆರೆ ಅವಳು ಇಲ್ಲಿಯೇ ಬೆಳಗಿನ ಹೊತ್ತು ಹಾಲು ಮಾರುವ ಹುಡುಗಿ! ಥತ್ ಎಂದುಕೊಂಡು ಎದ್ದು ಬಾತ್ರೂಮಿನ ಕಡೆ ನಡೆದೆ. ಬಾತ್ರೂಮಿನ ಚಿಕ್ಕ ಕಿಟಕಿಯಿಂದ ಸಾವಿತ್ರಮ್ಮನ ಟಿವಿಯಲ್ಲಿನ ಆರ್.ಕೆ.ಜೈನರ ಭವಿಷ್ಯ ಕಾರ್ಯಕ್ರಮ ಕೇಳಿ ಬರುತ್ತಿತ್ತು. “ಎರಡನೇ ಮನೆ ಯಲ್ಲಿ ರಾಹು, ಮೂರನೇ ಮನೆಯಲ್ಲಿ ಕೇತು, ನಾಲ್ಕನೇ ಮನೆಯಲ್ಲಿ ಶನಿ . . . . . .” ನಾನು ಲೆಕ್ಕ ಹಾಕಿಕೊಂಡೆ. ನಾಲ್ಕನೇ ಕೋಣೆಯಲ್ಲಿರುವುದು ನಾನೇ. ಅಂದರೆ ನನ್ನ ಕೋಣೆಯಲ್ಲಿಯೇ ಶನಿ ಇರಬಹುದೇ? ಅಥವಾ ನಾನೇ ಶನಿಯೇ?
ನಾಳಿದ್ದಿನ ಸಂದರ್ಶನಕ್ಕೆ ಏನಾದರೂ ತಯಾರಿ ನಡೆಸಬೇಕಾಗಿದೆ. ಎಲ್ಲೆಡೆ ತಡಕಾಡಿ ಚಿಲ್ಲರೆ ಒಟ್ಟುಮಾಡಿದೆ. ಪಕ್ಕದ ದರ್ಶಿನಿಯಲ್ಲಿ ಚಹದ ಋಣ ಇತ್ತೆಂದು ತೋರುತ್ತದೆ. ಮೆಟ್ಟಿಲಿಳಿಯತೊಡಗಿದೆ. “ಎರಡನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ . . . .” ಇನ್ನೂ ಸಾಗಿತ್ತು. ಇವರಿಗೆಲ್ಲ ಅವರವರ ಮನೆಯಲ್ಲಿ ಇರಲಿಕ್ಕೆ ಏನು ಧಾಡಿ ಎಂದು ಬೈದುಕೊಳ್ಳುತ್ತಾ ದರ್ಶಿನಿಯತ್ತ ಹೆಜ್ಜೆ ಹಾಕಿದೆ. *. . . . . * . . . . . * . . . . . * . . . . . * . . . . . .*



Thursday, May 15, 2008

ಚುನಾವಣಾ ಪ್ರಹಸನ, ಒಂದು ಅವಲೋಕನ

ನಿಮಗೆ ಆಸಕ್ತಿ ಇರಲಿ ಬಿಡಲಿ ದಿನಪತ್ರಿಕೆಗಳಲ್ಲಿ, ಸುದ್ಧಿವಾಹಿನಿಗಳಲ್ಲಿ ಚುನಾವಣಾ ಸುದ್ಧಿಗಳನ್ನೇ ಓದಬೇಕಾಗಿದೆ. ಸಿದ್ಧಾಂತ, ಪಕ್ಷ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟ ನೇತಾಗಳ ಹಾರಾಟಕ್ಕೆ ಮೂಕಪ್ರೇಕ್ಷಕನಾಗಿರುವ ಪ್ರಜೆಯೆಂಬ ಶತ ದಡ್ಡ ಪ್ರಭು. ಒಬ್ಬರ ಮೇಲೊಬ್ಬರ ಆರೋಪ, ರೆಡ್ ಹ್ಯಾಂಡ್ ಆಗಿ ಜಾತಿ ರಾಜಕೀಯವನ್ನೇ ಮಾಡುತ್ತಾ ''ಜಾತ್ಯತಿತ'' ಎಂಬ ಹೆಸರಿಟ್ಟುಕೊಂಡು ಓಡಾಡುತ್ತಿರುವ ಅಧಿಕಾರ ದಾಹಿಗಳು.ಎಂಥ ಅದ್ಭುತ ಕಥೆಯಾದರೂ ಒಂದಲ್ಲ ನಾಲ್ಕು ಬಾರಿ ಓದಿದಾಗ ಬೇಸರ ತರಿಸಿಬಿಡುತ್ತದೆ. ರೋಚಕ ಸಿನಿಮಾವಾದರೂ ಅಷ್ಟೆ. ಆದರೆ ನೋಡಿದ ನಾಟಕವನ್ನೇ ಮತ್ತೆ ಮತ್ತೆ ಉತ್ಸಾಹದಿಂದ ನೋಡಲು ಮಾತ್ರ ಕನ್ನಡಿಗರಿಗೆ ಬೇಸರವಿಲ್ಲ. ದೇವೇಗೌಡರ ಅಮೋಘ ''ರಕ್ತಕಣ್ಣೀರನ್ನು'' ಮಗದೊಮ್ಮೆ ನೋಡಲು ಅಣಿಯಾಗುತ್ತಿರುವ ಕನ್ನಡದ ಜನತೆಯೇ ಇದಕ್ಕೆ ಸಾಕ್ಷಿ. ದೇವೇಗೌಡರೇ ಹೇಳಿದಂತೆ ಈ ಸಲವೂ ಅವರೇ ಕಿಂಗ್ ಮೇಕರ್ ಆದರೆ ನಾವೆಲ್ಲ ಮೂಗಿನ ಮೇಲೆ ಬೆರಳಿಡುವ ಅಗತ್ಯವಿಲ್ಲ. ಮೂಗಿನ ಒಳಗೆ ಇಟ್ಟರಾಯಿತು. ಅದು ನಮ್ಮ ಖರ್ಮ.
ಟೀವಿ ಚಾನೆಲ್ ಗಳು, ದಿನಪತ್ರಿಕೆಗಳೇನೂ ಹಿಂದೆ ಬಿದ್ದಿಲ್ಲ.ಅವೂ ಯಾವುದಾದರೊಂದು ಪಕ್ಷದೊಂದಿಗೆ ಗುರುತಿಸಿಕೊಂಡಿವೆ. ಜನರ ಹಾದಿ ತಪ್ಪಿಸಲೊಂದು ದಿನಕ್ಕೊಂದು ಸರ್ವೇ. ಪತ್ರಿಕೆಗಳಂತೂ ಇಂಥಹ ಪಕ್ಷಕ್ಕೇ ಓಟು ನೀಡಿ ಎಂದು ಪರೋಕ್ಷವಾಗಿ ಜನರನ್ನು ಪ್ರಚೋದಿಸುವ ಕಾರ್ಯದಲ್ಲಿ ಮುಳುಗಿವೆ. ಎಲ್ಲರಿಗೂ ತಮ್ಮ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುವ ಭ್ರಷ್ಟ ಉದ್ದೇಶ.ಒಂದು ಕಾಲದಲ್ಲಿ ಸಂತೋಷ್ ಕುಮಾರ್ ಗುಲ್ವಾಡಿಯವರ ಸಂಪಾದಕೀಯಗಳನ್ನು ಅತ್ಯಂತ ಹರಿತವಾದವುಗಳೆಂದು ಪರಿಗಣಿಸಲಾಗುತ್ತಿತ್ತು. ಅವರು ತಮ್ಮ ಮಾಮೂಲಿ ಶೈಲಿಯಲ್ಲಿ, ಯಾರ ಹೆಸರನ್ನೂ ಪ್ರಸ್ತಾಪಿಸದೆ, ಕೆಂಪು ಪಟ್ಟಿ ಆಡಳಿತ ಶಾಹಿ, ಪಟ್ಟಭದ್ರ ಹಿತಾಸಕ್ತಿಗಳು, ನಿರ್ಲಜ್ಜರು ಹೀಗೆ ಮುಂತಾದ ನುಡಿಗಟ್ಟುಗಳನ್ನು ಪ್ರಯೋಗಿಸಿ ರಾಜಕಾರಣಿಗಳನ್ನು ಹಳಿ(ಣಿ)ಯುತ್ತಿದ್ದರು. ಅದು ತಮ್ಮದೇ ದನಿಯೆಂದು ಜನ ಪುಳಕಿತರಾಗುತ್ತಿದ್ದರು. (ನಾವು ಚಿಕ್ಕವರಾಗಿದ್ದಾಗ ಗುಲ್ವಾಡಿಯವರ ಬರಹಗಳನ್ನೇ ಭಾಷಣ ಬಿಗಿದು ಶಾಲೆಯಲ್ಲಿ ಬಹುಮಾನ ಗಿಟ್ಟಿಸುತ್ತಿದ್ದೆವು.) ಈಗಿನ ದಿನಗಳಲ್ಲಿ ರವಿ ಬೆಳಗೆರೆಯಂಥವರು ಹನುಮೇಶಿ, ತಿಪ್ಪೇಶಿ ಇತ್ಯಾದಿಗಳ ಹೆಸರುಗಳನ್ನೇ ಬರೆದು ಇವರಿಷ್ಟು, ಅವರೆಷ್ಟು ಭ್ರಷ್ಟಾಚಾರ ಎಸಗಿದ್ದರೆಂದು ಅಂಕಿ ಅಂಶದೊಂದಿಗೆ ಬರೆದರೂ ಕ್ಯಾರೆ ಎನ್ನುವವರಿಲ್ಲ. ನಮಗೂ ಅಭ್ಯಾಸವಾಗಿ ಹೋಗಿದೆ. ಗಮನಿಸಿ ನೋಡಿದರೆ ನಮ್ಮಲ್ಲಿಯೇ ಭ್ರಷ್ಟ ರಕ್ತ ಹರಿಯುತ್ತಿದೆ. ನಮಗೂ ಜಾತಿ ಮುಖ್ಯ ನೋಡಿ. ನಮ್ಮವನು ಮಂತ್ರಿಯಾದರೆ ಯಾವುದಾದರೂಂದು ಬಗೆಯಲ್ಲಿ ಕೆಲಸಕ್ಕೆ (ವೈಯಕ್ತಿಕ) ಬರಬಹುದೆಂಬ ಆಸೆ. ನಮಗೆ ಊರಿಗೊ, ಪಟ್ಟಣಕ್ಕೊ ಕುಡಿಯುವ ನೀರಿನ ವ್ಯವಸ್ತೆ, ಒಂದು ಒಳ್ಳೆಯ ಶಾಲೆ, ಸುವ್ಯವಸ್ತಿತ ಆಸ್ಪತ್ರೆ ಇವ್ಯಾವುದೂ ಬೇಕಿಲ್ಲ. ನಮ್ಮ ಅಗತ್ಯಗಳೆಲ್ಲವೂ ತೀರಾ ವೈಯಕ್ತಿಕ ಮಟ್ಟದವು. ಓಟು ನೀಡುವವನಿಗೆ ದೂರದ್ರಷ್ಟಿಯ ಕೊರತೆ. ಓಟು ಹಾಕಿಸಿಕೊಳ್ಳುವವನ ದ್ರಷ್ಟಿಯಲ್ಲಿಯೇ ಧೂರ್ತತೆ. ಈ ಪ್ರಜೆ ಎಂಬವನೂ ಈ ರಾಜಕರಣಿಗಳಷ್ಟೇ ಭ್ರಷ್ಟ. ಬೀಚಿಯವರ ಆತ್ಮಕತೆಯಲ್ಲಿ ಓದಿದ ನೆನಪು. “ಒಳ್ಳೆಯವರು ಎನಿಸಿಕೊಂಡವರು ಇನ್ನೂ ಒಳ್ಳೆಯವರಾಗಿಯೇ ಇದ್ದಾರೆಂದರೆ ಅವರಿಗಿನ್ನೂ ಬ್ರಷ್ಟರಾಗುವ ಅವಕಾಶ ಒದಗಿ ಬಂದಿಲ್ಲ”. ನಮ್ಮನ್ನು ಆಳುತ್ತೇವಂತ ಹೊರಟ ಅವಿವೇಕಿಗಳ ದಂಡಿದೆಯಲ್ಲ..ಇವರು ಇಂತಹ ಅವಕಾಶ ಮೊದಲು ದಕ್ಕಿಸಿಕೊಂಡವರು. ಪ್ರಜೆಗೂ ಅವಕಾಶ ಸಿಕ್ಕಿದರೆ ಹರಿದುಕೊಳ್ಳುವ ಸುಪ್ತ ಆಸಕ್ತಿ ಇಲ್ಲವೇ? (ಇದು ಇಡೀ ಸಮಾಜಕ್ಕೆ ಸಾರಾಸಗಟಾಗಿ ಅನ್ವಯಿಸುವ ಮಾತಲ್ಲದಿದ್ದರೂ ಪ್ರಸ್ತುತ ವ್ಯವಸ್ಥೆಯಲ್ಲಿ ಜಿಜ್ನಾಸೆಗೊಳಪಡಬೇಕಾದ ಸಂಗತಿ..)
ಸಮಾಜದ ಸ್ವಾಸ್ತ್ಯ ಕಾಪಾಡಬೇಕಾದ ಕೆಳ ಮತ್ತು ಮೇಲ್ಮಧ್ಯಮ ವರ್ಗಗಳು ಬೇಜವಾಬ್ದಾರರಾಗಿದ್ದಾರೆ. ಲಾಗಾಯ್ತಿನಿಂದ ಇವರದು ಸಮಾಜದಲ್ಲಿ ಮೇಲಕ್ಕೇರುವ ನಿರಂತರ ಪ್ರಯತ್ನ. ಅದರಲ್ಲಿಯೇ ಮಗ್ನ. ವ್ಯವಸ್ತೆಯ ರಿಪೇರಿಗೆ ಯಾವತ್ತೂ ಸಮಯವಿಲ್ಲ. ಈಗ ಇವರದು ಹೊಸ ಮಂತ್ರ. ಹೇಗಾದರೂ ಮಾಡಿ ಮಕ್ಕಳನ್ನು ಸೊಫ್ಟವೇರ್ ಎಂಜಿನಿಯರ್ ಮಾಡಿ ಒಂದಷ್ಟು ವಿದೇಶಿ ಹಣದ ಗಂಟು ಭದ್ರ ಮಾಡಿಕೊಳ್ಳುವುದು. ಹೆಣ್ಣುಮಕ್ಕಳಾದರೆ ಇನ್ನೊಂದು ಸೊಫ್ಟವೇರ್ ಎಂಜಿನಿಯರ್ ಹುಡುಕಿ ಮದುವೆ ಮಾಡಿ ಕೊಟ್ಟರಾಯಿತು. ಬೀದರ ಮೂಲೆಯ ಹಳ್ಳಿಯಾದರೂ ಸರಿ ಮಲೆನಾಡಿನ ಕೊಂಪೆಯಾದರೂ ಸರಿ; ಮೇಷ್ಟ್ರು, ಶೆಟ್ರು, ಭಟ್ರು, ಗೌಡ್ರು ಹೀಗೆ ಎಲ್ಲ ಮಧ್ಯಮ ವರ್ಗಿಗಳ ಗುರಿಯೂ ಒಂದೇ.ಇವರಿಗೆ ಆರಿಸಿ ಬರುವವರು ಯಂಕ, ತಿಮ್ಮ ಯಾರಾದರೂ ಅಡ್ಡಿ ಇಲ್ಲ. ಯೋಗ್ಯ ಜನಪ್ರತಿನಿಧಿಗಳನ್ನು ಉತ್ಪಾದಿಸಬಲ್ಲ ಸಮೂಹವೇ ಜವಾಬ್ದಾರಿ ಮರೆತಾಗ ಎಲ್ಲಿಂದ ಉತ್ತಮ ನಾಯಕರನ್ನು ನಿರೀಕ್ಷಿಸೋಣ? ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ, ದಿನ ನಿತ್ಯದ ಬದುಕೇ ಸಮಸ್ಯೆ. ಹಣ ಹೆಂಡಕ್ಕೆ ಆಸೆಪಟ್ಟರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗಾಗಿ ಉತ್ತಮ ಸರ್ಕಾರ, ಸರ್ರ್ವಾಂಗೀಣ ಅಭಿವ್ರದ್ಧಿ ಇತ್ಯಾದಿ ಪದಗಳನ್ನು ಪ್ರಣಾಳಿಕೆಯಲ್ಲಿ ಓದಿ ನಕ್ಕುಬಿಡುವುದು ಒಳಿತು. ಮಧ್ಯಮ ವರ್ಗದ ಟಿಪಿಕಲ್ ಶೈಲಿಯದು. ಆಮೇಲೆ ವ್ಯವಸ್ತೆಗೆ ಬಯ್ಯುತ್ತ, ಗೊಣಗುತ್ತ ಅದರ ಜೊತೆಯಲ್ಲಿಯೇ ಏಗುವದು ಇದ್ದಿದ್ದೇ.

- ಚಿನ್ಮಯ